ಮೋದಿ ಸರ್ಕಾರದ ಸಂಸದೀಯ ಕ್ಷೇತ್ರ ನಿರ್ಣಯ ನಿರ್ಧಾರವು ದಕ್ಷಿಣ ಭಾರತದ ಹಿತರಕ್ಷಣೆ, ಮಹಿಳಾ ಮೀಸಲಾತಿಗೆ ಪೂರಕ: ತೇಜಸ್ವಿ ಸೂರ್ಯ
ನವದೆಹಲಿ: ಮಹಿಳಾ ಮೀಸಲಾತಿ ಮತ್ತು ನೂತನ ಸಂಸದೀಯ ಕ್ಷೇತ್ರ ನಿರ್ಣಯಕ್ಕೆ ಸಂಬಂಧಿಸಿದ ಸಾಂವಿಧಾನಿಕ ಕ್ರಮಗಳನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಲೋಕಸಭೆಯಲ್ಲಿ ಬಲವಾಗಿ ಬೆಂಬಲಿಸಿ ಮಾತನಾಡಿದ್ದು, ಈ ಕ್ರಮಗಳನ್ನು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. 2029 ರಿಂದ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಈ ಕ್ರಮ ಅತ್ಯಂತ ಅವಶ್ಯಕ ಎಂದು ವಿವರಿಸಿದ್ದಾರೆ. ದಕ್ಷಿಣದ ಹಾಗೂ ಸಣ್ಣ ರಾಜ್ಯಗಳ ಧ್ವನಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಇದು ಸೂಕ್ತ ಕಾಲ ಎಂದಿದ್ದಾರೆ.
ವಿರೋಧ ಪಕ್ಷಗಳು ನಿರ್ಲಕ್ಷಿಸುತ್ತಿರುವ ಪ್ರಮುಖ ರಾಜಕೀಯ ಸತ್ಯವೆಂದರೆ: ಲೋಕಸಭೆಯ ಗಾತ್ರ ಹೆಚ್ಚಿದರೂ, ರಾಜ್ಯಗಳ ನಡುವಿನ ಅನುಪಾತದ ಸಮತೋಲನವು ಸುರಕ್ಷಿತವಾಗಿರುತ್ತದೆ, ಆದ್ದರಿಂದ ಮೈತ್ರಿ ರಾಜಕಾರಣದ ಲೆಕ್ಕಾಚಾರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅವರು ತಿಳಿಸಿದರು.

ಸಂಸತ್ತಿನಲ್ಲಿ ಮಾತನಾಡಿದ ಸೂರ್ಯ, ನರೇಂದ್ರ ಮೋದಿ ಸರ್ಕಾರವು ಎಲ್ಲರ ಹಿತರಕ್ಷಣೆಗೆ ಗಮನಹರಿಸಿದ್ದು, ಯಾವುದೇ ಕಾರಣಕ್ಕೂ , ಯಾವ ರಾಜ್ಯಕ್ಕೂ ನಷ್ಟವಾಗದಂತೆ ಸೂತ್ರ ರಚಿಸಿರುವುದು ಗಮನಾರ್ಹ. ಒಂದು ರಾಜ್ಯದ ಸೀಟುಗಳನ್ನು ಕಡಿತಗೊಳಿಸಿ ಮತ್ತೊಂದು ರಾಜ್ಯಕ್ಕೆ ನೀಡುವ ಬದಲು, ಶೇಕಡಾ 50 ರಷ್ಟು ಹೆಚ್ಚಳದ ಸೂತ್ರದ ಮೇಲೆ ಎಲ್ಲಾ ರಾಜ್ಯಗಳ ಪ್ರಾತಿನಿಧ್ಯವನ್ನು ಸಮಾನವಾಗಿ ಹೆಚ್ಚಿಸಲಾಗಿದೆ. ಇದರರ್ಥ, ಲೋಕಸಭೆಯ ಒಟ್ಟು ಬಲ ಹೆಚ್ಚಾದರೂ, ರಾಜ್ಯಗಳ ಸಾಪೇಕ್ಷ ಸ್ಥಾನಮಾನವು ಹಾಗೆಯೇ ಉಳಿಯುತ್ತದೆ ಎಂದು ಸೂರ್ಯ ವಿವರಿಸಿದರು.
ಈ ಚೌಕಟ್ಟಿನ ಅಡಿಯಲ್ಲಿ ರಾಜ್ಯಗಳ ಸೀಟುಗಳ ಏರಿಕೆ :
ತಮಿಳುನಾಡು: 39 ರಿಂದ 59 ಕ್ಕೆ
ಕರ್ನಾಟಕ: 28 ರಿಂದ 42 ಕ್ಕೆ
ಆಂಧ್ರಪ್ರದೇಶ: 25 ರಿಂದ 38 ಕ್ಕೆ
ತೆಲಂಗಾಣ: 17 ರಿಂದ 26 ಕ್ಕೆ
ಕೇರಳ:* 20 ರಿಂದ 30 ಕ್ಕೆ ಇರಲಿದೆ.
ದಕ್ಷಿಣದ ರಾಜ್ಯಗಳ ಒಟ್ಟಾರೆ ಪಾಲು ಸುರಕ್ಷಿತವಾಗಿರುವುದರಿಂದ, ದಕ್ಷಿಣದ ಧ್ವನಿ ಕ್ಷೀಣಿಸುತ್ತದೆ ಎಂಬ ವಿರೋಧ ಪಕ್ಷದ ವಾದವು ದಾರಿ ತಪ್ಪಿಸುವಂತದ್ದು ಮತ್ತು ಗಣಿತದ ದೃಷ್ಟಿಯಿಂದ ಅಸಮರ್ಥನೀಯ ಎಂದು ಅವರು ಒತ್ತಿ ಹೇಳಿದರು.
ಲೋಕಸಭೆಯ ಗಾತ್ರ ಹೆಚ್ಚಾದಂತೆ, ಬಹುಮತದ ಸಂಖ್ಯೆಯೂ ಅನುಪಾತಕ್ಕೆ ಅನುಗುಣವಾಗಿ ಹೆಚ್ಚಾಗುತ್ತದೆ. ಯಾವುದೇ ಪ್ರದೇಶವು ತನ್ನ ರಾಜಕೀಯ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವುದಿಲ್ಲ. ಈ ಹಿಂದೆ ದಕ್ಷಿಣದ ರಾಜ್ಯಗಳ ಬೆಂಬಲ ಬೇಕಾಗಿದ್ದ ಪಕ್ಷ ಅಥವಾ ಮೈತ್ರಿಗೆ ಮುಂದೆಯೂ ಅಷ್ಟೇ ಬೆಂಬಲದ ಅಗತ್ಯವಿರುತ್ತದೆ. ಆದ್ದರಿಂದ ಇದು ಅಧಿಕಾರದ ಮರುಹಂಚಿಕೆಯಲ್ಲ, ಬದಲಾಗಿ ಪ್ರಜಾಪ್ರಭುತ್ವದ ಪ್ರಾತಿನಿಧ್ಯದ ವಿಸ್ತರಣೆಯಾಗಿದೆ ಎಂದು ಅವರು ಹೇಳಿದರು.
ಸೀಮಾ ನಿರ್ಣಯವು ಯಾವುದೇ ರಾಜಕೀಯ ಸಾಧನ ಅಥವಾ "ಹಿಂಬಾಗಿಲ ಕಸರತ್ತು" ಅಲ್ಲ, ಬದಲಾಗಿ ಸಂವಿಧಾನದ 81, 82 ಮತ್ತು 330A ವಿಧಿಗಳ ಅಡಿಯಲ್ಲಿ ಇರುವ ಸಾಂವಿಧಾನಿಕ ಆದೇಶವಾಗಿದೆ. ದಶಕಗಳ ಹಿಂದಿನ ಜನಸಂಖ್ಯೆಯ ಆಧಾರದ ಮೇಲೆ ಭಾರತದಂತಹ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವು ಸಂಸತ್ತಿನ ಗಾತ್ರವನ್ನು ಸೀಮಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಇಂದು ಅನೇಕ ಕ್ಷೇತ್ರಗಳಲ್ಲಿ ಒಬ್ಬ ಸಂಸದ ಹತ್ತಾರು ಲಕ್ಷ ಜನರನ್ನು ಪ್ರತಿನಿಧಿಸುತ್ತಿದ್ದಾರೆ, ಹೀಗಾಗಿ ಪ್ರಾತಿನಿಧ್ಯದ ವಿಸ್ತರಣೆಯು ಸಾಂವಿಧಾನಿಕವಾಗಿ ಅನಿವಾರ್ಯ ಮತ್ತು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಗತ್ಯವಾಗಿದೆ ಎಂದರು.
ಒಂದು ವೇಳೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸದೆ ಕೇವಲ ಮರುಹಂಚಿಕೆ ಮಾಡಿದ್ದರೆ ದಕ್ಷಿಣದ ರಾಜ್ಯಗಳೇ ದೊಡ್ಡ ನಷ್ಟ ಅನುಭವಿಸುತ್ತಿದ್ದವು ಎಂದು ಸೂರ್ಯ ಎಚ್ಚರಿಸಿದರು.
ಉದಾಹರಣೆಗೆ, ಹಳೆಯ ಮಾದರಿಯಲ್ಲಿ ಕೇರಳವು 5 ರಿಂದ 6 ಸೀಟುಗಳನ್ನು ಕಳೆದುಕೊಳ್ಳುತ್ತಿತ್ತು, ಆದರೆ ಪ್ರಸ್ತುತ ಚೌಕಟ್ಟಿನಲ್ಲಿ ಕೇರಳಕ್ಕೆ 10 ಹೆಚ್ಚುವರಿ ಸೀಟುಗಳು ಸಿಗಲಿವೆ. ವಿರೋಧ ಪಕ್ಷಗಳು ಪ್ರಸ್ತಾಪಿಸುವ ಯಾವುದೇ ಪರ್ಯಾಯಗಳಿಗಿಂತ ಮೋದಿ ಸರ್ಕಾರದ ಮಾದರಿಯೇ ದಕ್ಷಿಣ ಭಾರತಕ್ಕೆ ಅತ್ಯುತ್ತಮವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಅಂತಿಮವಾಗಿ, ಈ ಚೌಕಟ್ಟನ್ನು "ದಕ್ಷಿಣ ವಿರೋಧಿ" ಎಂದು ಬಿಂಬಿಸುವ ವಿರೋಧ ಪಕ್ಷಗಳ ಪ್ರಯತ್ನವು ಮೂಲಭೂತವಾಗಿ ಅಪ್ರಾಮಾಣಿಕತೆಯಿಂದ ಕೂಡಿದೆ. ದಕ್ಷಿಣ ಭಾರತಕ್ಕೆ ಕಿಂಚಿತ್ತೂ ಅನ್ಯಾಯವಾಗಿದ್ದರೂ ಅದನ್ನು ವಿರೋಧಿಸುವವರಲ್ಲಿ ತಾನೇ ಮೊದಲಿಗನಾಗಿರುತ್ತಿದ್ದೆ ಎಂದು ಸೂರ್ಯ ಹೇಳಿದರು. ದಕ್ಷಿಣದ ಹಿತಾಸಕ್ತಿಗಳನ್ನು ರಕ್ಷಿಸಿ, ಮಹಿಳೆಯರಿಗೆ ರಾಜಕೀಯದಲ್ಲಿ ನ್ಯಾಯಯುತ ಪಾಲು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಸದ ಸೂರ್ಯ ರವರು ಕೃತಜ್ಞತೆ ಸಲ್ಲಿಸಿದರು.














Click it and Unblock the Notifications