ಬಿ-ಫಾರಂ ಇಲ್ಲದೆ ನಾಮಪತ್ರ ಸಲ್ಲಿಸಿ ಕಾಂಗ್ರೆಸ್ ಟಿಕೆಟ್ ಗಾಗಿ ಬೆದರಿಕೆ
ಚಿತ್ರದುರ್ಗ, ಏಪ್ರಿಲ್ 17: ರಾಜ್ಯ ವಿಧಾನಸಭೆ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಇಂದು ಕೋಟೆ ನಾಡು ಚಿತ್ರದುರ್ಗದಲ್ಲಿ ಮೊದಲ ನಾಮಪತ್ರವನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿ. ಶಿವು ಯಾದವ್ ಸಲ್ಲಿಸಿದ್ದಾರೆ. ಅಪಾರ ಅಭಿಮಾನಿಗಳೊಂದಿಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚುನಾವಣಾ ಅಧಿಕಾರಿಗಳಿಗೆ ಅವರು ನಾಮಪತ್ರ ಸಲ್ಲಿಸಿದರು. ಆದರೆ ವಿಶೇಷ ಎಂದರೆ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿಲ್ಲ. ಮತ್ತು ಬಿ-ಫಾರಂ ಕೂಡ ಕೊಟ್ಟಿಲ್ಲ. ಹೀಗಿದ್ದರೂ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಸಿ. ಶಿವು ಯಾದವ್, "ಕಾಡುಗೊಲ್ಲರು ಸಮಾಜದ ಮುಖ್ಯ ವಾಹಿನಿಗೆ ಯಾರೂ ಬಂದಿಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿನ್ನಡೆ ಅನುಭವಿಸಿದ ಸಮುದಾಯ ಇದಾಗಿದ್ದು, ಸನ್ಮಾನ್ಯ ಸಿದ್ದರಾಮಯ್ಯನವರು ನಮ್ಮನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುತ್ತಾರೆಂದು ಭಾವಿಸಿದ್ದೆವು. ಆದರೆ ಕಾಂಗ್ರೆಸ್ ಪಕ್ಷ ಟಿಕೆಟ್ ಬಿಡುಗಡೆ ಮಾಡಿದ್ದು ಪಟ್ಟಿಯಲ್ಲಿ ಕಾಡುಗೊಲ್ಲರಿಗೆ ಟಿಕೆಟ್ ಕೊಟ್ಟಿಲ್ಲ," ಎಂದಿದ್ದಾರೆ.
ಸಿದ್ದರಾಮಯ್ಯ ನಿರ್ಧಾರದಿಂದ ನೋವಾಗಿದೆ
"ಸಿದ್ದರಾಮಯ್ಯನವರ ನಿರ್ಧಾರದಿಂದ ಕಾಡುಗೊಲ್ಲ ಸಮಾಜಕ್ಕೆ ನೋವು ಉಂಟಾಗಿದೆ. ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಸಿದ್ದರಾಮಯ್ಯನವರು ಟಿಕೆಟ್ ಹಂಚಿಕೆಯಲ್ಲಿ ಕಾಡುಗೊಲ್ಲರನ್ನು ಕೈ ಬಿಟ್ಟಿದ್ದು ಅಥವಾ ಗುರುತಿಸದೆ ಇರುವುದು ನಮ್ಮ ದುರದೃಷ್ಟಕರ ಸಂಗತಿ. ಯಾಕೆಂದರೆ ಮಾತು ಎತ್ತಿದರೆ ಸಾಕು, ನಾವು ಕಾಡುಗೊಲ್ಲರ ಪರ ಇದ್ದೇವೆ ಎನ್ನುತ್ತಾರೆ. ಆದರೆ 224 ಕ್ಷೇತ್ರಗಳಲ್ಲಿ ಸ್ವಾಭಿಮಾನಕ್ಕಾದರೂ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ," ಎಂದು ಅವರು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿರುವ ಅವರು, "ಇದು ನ್ಯಾಯನಾ? ನಿಮ್ಮದು ಅಹಿಂದಾ ವರ್ಗನಾ? ಇದು ಇಡೀ ರಾಜ್ಯದ ಕಾಡುಗೊಲ್ಲರ ಅಸ್ಮಿತೆಯ ಪ್ರಶ್ನೆ," ಎಂದಿದ್ದಾರೆ.
ವೀರಶೈವರಿಗೆ 40, ಕಾಡುಗೊಲ್ಲರಿಗೆ 0!
ವೀರಶೈವರಿಗೆ 40 ಟಿಕೆಟ್ ಕೊಟ್ಟಿದ್ದೀರಿ. ಆದರೆ ರಾಜ್ಯದಲ್ಲಿ 40 ಲಕ್ಷ ಗೊಲ್ಲ / ಕಾಡುಗೊಲ್ಲ ಜನಸಂಖ್ಯೆ ಇದ್ದು, ಕನಿಷ್ಠ ನಾಲ್ಕು ಟಿಕೆಟ್ ಕಾಡುಗೊಲ್ಲರಿಗೆ ಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.
ಈಗಾಗಲೇ ನಾನು ಕಾಂಗ್ರೆಸ್ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸಿದ್ದೇನೆ. 23ರವರೆಗೆ ಕಾದು ನೋಡುತ್ತೇವೆ. ನಿಮ್ಮ ನಿರ್ಧಾರವನ್ನ ಬದಲಾಯಿಸಿಕೊಳ್ಳಿ. ಒಂದೊಮ್ಮೆ ನಿರ್ಧಾರ ಬದಲಾಯಿಸದಿದ್ದರೆ ನಮ್ಮ ನಿರ್ಧಾರವನ್ನು ಕಾಡುಗೊಲ್ಲ ಸಮಾಜದ ಮುಖಂಡರು, ಹಿರಿಯರು , ಕಿರಿಯರು , ಬುದ್ಧಿಜೀವಿಗಳು, ಪ್ರಗತಿಪರ ಸಂಘಟನೆಗಳು ಸೇರಿ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.
40 ಕ್ಷೇತ್ರಗಳಲ್ಲಿ ನಿರ್ಣಾಯಕ
ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿರಾ, ಚಿಕ್ಕನಾಯಕನಹಳ್ಳಿ, ಹಿರಿಯೂರು, ಹೊಳಲ್ಕೆರೆ. ಅರಸೀಕೆರೆ, ಕೂಡ್ಲಿಗಿ ಇನ್ನೂ ಮುಂತಾದ ಕಡೆಗಳಲ್ಲಿ ಕಾಡುಗೊಲ್ಲರು ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜ್ಯದ 40 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹಣೆಬರಹ ಬರೆಯುವ ಸಾಮರ್ಥ್ಯ ಇದೆ. ನಿಮ್ಮ ನಿರ್ಧಾರ ಕೈಗೊಳ್ಳಿ ಎಂದು ಕಾಂಗ್ರೆಸ್ ಪಕ್ಷವನ್ನು ಅವರು ಒತ್ತಾಯಿಸಿದ್ದಾರೆ.
ನಾಮಪತ್ರ ಸಲ್ಲಿಸುವ ಮುನ್ನ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಮೆರವಣಿಗೆ ಸಾಗಿ, ಸಾಮಾಜಿಕ ಹರಿಕಾರ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ನಂತರ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಘಟಕದ ಮಾರ್ಗವಾಗಿ ನಗರದ ರಸ್ತೆಗಳಲ್ಲಿ ಸಾವಿರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಜೊತೆ ತೆರಳಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಸಿಡಿದೆದ್ದ ಕಾಡುಗೊಲ್ಲರು
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತವಾಗಿರುವ ಕಾಡುಗೊಲ್ಲರು ಸಾಮಾಜಿಕ ಜಾಲತಾಣದಲ್ಲಿ ಸಿಡಿದೆದ್ದಿದ್ದಾರೆ. ಬುಡಕಟ್ಟು ಜನಾಂಗ ಹೊಂದಿರುವ ಕಾಡುಗೊಲ್ಲರು ಚಿತ್ರದುರ್ಗ ಮತ್ತು ತುಮಕೂರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ನೆಟಿಜನ್ ಗಳು ನೆನಪಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಡಾ. ಸಾಸಲು ಸತೀಶ್ ನವರಿಗೆ ಟಿಕೆಟ್ ತಪ್ಪಿಸಿ, ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಿರುವುದು ಯಾವ ನ್ಯಾಯ? ಎಂದು ಟಿ.ಬಿ. ಜಯಚಂದ್ರರನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ.
ಇದರ ಜೊತೆಗೆ ಹೆಚ್. ಆಂಜನೇಯ, ಡಿ. ಸುಧಾಕರ್ ನವರನ್ನೂ ಕಾಡುಗೊಲ್ಲರು ಪ್ರಶ್ನಿಸಿದ್ದು, ಇವರಿಗೆಲ್ಲಾ ಗೆಲುವಿಗೆ ಕಾಡುಗೊಲ್ಲ ಮತಗಳೇ ನಿರ್ಣಾಯಕವಾಗಿವೆ. ಒಂದು ವೇಳೆ ಸನ್ಮಾನ್ಯ ಟಿ.ಬಿ. ಜಯಚಂದ್ರ ಅವರು ತಮ್ಮ ನಿರ್ಧಾರ ಬದಲಿಸದಿದ್ದಲ್ಲಿ ತಂದೆ ಮತ್ತು ಮಗನಿಗೆ ಈ ಬಾರಿ ಸೋಲು ಖಚಿತ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಡುಗೊಲ್ಲ ಯುವಕರು ಆಕ್ರೋಶ ವ್ತಕ್ತಪಡಿಸಿದ್ದಾರೆ.
ಅಂದಹಾಗೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್.ಎ ಶಣ್ಮುಗಪ್ಪ ಅವರಿಗೆ ಟಿಕೆಟ್ ನೀಡಿದೆ.