ಚಿತ್ರದುರ್ಗ ನಗರಕ್ಕೆ ಕುಡಿಯಲು ಭದ್ರಾ ನೀರು ಪೂರೈಕೆ
ಚಿತ್ರದುರ್ಗ, ಸೆಪ್ಟೆಂಬರ್ 22 : ಚಿತ್ರದುರ್ಗ ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಭದ್ರಾ ಜಲಾಶಯದಿಂದ ಶಾಂತಿ ಸಾಗರಕ್ಕೆ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಒಪ್ಪಿಗೆ ನೀಡಿದೆ.
ಚಿತ್ರದುರ್ಗ ನಗರಸಭೆ ಅಧ್ಯಕ್ಷ ಮಂಜುನಾಥ ಗೊಪ್ಪೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಈ ಬಗ್ಗೆ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರನ್ನು ಭೇಟಿ ಮಾಡಿ ಜಲಾಶಯಕ್ಕೆ ನೀರು ಹರಿಸಲು ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದರು.

ಚಿತ್ರದುರ್ಗ ಜಿಲ್ಲಾಧಿಕಾರಿಗಳು ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅಚ್ಚುಕಟ್ಟು ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ನಗರದ ನೀರಿನ ಸಮಸ್ಯೆ ಪರಿಗಣಿಸಿ ಶಾಂತಿ ಸಾಗರಕ್ಕೆ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಒಪ್ಪಿಗೆ ನೀಡಿದೆ.
'ಶನಿವಾರದಿಂದ ಶಾಂತಿ ಸಾಗರಕ್ಕೆ ನೀರು ಹರಿಸುತ್ತೇವೆ. ಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 20 ಅಡಿ ನೀರು ಬೇಕಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಪರಿಗಣಿಸಿ ನೀರು ಹರಿಸಲು ಒಪ್ಪಿಗೆ ಕೊಟ್ಟಿದ್ದೇವೆ' ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
ಶನಿವಾರ ಜಲಾಶಯಕ್ಕೆ ನೀರು ಬಂದರೂ ಜಾಕ್ ವೆಲ್ಗೆ ನೀರು ಸಿಗುವಂತಾಗಲು ಒಂದೆರಡು ದಿನ ಬೇಕಾಗುತ್ತದೆ. ಹೊಸ ನೀರು ಹರಿದುಬರುವುದರಿಂದ ನೀರು ತಿಳಿಯಾಗಲು ಕನಿಷ್ಠ ನಾಲ್ಕು ದಿನ ಬೇಕು. ಅಷ್ಟರಲ್ಲಿ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಿ ನಗರಕ್ಕೆ ನೀರು ಪೂರೈಕೆ ಮಾಡಲು ನಗರಸಭೆ ಸಿದ್ಧತೆ ನಡೆಸಿದೆ.












Click it and Unblock the Notifications