ಕರ್ನಾಟಕ ವಿಧಾನಸಭೆ ಚುನಾವಣೆ: ಕಾಂಗ್ರೆಸ್ನಿಂದ ಸ್ಪರ್ಧಿಸಲು ಕೆ.ಸಿ.ವೀರೇಂದ್ರ ಅರ್ಜಿ ಸಲ್ಲಿಕೆ
ಚಿತ್ರದುರ್ಗ, ನವೆಂಬರ್, 15: ರಾಜ್ಯ ರಾಜಕೀಯದಲ್ಲಿ 2023ರ ವಿಧಾನಸಭೆ ಈಗಿನಿಂದಲೇ ಕಸರತ್ತುಗಳು ನಡೆಯುತ್ತಲೇ ಇವೆ. ಹಾಗೆಯೇ 2023ರ ಚುನಾವಣೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಕೆ.ಸಿ.ವೀರೇಂದ್ರ ಅವರು ಸ್ಪರ್ಧಿಸಲು ತಯಾರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವೀರೇಂದ್ರ ಪರವಾಗಿ ಅಭಿಮಾನಿಗಳು ಅರ್ಜಿ ಸಲ್ಲಿಸಿದರು.
2023ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಟಿಕೆಟ್ ಖಾತ್ರಿ ಪಡಿಸಿಕೊಳ್ಳಲು ಟಿಕೆಟ್ ಆಕಾಂಕ್ಷಿಗಳು ಆಯಾ ಪಕ್ಷದ ವರಿಷ್ಠರ ಬೆನ್ನು ಬಿದ್ದಿದ್ದಾರೆ. ಈ ಹಿಂದೆಯಷ್ಟೇ ಕ್ಯಾಸಿನೊ ದೊರೆ ಹಾಗೂ ನಟ ದೊಡ್ಡಣ್ಣ ಅವರ ಅಳಿಯ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದುದು ಬೆಳಕಿಗೆ ಬಂದಿತ್ತು. "ಭಾರತ್ ಜೋಡೋ" ಪಾದಯಾತ್ರೆ ವೇಳೆ ಪೂರ್ವಭಾವಿ ಸಭೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಿತ್ರದುರ್ಗಕ್ಕೆ ಬಂದಿದ್ದರು. ಆಗ ಪಪ್ಪಿ ಅವರಿಗೆ ಟಿಕೆಟ್ ನೀಡುವಂತೆ ಅಭಿಮಾನಿಗಳು ಭಾವಚಿತ್ರ, ಫೋಟೋ ಹಿಡಿದು ಡಿ.ಕೆ.ಶಿವಕುಮಾರ್ ಬಳಿ ಒತ್ತಾಯಿಸಿದ್ದರು. ಆಗಿನಿಂದಲೇ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿತ್ತು.
ನ.22ರಂದು ವಾಣಿ ವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸಲಿರುವ ಸಿಎಂ ಬೊಮ್ಮಾಯಿ
ವೀರೇಂದ್ರ ಪಪ್ಪಿ ಕಾಂಗ್ರೆಸ್ಗೆ ಬಂದಿದ್ದೇಕೆ?
2018ರಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಸುಮಾರು 49 ಸಾವಿರ ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು. 2023ಕ್ಕೆ ಚಿತ್ರದುರ್ಗ ಕ್ಷೇತ್ರ ಬಿಟ್ಟು, ಹೊಸ ಕನಸು ಹೊತ್ತು ಹಿರಿಯೂರು ಕಡೆ ಮುಖ ಮಾಡಿದ್ದರು. 2023ರಲ್ಲಿ ಹಿರಿಯೂರಿನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪಪ್ಪಿ ಅವರು ಸ್ಪರ್ಧಿಸುವಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜೆಡಿಎಸ್ ಸಭೆಯಲ್ಲಿ ಪರೋಕ್ಷವಾಗಿ ಪಕ್ಷ ಸಂಘಟನೆ ಮಾಡಲು ತಿಳಿಸಿದ್ದರು.
ಜೆಡಿಎಸ್ ವರಿಷ್ಠರ ಮಾತಿನಂತೆ ಪಪ್ಪಿ ಅವರು ಹಿರಿಯೂರಿನ ಶ್ರೀ ತೇರು ಮಲ್ಲೇಶ್ವರ ಹಾಗೂ ಶ್ರೀ ಕಣಿವೆ ಮಾರಮ್ಮನ ದೇವರಿಗೆ ಪೂಜೆ ಸಲ್ಲಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಉದ್ಯಮಿ ವೀರೇಂದ್ರ ಅವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂದು ಕ್ಷೇತ್ರದಲ್ಲಿ ಸುದ್ದಿಯೂ ಹರಿದಾಡಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯ ಕೆಲವು ಮುಖಂಡರು ನಮಗೆ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ಕೊಡಬಾರದು ಎಂದು ವಿರೋಧ ವ್ಯಕ್ತಪಡಿಸಿದ್ದರು.
ಶರವಣ ಅವರಿಗೆ ಒಲಿದಿದ್ದ ಎಂಎಲ್ಸಿ ಸ್ಥಾನ
ಇನ್ನು ಚುನಾವಣೆ ಸ್ಪರ್ಧೆಗೆ ಆರಂಭದಲ್ಲೇ ಅಡ್ಡಗಾಲು ಬಂದ ಹಿನ್ನೆಲೆ ಮತ್ತೆ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು, ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಇದರ ಬೆನ್ನಲ್ಲೇ ಪಪ್ಪಿ ಅವರಿಗೆ ಜೆಡಿಎಸ್ ಎಂಎಲ್ಸಿ ಸ್ಥಾನ ನೀಡಲಾಗುತ್ತದೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ ಕೊನೆ ಕ್ಷಣದಲ್ಲಿ ಜೆಡಿಎಸ್ ಮುಖಂಡ ಶರವಣ ಅವರನ್ನು ಎಂಎಲ್ಸಿ ಮಾಡಲಾಯಿತು. ಇತ್ತ ಹಿರಿಯೂರಿನಲ್ಲಿ ಟಿಕೆಟ್ ಸಿಗುತ್ತದೆ ಎಂದು ಅಂದುಕೊಂಡಿದ್ದ ಪಪ್ಪಿಗೆ ಎಂಎಲ್ಸಿ ಸ್ಥಾನವೂ ಸಿಗಲಿಲ್ಲ. ಜೆಡಿಎಸ್ ಪಕ್ಷದಲ್ಲಿ ಸರಿಯಾದ ಮನ್ನಣೆ ಸಿಗಲಿಲ್ಲ ಎಂದು ಆಗಲೇ ಕಾಂಗ್ರೆಸ್ ಕಡೆ ಮುಖ ಮಾಡಿದ್ದರು. ಆಗಿನಿಂದಲೂ ಸಾರ್ವಜನಿಕ ವಲಯದಲ್ಲಿ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬಂದಿದ್ದವು. ಇದಕ್ಕೆ ಸಾಕ್ಷಿ ಎಂಬಂತೆ ಅಭಿಮಾನಿಗಳು ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಟಿಕೆಟ್ ನೀಡುವಂತೆ ಮನವಿ ಮಾಡಿದ್ದು ಕೂಡ ಗಮನಾರ್ಹವಾಗಿತ್ತು.
5 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ತಿಪ್ಪಾರೆಡ್ಡಿ
ಚಿತ್ರದುರ್ಗದ ಬಿಜೆಪಿ ಶಾಸಕ ಬಲಿಷ್ಠ ಜಿ.ಹೆಚ್. ತಿಪ್ಪಾರೆಡ್ಡಿ ಅವರನ್ನು ಸೋಲಿಸಲು ಎದುರಾಳಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಒಂದು ಬಾರಿ ಎಂಎಲ್ಸಿ ಹಾಗೂ 5 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರನ್ನು ಸೋಲಿಸಲು ಸುಲಭದ ಮಾತಲ್ಲ. ಲಿಂಗಾಯತ ಸಮುದಾಯಕ್ಕೆ ಸೇರಿರುವ ಉದ್ಯಮಿ ವೀರೇಂದ್ರ ಪಪ್ಪಿ ಅವರು ಚಿತ್ರದುರ್ಗ ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದಾರೆ.
ಗೊಂದಲ ಮೂಡಿಸಿದ್ದ ಪಪ್ಪಿ ಸ್ಪರ್ಧಿಸುವ ಕ್ಷೇತ್ರ
"ಭಾರತ್ ಜೋಡೋ" ಪಾದಯಾತ್ರೆ ಮುಗಿದ ಬಳಿಕ ವೀರೇಂದ್ರ ಅವರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ವೀರೇಂದ್ರ ಪಪ್ಪಿ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಲು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ವಿರೇಂದ್ರ ಅರ್ಜಿ ಸಲ್ಲಿಸಿದರು. ವೀರೇಂದ್ರ ಪಪ್ಪಿ ಅವರ ಅಭಿಮಾನಿಗಳು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿರುವುದು ಗಮನಾರ್ಹವಾಗಿದ್ದು, ಪಪ್ಪಿ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸುವ ಬಗ್ಗೆ ಸ್ಪಷ್ಟತೆ ಸಿಕ್ಕಂತಾಗಿದೆ.