ರಾಜ್ಯ ಸರ್ಕಾರ ಕೇಳಿದಂತೆ ಪುಗಸಟ್ಟೆ ರೇಷನ್ ಕೊಡುವುದಕ್ಕೆ ಆಗುವುದಿಲ್ಲ: ಕೇಂದ್ರ ಸಚಿವ
ಚಿತ್ರದುರ್ಗ, ಜೂನ್, 19 : ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ಪೂರೈಕೆ ಮಾಡುವುದರಲ್ಲಿ ರಾಜಕೀಯ ಮಾಡುತ್ತಿದೆ ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ಆರೋಪಕ್ಕೆ ಮಾಡಿತ್ತು. ಈ ಸಂಬಂಧ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಚಿತ್ರದುರ್ಗದಲ್ಲಿ ಪ್ರತಿಕ್ರಿಯಿಸಿದ್ದು, ರಾಜ್ಯಗಳು ಕೇಳಿದಂತೆ ಪುಗಸಟ್ಟೆ ರೇಷನ್ ಕೊಡುವುದಕ್ಕೆ ಕೇಂದ್ರ ಸರ್ಕಾರಕ್ಕೆ ಆಗುವುದಿಲ್ಲ. ಎಫ್ಸಿಐಗೆ ರೇಷನ್ ಕೊಡುವ ಕುರಿತು ತನ್ನದೇ ಆದ ಮಾನದಂಡಗಳಿವೆ ಎಂದು ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ 140 ಕೋಟಿ ಜನರ ಭವಿಷ್ಯ ನೋಡಬೇಕಿದೆ. ನಿಮ್ಮ ಕುರ್ಚಿಗಾಗಿ, ನಿಮ್ಮ ತೆವಲಿಗಾಗಿ ಉಚಿತವಾಗಿ ಕೊಟ್ಟರೆ ಹೇಗೆ? ಇದು ನಿಮಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಸರ್ಕಾರ ಯಾವ ಕಾಲದಲ್ಲಿಯೂ ಉಚಿತವಾಗಿ ಯೋಜನೆ ನೀಡುತ್ತೇವೆ ಎಂದು ಹೇಳಿಲ್ಲ. ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ಬಗ್ಗೆ ಹಾಗೂ ಪ್ರಧಾನಿ ಮೋದಿ ಬಗ್ಗೆ ಮಾತನಾಡುವುದನ್ನು ಮೊದಲು ಕೈಬಿಡಬೇಕು. ಬದಲಾಗಿ ನೀವು ರಾಜ್ಯದ ಜನರಿಗೆ ಕೊಟ್ಟಿರುವ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ನಾರಾಯಣಸ್ವಾಮಿ ಹೇಳಿದರು.
ನಾನು ಒಬ್ಬ ಬಿಜೆಪಿ ಕಾರ್ಯಕರ್ತ ಎನ್ನುವುದಕ್ಕಿಂತ ದೇಶಭಕ್ತ, ನಮಗೆ ಎಲ್ಲ ಸಮಸ್ಯೆಗಳನ್ನು ಎದುರಿಸಿ ದೇಶ ಕಟ್ಟುವ ಶಕ್ತಿ ಇದೆ, ಕಟ್ಟಿ ತೋರಿಸುತ್ತೇವೆ ಎಂದರು. ಇನ್ನು ಬಿಜೆಪಿ ಸರ್ಕಾರ ಬ್ರಿಟೀಷ್ ಆಡಳಿತ ಎಂಬ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ,"ಮಧು ಬಂಗಾರಪ್ಪ ಅವರು ರಾಜಕೀಯದ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯಬೇಕಿದೆ. ಮಾತನಾಡುವ ಮುನ್ನ ಹಿರಿಯರ ಮಾರ್ಗದರ್ಶನ ಪಡೆದು ಮಾತನಾಡಬೇಕು. ಇಲ್ಲವಾದರೆ ಈ ರಾಜಕೀಯ ವ್ಯವಸ್ಥೆಯಲ್ಲಿ ನೀವು ಮುಳುಗುತ್ತೀರಿ ಎಂದು ಟಾಂಗ್ ನೀಡಿದರು.
ಪ್ರತಿಭಟನೆಗೆ ಮುಂದಾದ ಕೆಸಿಸಿಐ
ಮತ್ತೊಂದೆಡೆ ವಿದ್ಯುತ್ ದರ ಏರಿಕೆ ಜನಜೀವನದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿರುವುದು ಒಂದು ಕಡೆಯಾದರೇ, ಮತ್ತೊಂದೆಡೆ ಇದು ವಾಣಿಜ್ಯೋದ್ಯಮಗಳಿಗೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಈ ಹಿನ್ನೆಲೆ ಹುಬ್ಬಳ್ಳಿಯಲ್ಲಿರುವ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದೆ.
ವಿದ್ಯುತ್ ದರದಲ್ಲಿ ಅಸಹಜ ಏರಿಕೆ ವಿರೋಧಿಸಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು (ಕೆಸಿಸಿಐ) ಇತರೆ ಎಲ್ಲಾ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಂಘ- ಸಂಸ್ಥೆಗಳ ಜೊತೆಗೂಡಿ ಜೂನ್ 22ರಂದು ರಾಜ್ಯಾದ್ಯಂತ ಒಂದು ದಿನದ ಬಂದ್ಗೆ ಕರೆ ನೀಡಿದೆ. ಎಲ್ಲ ಉದ್ಯಮಿಗಳು, ವ್ಯಾಪಾರಸ್ಥರು ಅಂದು ತಮ್ಮ ವಹಿವಾಟು ಬಂದ್ ಮಾಡುವಂತೆಯೂ ತಳಿಸಿದ್ದೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಉದ್ಯಮಿಯಾದ ಪ್ರವೀಣ ಅಗಡಿ ಅವರು ಹೇಳಿದರು.
ಇನ್ನು ವಿದ್ಯುತ್ ದರ ಹೆಚ್ಚಳದಿಂದ ವ್ಯಾಪಾರಸ್ಥರು, ಜನಸಾಮಾನ್ಯರು ಮತ್ತು ಕೈಗಾರಿಕೆಗಳ ಮೇಲೆ ಆಗಿರುವ ದುಷ್ಪರಿಣಾಮ ಕುರಿತು ಸರ್ಕಾರಕ್ಕೆ ತಿಳಿಸುವ ಪ್ರಯತ್ನವನ್ನು 8 ದಿನಗಳಿಂದ ಮಾಡಿದ್ದೇವೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಅನಿವಾರ್ಯವಾಗಿ ಬಂದ್ಗೆ ಕರೆ ನೀಡಿದ್ದೇವೆ ಎಂದು ಹೇಳಿದರು.
ಹಾಗೆಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕಾರ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಭಾನುವಾರ ಈ ಯೋಜನೆಗೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಇಲಾಖೆಯಿಂದ ಕ್ಯೂ ಆರ್ ಕೋಡ್ ಬಂದ ಮೇಲೆ ಅರ್ಜಿ ಸ್ವೀಕಾರ ಮಾಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದರಿಂದ ಮೊದಲ ದಿನ ಅರ್ಜಿ ಸ್ವೀಕಾರಕ್ಕೆ ಈ ರೀತಿಯ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.












Click it and Unblock the Notifications