ಗ್ರಾಮ ವಾಸ್ತವ್ಯ: ದಲಿತ ದಂಪತಿಗೆ ಸ್ವತಃ ಊಟ ಬಡಿಸಿದ ಶ್ರೀರಾಮುಲು
ಚಿತ್ರದುರ್ಗ, ಜೂನ್.28: ಮೊಳಕಾಲ್ಮೂರು ಶಾಸಕ, ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ವ್ಯಾಪ್ತಿಗೆ ಸೇರಿದ ನಲಗೇತನಹಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
ಎಸ್.ಸಿ. ಕಾಲೋನಿಯಲ್ಲಿರುವ ಮಂಜಮ್ಮ, ದುರ್ಗಪ್ಪ ಮನೆಯಲ್ಲಿ ಉಳಿದಿರುವ ಬಿ.ಶ್ರೀರಾಮುಲು ಇಂದು ಗುರುವಾರ ಬೆಳಗ್ಗೆ ವಾಕಿಂಗ್ ಮತ್ತು ಯೋಗ ಮುಗಿಸಿ, ನಂತರ ಶಿವನ ಪೂಜೆ ಸಲ್ಲಿಸಿದರು.

ನಿನ್ನೆ ಬುಧವಾರ ರಾತ್ರಿ ದುರುಗಪ್ಪ ಮನೆಯಲ್ಲಿ ರಾಗಿ ರೊಟ್ಟಿ, ಬದನೆಕಾಯಿ ಚಟ್ನಿ ಹಾಗೂ ಹಾಗಲಕಾಯಿ ಪಲ್ಯ ಸೇವನೆ ಮಾಡಿದ ಅವರು, ಈ ವೇಳೆ ದುರುಗಪ್ಪ ಕುಟುಂಬದ ಸಮಸ್ಯೆ ಆಲಿಸಿ, ನಾನು ಬಂದಿರುವುದೇ ನಿಮ್ಮ ಸಮಸ್ಯೆ ಬಗೆಹರಿಸಲು ಎಂದು ಹೇಳಿ ಸಾಂತ್ವನ ನೀಡಿದರು.

"ನೀವು ಬರುತ್ತಿರೆಂದು ನಾವು ಬೆಳಗ್ಗೆಯಿಂದ ಊಟ ಮಾಡಿಲ್ಲ" ಎಂದು ದುರುಗಪ್ಪ ಪತ್ನಿ ಮಂಜಮ್ಮ ಅವರು ಶ್ರೀರಾಮುಲು ಬಳಿ ಹೇಳಿದ್ದಕ್ಕೆ, ದಂಪತಿಗೆ ಸ್ವತಃ ಊಟ ಬಡಿಸಿ, ತಾವೂ ಊಟ ಮಾಡಿದರು.

ಕಳೆದ ತಿಂಗಳು ಚಿತ್ರನಾಯಕನಹಳ್ಳಿ, ಯಾದಳಗಟ್ಟೆ, ಖ್ಯಾತಗೊಂಡನಹಳ್ಳಿ, ಕಾಲುವೆಹಳ್ಳಿ, ಗೌಡರಹಟ್ಟಿ, ಗೌಡರಕಪ್ಲೆ, ದೊಣೆಹಳ್ಳಿ, ತಿಪ್ಪಾರೆಡ್ಡಿಹಳ್ಳಿಗೆ ಭೇಟಿ ನೀಡಿದ್ದ ಶ್ರೀರಾಮುಲು ಅವರು ಜನರ ಕುಂದು ಕೊರತೆಗಳನ್ನು ಆಲಿಸಿ ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು.












Click it and Unblock the Notifications