ಜೂನ್ 7ರವರೆಗೆ ಚಿತ್ರದುರ್ಗದಲ್ಲಿ 2 ದಿನಕ್ಕೊಮ್ಮೆ ಸಂಪೂರ್ಣ ಲಾಕ್ಡೌನ್
ಚಿತ್ರದುರ್ಗ, ಮೇ 26: ಚಿತ್ರದುರ್ಗ ಜಿಲ್ಲೆಯಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮೇ 26 ರಿಂದ ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ದಿನ ಬಿಟ್ಟು ಒಂದು ದಿನ, ಅಂದರೆ 2 ದಿನಕೊಮ್ಮೆ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ.
ವಾರಾಂತ್ಯದ ದಿನಗಳಾದ ಶನಿವಾರ ಮತ್ತು ಭಾನುವಾರಗಳಂದು ಸಂಪೂರ್ಣ ಲಾಕ್ಡೌನ್ ಇರುತ್ತದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19ಗೆ ಸಂಬಂಧಿಸಿದಂತೆ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 27, 29, 30 ಹಾಗೂ ಜೂನ್ 01, 03, 05 ಹಾಗೂ 06 ರಂದು ಜಿಲ್ಲೆಯಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಈ ದಿನಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಸೇವೆಗಳಿರುವುದಿಲ್ಲ ಎಂದು ತಿಳಿಸಿದರು.

ತರಕಾರಿ, ಹಣ್ಣು, ದಿನಸಿ ಅಂಗಡಿಗಳು ಇರುವುದಿಲ್ಲ. ಹಾಲಿನ ಉತ್ಪನ್ನಗಳು ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಇರುತ್ತದೆ.
ಮೇ 26, 28, 31 ಹಾಗೂ ಜೂನ್ 02 ಹಾಗೂ 04 ರಂದು ಬೆಳಗ್ಗೆ 6 ರಿಂದ 10 ರವೆರೆಗೆ ಸಂಪೂರ್ಣ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ. ಲಾಕ್ಡೌನ್ ವಿನಾಯಿತಿ ದಿನಗಳಂದು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸಂಪೂರ್ಣ ಲಾಕ್ಡೌನ್ ವಿಧಿಸಿರುವ ದಿನಗಳಂದು ಹಾಲಿನ ಉತ್ಪನ್ನಗಳ ಮಾರಾಟ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ವೈದ್ಯಕೀಯ ತುರ್ತು ಸೇವೆಗಳು, ಎಲ್ಲಾ ಆಸ್ಪತ್ರೆ, ಮೆಡಿಕಲ್ಸ್, ಪೆಟ್ರೋಲ್ ಬಂಕ್, ಇ-ಕಾಮರ್ಸ್, ತಿಂಡಿ ಮತ್ತು ಊಟ ಪಾರ್ಸೆಲ್ ಸೇವೆಗಳು, ಗೂಡ್ಸ್ ವಾಹನಗಳ ಸಂಚಾರ, ದಿನಸಿ ಪಾರ್ಸೆಲ್ ಸೇವೆಗಳು, ಸರ್ಕಾರದ ಮೇ 7 ಮತ್ತು ಮೇ 21ರಂದು ಇನ್ನಿತರೆ ಹೆಚ್ಚುವರಿ ಆದೇಶದಲ್ಲಿ ಉಲ್ಲೇಖಿಸಿರುವ ನಿರಂತರ ಉತ್ಪಾದನಾ ಕೈಗಾರಿಕೆ, ಉದ್ದಿಮೆಗಳು ಸೇವೆ ಪಡೆಯಬಹುದಾಗಿದೆ.
ಸಂಪೂರ್ಣ ಲಾಕ್ಡೌನ್ ಹೊರತಾದ ದಿನಗಳಲ್ಲಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮೇ 07 ಮತ್ತು ಮೇ 21ರಂದು ಇನ್ನಿತರೆ ಹೆಚ್ಚುವರಿ ಆದೇಶಗಳಲ್ಲಿ ಬೆಳಿಗ್ಗೆ 06 ರಿಂದ 10 ಗಂಟೆಯವರೆಗೆ ನಿರ್ಬಂಧಿಸಿರುವ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಆದೇಶದ ಜೊತೆಯಲ್ಲಿ ಈಗಾಗಲೇ ಸಿಆರ್ಪಿಸಿ 144 ರಡಿಯಲ್ಲಿ ಹೊರಡಿಸಿರುವ ನಿಷೇಧಾಜ್ಞೆ ಆದೇಶವು ಸಹ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
Recommended Video
ಆರ್ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ ಮಾತನಾಡಿ, 45 ವರ್ಷ ಮೇಲ್ಪಟ್ಟವರಿಗೆ ಹಾಕಿಕೊಂಡ ಗುರಿಯಲ್ಲಿ ಶೇ.77 ರಷ್ಟು ಸಾಧನೆ ಮಾಡಲಾಗಿದೆ. ಈಗ 18 ರಿಂದ 44 ವರ್ಷದವರಿಗೂ ಲಸಿಕೆ ಹಾಕಲಾಗುತ್ತಿದ್ದು, 40 ಆದ್ಯತಾ ಗುಂಪುಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಶೀಲ್ಡ್ 28,500 ಲಸಿಕೆಗಳು ಲಭ್ಯವಿದ್ದು, ಲಸಿಕಾ ಕೇಂದ್ರದಲ್ಲಿ ಲಸಿಕೆಯನ್ನು ನೀಡಲಾಗುತ್ತದೆ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಾಲಾಕ್ಷ ಉಪಸ್ಥಿತರಿದ್ದರು.












Click it and Unblock the Notifications