ಚಿತ್ರದುರ್ಗ: ವಾಣಿವಿಲಾಸ ಸಾಗರಕ್ಕೆ ಹರಿದ ಭದ್ರಾ ನೀರು
ಚಿತ್ರದುರ್ಗ, ಸೆಪ್ಟೆಂಬರ್ 6: ಭದ್ರಾ ಮೇಲ್ದಂಡೆ ಕಾಮಗಾರಿ ಯೋಜನೆಯು ಪೂರ್ಣಗೊಂಡಿದ್ದು, ಭದ್ರಾ ಜಲಾಶಯದಿಂದ ಹಿರಿಯೂರಿನ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಲಾಗಿದೆ.
Recommended Video
ವೇದಾವತಿ ನದಿ ಮೂಲಕ ನೀರು ಹರಿಸಲು ಭಾನುವಾರ ಮಧ್ಯರಾತ್ರಿ 12.20 ರ ವೇಳೆಗೆ ತರೀಕೆರೆ ತಾಲ್ಲೂಕಿನ ಬೆಟ್ಟದ ತಾವರೆಕೆರೆ ಬಳಿ ಇರುವ ಎರಡನೇ ಪಂಪ್ ಹೌಸ್ ನಿಂದ ನೀರು ಹರಿಸಲು ಚಾಲನೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ನೀರು ಹರಿಸಲು ವಿಳಂಬವಾಗಿತ್ತು.
ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಕಳೆದ ತಿಂಗಳು ಆಗಸ್ಟ್ 25ರಿಂದ ನೀರು ಹರಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ನಂತರ ಎರಡು ದಿನಗಳ ಕಾರ್ಯಕ್ರಮವನ್ನು ಆಗಸ್ಟ್ 27 ಕ್ಕೆ ಮುಂದೂಡಿಕೆ ಮಾಡಿದರು. ಮತ್ತೆ ಸೆ.2 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಆಗಮಿಸಿ ಬಾಗಿನ ಅರ್ಪಿಸಿ ವಿವಿ ಸಾಗರಕ್ಕೆ ನೀರೆತ್ತುವ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆಂದು ಅಧಿಕೃತ ಪ್ರವಾಸ ಕಾರ್ಯಕ್ರಮ ನಿಗದಿಯಾಗಿತ್ತು.

ಆದರೆ ಸಿಎಂ ಪ್ರವಾಸ ಕೂಡಾ ರದ್ದಾಗಿ ಸೆ.4ಕ್ಕೆ ನೀರು ಹರಿಯಲಿದೆ ಎಂದು ಮತ್ತೊಮ್ಮೆ ಸಮಯ ನಿಗದಿಯಾಯಿತು. ಅದಕ್ಕೂ ಅಡ್ಡಿ ಆಗಿ ನಾಲ್ಕು ಬಾರಿ ಮುಂದೂಡಲಾಗಿತ್ತು. ಕಾಕತಾಳೀಯವೆಂಬಂತೆ ಇದರ ಮಧ್ಯ ತರೀಕೆರೆ ರೈತ ಮುಖಂಡರು ನಮ್ಮ ಸಮಸ್ಯೆ ಬಗೆಹರಿಸಿ ನೀರು ಕೊಂಡೊಯ್ಯಿರಿ ಎಂದರು.
ಕಳೆದ ಎರಡು ದಿನಗಳ ಹಿಂದೆ ಹರಿಯಬೇಕಿದ್ದ ಭದ್ರಾ ನೀರು ಕೊನೆಗೂ ವಿವಿ ಸಾಗರದ ಕಡೆ ಹರಿದು ಬರುತ್ತಿದ್ದಾಳೆ. ಈ ಭಾಗದ ಜನರಲ್ಲಿ, ರೈತರಲ್ಲಿ, ಜನಪ್ರತಿನಿಧಿಗಳಲ್ಲಿ ಸಂತಸ ತಂದಿದೆ.

ಭದ್ರಾ ಜಲಾಶಯದಿಂದ ಪ್ರಾರಂಭವಾದ ನೀರು ಜಿಲ್ಲೆಯ ತರೀಕೆರೆ ತಾಲೂಕಿನ ಶಾಂತಿಪುರ ಪಂಪ್ ಹೌಸ್-1 ಸೇರುತ್ತದೆ. ಶಾಂತಿಪುರ ಪಂಪ್ ಹೌಸ್ ನಿಂದ ಲಿಫ್ಟ್ ಮೂಲಕ ಬೆಟ್ಟದ ತಾವರೆಕೆರೆ ಪಂಪ್ ಹೌಸ್ ತಲುಪಿ ಅಲ್ಲಿಂದ ಅಜ್ಜಂಪುರ ಸುರಂಗ ಮಾರ್ಗದ ಮೂಲಕ ಬಂದ ನೀರು ಅಜ್ಜಂಪುರದ ರೈಲ್ವೆ ಅಂಡರ್ ಪಾಸ್ ನಿಂದ ಹೆಬ್ಬೂರು ಗ್ರಾಮದ ವೈ ಜಂಕ್ಷನ್ ಹಳ್ಳದ ಮೂಲಕ ನೀರು ಹಾದು ಹೋಗಲಿದೆ.
ನಂತರ ಬೇಗೂರು, ಆಸಂದಿ, ಎಚ್.ತಿಮ್ಮಾಪುರ, ಹನುಮನಹಳ್ಳಿ, ಕಲ್ಕೆರೆ, ಚೌಳ ಹಿರಿಯೂರು, ಕುಕ್ಕೆಸಮುದ್ರ ಕೆರೆಗೆ ತಲುಪಿ ಅಲ್ಲಿಂದ ವೇದಾವತಿ ನದಿಗೆ ನೀರು ಹರಿದು ಹೋಗುತ್ತದೆ. ಅಲ್ಲಿಂದ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ತುಂಬಿಕೊಂಡು ಕಾರೆಹಳ್ಳಿ, ಹತ್ತಿಮೊಗ್ಗೆ, ಬೇವಿನಹಳ್ಳಿ ಮುಖಾಂತರ ವಿವಿ ಸಾಗರಕ್ಕೆ ನೀರು ಹರಿದು ಬರುತ್ತದೆ.












Click it and Unblock the Notifications