ಸತೀಶ್ ಜಾರಕಿಹೊಳಿ ಕ್ಷಮೆ ಬೇಕಿಲ್ಲ, ಚರ್ಚೆಯ ಅಗತ್ಯವಿಲ್ಲ: ಸಿಎಂ ಬೊಮ್ಮಾಯಿ
ಚಿತ್ರದುರ್ಗ ನವೆಂಬರ್ 9: ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹಿಂದೂ ಪದದ ಬಗ್ಗೆ ನೀಡಿರುವ ಹೇಳಿಕೆ ವಿಚಾರ ಭಾರಿ ವಿವಾದ ಹುಟ್ಟುಹಾಕಿದೆ. ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಕ್ಷಮೆಯೂ ಬೇಕಿಲ್ಲ, ಈ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಕಾರ್ಯಕ್ರಮಕ್ಕೆ ತೆರಳುವಾಗ ನಿರಗುಂದ ಗ್ರಾಮದಲ್ಲಿ ಮಾತನಾಡಿದ ಸಿಎಂ, ಸತೀಶ್ ಜಾರಕಿಹೊಳಿ ಶತಮಾನಗಳಿಂದ ಸ್ಥಾಪಿತವಾಗಿದ್ದ ನಂಬಿಕೆಗಳಿಗೆ ಕೊಡಲಿ ಪೆಟ್ಟು ಕೊಡುವ ಕೆಲಸ ಮಾಡಿದ್ದಾರೆ. ಜನರ ನಂಬಿಕೆಗೆ ಘಾಸಿ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಕ್ಷಮೆಯೂ ಬೇಕಿಲ್ಲ, ಚರ್ಚೆ ಮಾಡುವುದು ಅಗತ್ಯವಿಲ್ಲ. ಇದೆಲ್ಲವನ್ನೂ ಮುಂದೆ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.
Recommended Video

ಇನ್ನು ಚಿತ್ರದುರ್ಗದ ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ ಕಂದಾಯ ಇಲಾಖೆಯಿಂದ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ. ಮುರುಘಾ ಮಠದ ಬಗ್ಗೆ ಒಂದು ಅರ್ಜಿ ಬಂದಿತ್ತು. ಆಡಳಿತಾಧಿಕಾರಿ ನೇಮಿಸಿ ಎಂದು ಮನವಿ ಮಾಡಲಾಗಿತ್ತು. ಹೀಗಾಗಿ ನೇಮಕ ಪೂರ್ವದಲ್ಲಿ ಅಧಿಕೃತವಾಗಿ ವರದಿ ಬೇಕಿದೆ. ಹೀಗಾಗಿ ನ್ಯಾಯ ಸಮ್ಮತವಾದ ಪ್ರಕ್ರಿಯೆ ಮಾಡುತ್ತಿದ್ದೇವೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾವು ಏನು ಹೇಳಲಾಗದು ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ
ಇನ್ನು ನಿನ್ನೆ ನವೆಂಬರ್8ರಂದು ಉಡುಪಿಯಲ್ಲಿ ಸತೀಶ್ ಸತೀಶ್ ಜಾರಕಿಹೊಳಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ, ಸತೀಶ್ ಜಾರಕಿಹೊಳಿ ಅರೆ ಬರೆ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೇ ಮಾತನಾಡಿದ್ದಾರೆ. ಸತೀಶ್ ಜಾರಕಿಹೊಳಿ ಅಲ್ಪಸಂಖ್ಯಾತ ಮತ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ ಸತೀಶ್ ಜಾರಕಿಹೊಳಿ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ. ಕ್ಷೋಭೆ ಭರಿತ ಹೇಳಿಕೆ ಎಂಬುವುದು ದೇಶ ದ್ರೋಹದ ಕೆಲಸ ಎಂದಿದ್ದರು.

ಸತೀಶ್ ಜಾರಕಿಹೊಳಿ ಅವರದು ಪೂರ್ವಗ್ರಹ ಹೇಳಿಕೆ
ಅಲ್ಲದೇ ಸತೀಶ್ ಜಾರಕಿಹೊಳಿ ಮಾತಿಗೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಮೌನ ಯಾಕೆ..? ನಿಮ್ಮ ಮೌನ ಸತೀಶ್ ಜಾರಕಿಹೊಳಿ ಮಾತಿಗೆ ಸಮ್ಮತಿನಾ..? ಸತೀಶ್ ಜಾರಕಿಹೊಳಿ ತಮ್ಮ ಹೇಳಿಕೆಯ ಬಗ್ಗೆ ಇನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಹುಳಿ ಹಿಂಡುವ ಕೆಲಸವನ್ನು ಮಾಡುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪ ಮಾತ್ರದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸುತ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾ ಬದ್ಧವಾದ ಹೇಳಿಕೆ. ಹಿಂದೂಗಳ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದು ಸಿಎಂ ಹೇಳಿದ್ದರು.

ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಒಪ್ಪಲ್ಲ ಎಂದ ಡಿಕೆಶಿ
ಇನ್ನು ಕಾಂಗ್ರೆಸ್ ನಾಯಕರು ಸಹ ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಖಂಡಿಸಿದ್ದಾರೆ. ಹಿಂದೂ ಪದದ ಕುರಿತು ಸತೀಶ್ ಜಾರಕಿಹೊಳಿ ಯಾವ ಪದಕೋಶದಲ್ಲಿ ನೋಡಿ ಹೇಳಿದ್ದಾರೆ ಗೊತ್ತಿಲ್ಲ. ಅವರ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ ಸರ್ವ ಜನಾಂಗ ಸರ್ವ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಕಾಂಗ್ರೆಸ್ ಸಿದ್ಧಾಂತ. ಸತೀಶ್ ಜಾರಕಿಹೊಳಿ ಈ ರೀತಿ ಹೇಳಿರುವುದು ಸರಿಯಲ್ಲ. ಅವರ ಹೇಳಿಕೆಯನ್ನು ನಾವು ಒಪ್ಪಲ್ಲ, ಅದನ್ನು ಖಂಡಿಸುತ್ತೇವೆ. ಇಂತಹ ವೈಯಕ್ತಿಕ ಹೇಳಿಕೆಯನ್ನು ಸಹಿಸಲು ಆಗಲ್ಲ. ಅವರು ಮನೆಗಳಲ್ಲಿ ಏನು ಬೇಕಾದರೂ ಮಾತನಾಡಿಕೊಳ್ಳಲಿ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾತನಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದರು.

ತಪ್ಪು ಸಾಬೀತಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಸತೀಶ್ ಜಾರಕಿಹೊಳಿ
ಇನ್ನು ತಾವು ನೀಡಿರುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಇನ್ನು ದೃಢ ನಿಲುವು ಹೊಂಡಿದ್ದಾರೆ. ಹಿಂದೂ ಪದದ ಬಗ್ಗೆ ತಾವು ನೀಡಿರುವ ಹೇಳಿಕೆಯಲ್ಲಿ ತಪ್ಪಿದೆ ಎಂಬುದನ್ನು ಮೊದಲು ಸಾಬೀತು ಪಡಿಸಲಿ ಎಂದು ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ. ಅಲ್ಲದೇ ತಪ್ಪಿದೆ ಎಂಬುದನ್ನು ನಾಯಕರು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ತಮ್ಮ ಹೇಳಿಕೆಯಲ್ಲಿ ತಮ್ಮ ಹೇಳಿಕೆಯಲ್ಲಿ ಯಾವುದೇ ಕೆಟ್ಟ ಉದ್ದೇಶವಿರಲಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಿದ್ದಾರೆ.












Click it and Unblock the Notifications