ಭಾರತ್ ಜೋಡೋ ಯಾತ್ರೆ; ಕಾಂಗ್ರೆಸ್ಗೆ ಬಿಜೆಪಿ ಶಾಸಕಿ ಸವಾಲು
ಚಿತ್ರದುರ್ಗ, ಅಕ್ಟೋಬರ್, 09: "ಭಾರತ್ ಜೋಡೋ ಪಾದಯಾತ್ರೆ ಯಾವ ಕಾರಣಕ್ಕೆ ಹಮ್ಮಿಕೊಳ್ಳಲಾಗಿದೆ, ಇದಕ್ಕೆ ಏನಾದರೂ ಅರ್ಥ ಇದೆಯಾ?. ಇದರ ಬದಲಿಗೆ ಧೈರ್ಯವಾಗಿ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ ಅಂತಾ ಹೇಳುವ ತಾಕತ್ ಇಲ್ವಾ?" ಎಂದು ಕಾಂಗ್ರೆಸ್ ವಿರುದ್ಧ ಹಿರಿಯೂರು ಬಿಜೆಪಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಭಾರತ ಪುಡಿ ಪುಡಿ ಆಗಿರುವುದನ್ನು ಒಂದು ಮಾಡುವುದಕ್ಕೆ ಭಾರತ್ ಜೋಡೋ ಎಂದು ಕರೆಯುತ್ತೇವೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ದೇಶವನ್ನು ಪುಡಿ ಪುಡಿ ಮಾಡುವ ಪ್ರಯತ್ನ ಇತ್ತು. ಇಂತಹ ಸಂದರ್ಭದಲ್ಲಿ ಈಗಿನ ನಮ್ಮ ಪ್ರಧಾನಿ ಅವರ ನೇತೃತ್ವದಲ್ಲಿ ದೇಶ ಸುಭದ್ರವಾಗಿದೆ ಎಂದು ತಿಳಿಸಿದರು.
"ದೇಶ ಕಾಯುವ ಯೋಧರಿಗೆ ಯಾವ ಯೋಜನೆಗಳನ್ನು ಕೊಡಲು ನಿಮ್ಮ ಕೈಯಲ್ಲಿ ಸಾಧ್ಯವಾಗಲಿಲ್ಲ. ಅಂತಹ ಯೋಜನೆಗಳಿಗೆ ಹೆಚ್ಚು ಶಕ್ತಿಯನ್ನು ಪ್ರಧಾನಿ ಮೋದಿಜೀಯವರು ತುಂಬಿದ್ದಾರೆ" ಎಂದು ಹೇಳಿದರು.
"ಬೇರೆ ರಾಷ್ಟ್ರಗಳು ಭಾರತದ ಬಗ್ಗೆ ಅತಿ ಗೌರವದಿಂದ ನಡೆದುಕೊಳ್ಳುವ ರೀತಿ ಕಳೆದ ಎಂಟು ವರ್ಷಗಳಿಂದ ಪ್ರಧಾನಿ ಕಾರ್ಯವೈಖರಿ ನಡೆಯುತ್ತಿದೆ. ಆರ್ಟಿಕಲ್ 370 ರದ್ದು ಹಾಗೂ ದೇಶ ದ್ರೋಹ ಕೆಲಸ ಮಾಡುವ ಸಂಘಟನೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡುವುದನ್ನು ಮೋದಿ ಅವರು ನಿರ್ಧಾರ ಮಾಡಿದ್ದಾರೆ. ದೇಶದಲ್ಲಿ ತಮ್ಮ ಆಡಳಿತ ಇದ್ದಾಗ ಇಂತಹ ನಿರ್ಧಾರಗಳನ್ನು ಯಾಕೆ ಕೈಗೊಳ್ಳಲಿಲ್ಲ?" ಎಂದು ಕಾಂಗ್ರೆಸ್ಗೆ ಪ್ರಶ್ನಿಸಿದರು.

ಕಾಂಗ್ರೆಸ್ ವಿರುದ್ಧ ಪೂರ್ಣಿಮಾ ಶ್ರೀನಿವಾಸ್ ಕಿಡಿ
"ದೇಶವನ್ನು ಇಬ್ಭಾಗ ಮಾಡುವ ಕೆಲಸ ಮಾಡಿದ ತಾವುಗಳು ಈಗ ಭಾರತ್ ಜೋಡೋ ಹಮ್ಮಿಕೊಂಡು ದೇಶದ ಹೆಸರಿನಲ್ಲಿ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ ಎಂದು ನೀವು ಧೈರ್ಯವಾಗಿ ಹೇಳಿ. ನೀವು ಏನೇ ಮಾಡಿದರೂ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನತೆ ಸರಿಯಾದ ಪಾಠ ಕಲಿಸಲಿದ್ದಾರೆ" ಎಂದು ಶಾಸಕಿ ಹೇಳಿದರು.

ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ
"ಚಿತ್ರದುರ್ಗ ಜಿಲ್ಲೆಗೆ ಕಾಂಗ್ರೆಸ್ ನಾಯಕರ ಕೊಡುಗೆ ಏನು?. 2008ರಿಂದ ಜಿಲ್ಲೆ ಬರದ ಜಿಲ್ಲೆಯಾಗಿ ಹಣೆಪಟ್ಟಿ ಪಡೆದುಕೊಂಡಿತ್ತು. ಹಲವಾರು ಮುಖ್ಯಮಂತ್ರಿಗಳನ್ನು ಈ ರಾಜ್ಯ ಕಂಡಿದೆ. ಯಾವುದೇ ಒಬ್ಬ ಮುಖ್ಯಮಂತ್ರಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಮಂಜೂರು ಮಾಡಿದ್ದರು. ಚಿತ್ರದುರ್ಗ ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡಿದ್ದರು. 2013 ರಿಂದ 2018ರವರೆಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿದ್ದರು. ನಿಮ್ಮ ಬೇಜವಾಬ್ದಾರಿತನದಿಂದ ಭದ್ರಾ ಕಾಮಗಾರಿ ಕುಂಠಿತವಾಯಿತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಯಾಕೆ ಮೌನವಾಗಿದ್ದೀರಿ?
"ಇಂದಿನ ಸಿಎಂ ಅಂದು ಜಲಸಂಪನ್ಮೂಲ ಸಚಿವರಾಗಿದ್ದಾಗ ಭದ್ರಾದಿಂದ ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಿದ್ದರು. ಆದರೆ ಕಾಂಗ್ರೆಸ್ ಸರ್ಕಾರದ ಮಾಜಿ ಸಚಿವ ಟಿ. ಬಿ. ಜಯಚಂದ್ರ ಅವರು 3 ಟಿಎಂಸಿ ನೀರನ್ನು ತುಮಕೂರಿಗೆ ಕೊಂಡೊಯ್ಯುವ ಕೆಲಸವನ್ನು ಮಾಡಿದರು. ಆಗ ಇಲ್ಲಿನ ಕಾಂಗ್ರೆಸ್ ಶಾಸಕರು ಯಾಕೆ ಮೌನವಾಗಿದ್ದೀರಿ?. ಮಾಜಿ ಸಚಿವ ಡಿ. ಸುಧಾಕರ್ ಅವರು ಯಾವುದೋ ಆಸೆ ಆಮಿಷಗಳಿಗೆ ಒಳಗಾಗಿ ಹಿರಿಯೂರು ಮತ್ತು ಜಿಲ್ಲೆಯ ಜನತೆಯನ್ನು ಕಷ್ಟಕ್ಕೆ ದೂಡಿದ್ದರು. ಹತ್ತು ವರ್ಷ ಆಡಳಿತ ನಡೆಸಿದ ನೀವು ಹಿರಿಯೂರಿಗೆ ಒಂದು ಯುಜಿಡಿ ತರಲು ಸಾಧ್ಯವಾಗಲಿಲ್ಲ. ವಾಣಿ ವಿಲಾಸ ಜಲಾಶಯದ ನೀರಿನ ಬಗ್ಗೆ ಒಂದೇ ಒಂದು ಧ್ವನಿ ಎತ್ತಿದ ನಿದರ್ಶನಗಳು ಇದ್ದರೆ ತೋರಿಸಲಿ. ಸುಧಾಕರ್ ಸಾಧನೆ ಶೂನ್ಯ, ಇವರು ಜಾತಿ-ಜಾತಿಗಳ ನಡುವೆ ಘರ್ಷಣೆ ತಂದಿದ್ದಾರೆ" ಎಂದು ಶಾಸಕರು ವಾಗ್ದಾಳಿ ನಡೆಸಿದರು.

ಸರ್ಕಾರವನ್ನ ಸಮರ್ಥಿಸಿಕೊಂಡ ಶಾಸಕಿ
"ನಮ್ಮ ಬಿಜೆಪಿ ಸರ್ಕಾರ ಬಂದಮೇಲೆ ವಾಣಿ ವಿಲಾಸ ಸಾಗರಕ್ಕೆ ಸುಮಾರು 16 ಟಿಎಂಸಿ ನೀರು ಹರಿದು ಬಂದಿದೆ. ನಾನು, ಸಂಸದರು, ಜಿಲ್ಲೆಯ ಬಿಜೆಪಿ ಶಾಸಕರು ಸೇರಿ ಬದ್ಧತೆಯಿಂದ ಕೆಲಸ ಮಾಡಿದ್ದೇವೆ. ಇತ್ತ ಹಿರಿಯೂರು ಕ್ಷೇತ್ರದಲ್ಲಿ ಧರ್ಮಪುರ ಕೆರೆಗೆ ನೀರು ಹರಿಸುವ ಕಾಮಗಾರಿ, ಬಸ್ ಡಿಪೋ, ಆಸ್ಪತ್ರೆ ನಿರ್ಮಾಣ ಹೀಗೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ನವರಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು. ಭಾರತ್ ಜೋಡೋಗೆ ಯಾವುದೇ ಅರ್ಥ ಇಲ್ಲ. ಅಸ್ತಿತ್ವವನ್ನು ಪಡೆದುಕೊಳ್ಳಲು ಈ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಭಾರತದ ಹೆಸರಲ್ಲಿ ಹಮ್ಮಿಕೊಂಡಿರುವ ಯಾತ್ರೆಯನ್ನು ಕೈ ಬಿಟ್ಟು, ಕಾಂಗ್ರೆಸ್ ಯಾತ್ರೆ ಎಂದು ಬದಲಾಯಿಸಿಕೊಳ್ಳಿ" ಎಂದು ಶಾಸಕಿ ಕೆ. ಪೂರ್ಣಿಮಾ ಒತ್ತಾಯಿಸಿದರು.












Click it and Unblock the Notifications