ಜನಪ್ರತಿನಿಧಿಗಳ ಸಮಾವೇಶ: ಜೂನ್ 18ಕ್ಕೆ ಚಿತ್ರದುರ್ಗಕ್ಕೆ ಜೆ. ಪಿ. ನಡ್ಡಾ
ಚಿತ್ರದುರ್ಗ, ಜೂನ್ 12 : "ಜೂನ್ 18ರಂದು ಚಿತ್ರದುರ್ಗದಲ್ಲಿ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಿಂದ ಗೆದ್ದಿರುವ ಜನಪ್ರತಿನಿಧಿಗಳ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಉದ್ಘಾಟಿಸಲಿದ್ದಾರೆ" ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿ ಸಚಿವರು, "ರಾಜ್ಯದಲ್ಲಿ 6 ಸಾವಿರ ಕಾರ್ಯಕರ್ತರು ಬಿಜೆಪಿ ಪ್ರತಿನಿಧಿಗಳಾಗಿ ಸ್ಥಳೀಯ ಸಂಸ್ಥೆಗಳಗೆ ಆಯ್ಕೆಯಾಗಿದ್ದಾರೆ. ಮುರುಘಾ ಮಠದ ಅನುಭವ ಮಂಠಪದಲ್ಲಿ ರಾಜ್ಯಮಟ್ಟದ ಈ ಸಮಾವೇಶವನ್ನುಆಯೋಜಿಸಲಾಗಿದೆ. ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಸದಸ್ಯರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಸಚಿವರು ಮಾಹಿತಿ ನೀಡಿದರು.
ಸಿದ್ದರಾಮಯ್ಯ ಭಸ್ಮಾಸುರ ಇದ್ದಂಗೆ, ಕೈ ಇಟ್ರೆ ಭಸ್ಮ; ಶ್ರೀರಾಮುಲು
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಮತ್ತು ಕೇಂದ್ರದ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಪಕ್ಷದ ಸಂಘಟನೆ ಮತ್ತು ಸರಕಾರದ ಯೋಜನೆಗಳನ್ನು ಜನರ ಮುಂದೆ ಕೊಂಡೊಯ್ಯುವ ಬಗ್ಗೆ ಚರ್ಚೆ ನಡೆಯಲಿದೆ" ಎಂದು ಸಚಿವರು ಮಾಹಿತಿ ಕೊಟ್ಟರು.
ಪರಿಷತ್ತಿನ ನಾಲ್ಕೂ ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಮೋದಿಗೆ ಉಡುಗೊರೆ: ಮಹೇಶ್
ಕಾಂಗ್ರೆಸ್ ನಾಯಕರು ಬಿಜೆಪಿಗೆ
"ಬಿಜೆಪಿ ಸರಕಾರಗಳಿಂದ ದೇಶ ಹಾಗೂ ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭಾಗಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ದಿಕ್ಕು ದೆಸೆ ಇಲ್ಲದಂತಾಗಿದೆ. ಹಾಗಾಗಿ ಬೇರೆ ಬೇರೆ ಪಕ್ಷದ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ನಮ್ಮ ಭಾಗದಲ್ಲಿ ಹಿರಿಯ ನಾಯಕರಾದ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಯತ್ನಟ್ಟಿ ಗೌಡರು ಸೇರಿದಂತೆ ಹಲವಾರು ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ" ಎಂದು ಬಿ. ಶ್ರೀರಾಮುಲು ಹೇಳಿದರು.
ಇತಿಹಾಸ ಕೆಣಕುವ ಕೆಲಸ ಆಗಬಾರದು
ಪ್ರವಾದಿ ಬಗ್ಗೆ ಅವಹೇಳನ ಕಾರಿ ಹೇಳಿಕೆ ಹಿನ್ನೆಲೆ ದೇಶಾದ್ಯಂತ ಪ್ರತಿಭಟನೆ ವಿಚಾರ ಪ್ರತಿಕ್ರಿಯೆ ನೀಡಿದ ಸಚಿವರು, "ಪಕ್ಷದ ನಾಯಕರು, ಸಿಎಂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಈ ಬಗ್ಗೆ ಮಾತಾಡುವುದು ಸರಿಯಲ್ಲ. ಈಗಾಗಲೇ ಸಂಬಂಧಪಟ್ಟವರ ವಿರುದ್ಧ ಪಕ್ಷ ಶಿಸ್ತುಕ್ರಮ ಜರುಗಿಸಿದೆ. ಯಾರೂ ಸಹ ಜನರಿಗೆ ಪ್ರಚೋದನೆ ಮಾಡಬಾರದು. ಹಿಂಸಾತ್ಮಕ ಕೃತ್ಯಕ್ಕೆ ಪ್ರಚೋದನೆ ಮಾಡುವ ಕೆಲಸ ಮಾಡಬಾರದು. ಇತಿಹಾಸಕಾರರ ಬಗ್ಗೆ ಕೆಣಕುವ ಕೆಲಸ ಆಗಬಾರದು" ಎಂದರು.
ಪಠ್ಯಪರಿಷ್ಕರಣೆಯನ್ನು ವಿವಾದಕ್ಕೆ ಬಳಕೆ
ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯನ್ನು ಈಗಾಗಲೇ ವಿಸರ್ಜನೆ ಮಾಡಲಾಗಿದೆ. ಆದರೆ ಸಮಿತಿ ವಿಸರ್ಜನೆ ಬಳಿಕವೂ ವಿವಾದ ಸೃಷ್ಠಿ ಮಾಡುತ್ತಿರುವುದು ಏಕೆ? ಎಂಬ ಪ್ರಶ್ನೆಗೆ ಉತ್ತರಿಸಿದ ರಾಮುಲು, "ಪಠ್ಯ ಪರಿಷ್ಕರಣೆ ಬಗ್ಗೆ ಸಿಎಂ ಮುಕ್ತ ಚರ್ಚೆಗೆ ಚಿಂತನೆ ಮಾಡುತ್ತಾರೆ. ಕಾಂಗ್ರೆಸ್ ರಾಜಕಾರಣಕ್ಕಾಗಿ ವಿವಾದ ಸೃಷ್ಠಿಸುತ್ತಿದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಇನ್ನು ಬಿ. ವೈ. ವಿಜಯೇಂದ್ರ ಸಿಎಂ ಅಬ್ಯರ್ಥಿ ಎಂಬ ವಿಚಾರ ಪ್ರತಿಕ್ರಿಯೆ ನೀಡಿ, "ಸಿಎಂ ಯಾರಾಗಬೇಕೆಂಬ ಬಗ್ಗೆ ರಾಷ್ಟ್ರೀಯ ನಾಯಕರಿಂದ ನಿರ್ಧಾರವಾಗಲಿದೆ" ಎಂದರು.
ಬಿಜೆಪಿ ಸೇರಿದ ಜೆಡಿಎಸ್ ಮುಖಂಡ
ಜಗಳೂರು ಮಹಾಲಿಂಗಪ್ಪ ಕಂಫರ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ನ ಜಿ. ಎಂ. ತಿಪ್ಪೇಸ್ವಾಮಿ, ಕಾಂಗ್ರೆಸ್ನ ಹೊನ್ನೂರಪ್ಪ ಬಿಜೆಪಿಗೆ ಸೇರಿದರು. ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು. ರಾಜ್ಯ ಸರಕಾರದ ಜನಪರ ಆಡಳಿತವನ್ನು ಗಮನಿಸಿ ಹಲವು ಪಕ್ಷಗಳ ಮುಖಂಡರ ಬಿಜೆಪಿಗೆ ಬರಲು ಉತ್ಸುಕರಾಗಿದ್ದಾರೆ ಎಂದು ಸಚಿವ ಶ್ರೀರಾಮುಲು ತಿಳಿಸಿದರು.