ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ಮಾದರಿ ರಾಜ್ಯ: ಬಿಎಸ್ವೈ
ಚಿತ್ರದುರ್ಗ, ಜನವರಿ 10: ಜಾತಿಯ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ರಾಜ್ಯಕ್ಕೆ ಬೇಕೆ ಎಂದು ಯಡಿಯೂರಪ್ಪ ಅವರು ಪ್ರಶ್ನಿಸಿದ್ದಾರೆ.
ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಆಯೋಜಿಸಿದ್ದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡಲಾಗುವುದು ಎಂದರು.
ಕೇಂದ್ರದ ಅನುದಾನವನ್ನು ಸಿದ್ದರಾಮಯ್ಯ ನುಂಗಿದ್ದಾರೆ: ಅಮಿತ್ ಶಾ
ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ಬೇಸರಗೊಂಡಿದ್ದಾರೆ, ಆಕ್ರೋಶಗೊಂಡಿದ್ದಾರೆ ಅವರೆಲ್ಲಾ ಈ ಬಾರಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಭಾರಿ ಕರತಾಡನ ಮಾಡುವ ಮೂಲಕ ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಅಧಿಕಾರಿಗಳು ಸೋಮಾರಿಗಳಾಗಿದ್ದಾರೆ, ಸರ್ಕಾರವೇ ಅವರನ್ನು ಭ್ರಷ್ಟರನ್ನಾಗಿಸಿದೆ, ವರ್ಗಾವಣೆ ಹೆಸರಲ್ಲಿ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಯಡಿಯೂರಪ್ಪ ಅವರು ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಆಗಿರುವ ಕೊಲೆ, ಅತ್ಯಾಚಾರ, ಅಪಹರಣ ಪ್ರಕರಣಗಳ ಲೆಕ್ಕ ಒಪ್ಪಿಸಿದರು.
ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬಿಜೆಪಿಯ ಈ ಪರಿವರ್ತನಾ ಯಾತ್ರೆ ಕಾಂಗ್ರೆಸ್ ಅನ್ನು ರಾಜ್ಯದಿಂದ ಕಿತ್ತೊಗೆಯಲಿದೆ ಮುಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ನೀವೆಲ್ಲರೂ ಯಡಿಯೂರಪ್ಪ ಅವರನ್ನು ನೋಡಲಿದ್ದೀರಿ ಎಂದರು.
ಪರಿವರ್ತನಾ ಯಾತ್ರೆಗೆ ಮುಂಚೆ ಬಿ.ಎಸ್.ಯಡಿಯೂರಪ್ಪನವರು ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿ ಡಾ|| ಶ್ರೀ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದರು. ಪರಿವರ್ತನಾಯಾತ್ರೆ ನಡೆಸುತ್ತಿರುವ ಯಡಿಯೂರಪ್ಪನವರಿಗೆ ಯಶಸ್ಸು ಸಿಗಲೆಂದು ಶ್ರೀಗಳು ಹರಸಿದರು.