ಜಮೀನುಗಳಿಗೆ ಆವರಿಸಿದ ವಿವಿ ಸಾಗರ ಹಿನ್ನೀರು, ಕಣ್ಣೀರು ಸುರಿಸುತ್ತಿರುವ ಅನ್ನದಾತರು
ಚಿತ್ರದುರ್ಗ, ಸೆಪ್ಟೆಂಬರ್ 10 : ಬಯಲು ಸೀಮೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ಗರಿಷ್ಠ ನೀರಿನ ಮಟ್ಟ ತಲುಪಿದ್ದು ಒಂದು ಕಡೆ ಸಂತೋಷವಾದರೆ, ಮತ್ತೊಂದು ಜಲಾಶಯದ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದರಿಂದ ಅನ್ನದಾತರು ಕಣ್ಣೀರಿಡುವಂತಾಗಿದೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಜಲಾಶಯದ ಹಿನ್ನೀರು ಬಹುತೇಕ ಹೊಸದುರ್ಗ ತಾಲ್ಲೂಕಿನಲ್ಲಿದೆ. ಈ ಹಿನ್ನೀರು ಪ್ರದೇಶದಲ್ಲಿ ಬರುವ ಹಲವಾರು ಗ್ರಾಮದ ಮನೆಗಳು ಜಲಾವೃತವಾಗಿವೆ. ಸುಮಾರು 20 ಕ್ಕೂ ಹೆಚ್ಚು ಸಂಪರ್ಕ ಸೇತುವೆಗಳು ಮುಳುಗಡೆಯಾಗಿದ್ದು, ಓಡಾಟಕ್ಕೆ ತೆಪ್ಪ ಮೊರೆ ಹೋಗಿದ್ದಾರೆ.
ಮತ್ತೊಂದು ಕಡೆ ಹೊಸದುರ್ಗ ತಾಲ್ಲೂಕಿನ ಹೊಸ ತಿಮ್ಮಪ್ಪನಹಟ್ಟಿ, ನಾಗತಿಹಳ್ಳಿ, ಇಟ್ಟಿಗೆಹಳ್ಳಿ, ಬಿಜೆ ನಗರ, ಹುಣಸೆಕಟ್ಟೆ, ಹಿಂಡದೇವರಹಟ್ಟಿ ಗ್ರಾಮದ ರೈತರ ಜಮೀನುಗಳಲ್ಲಿ ಫಸಲಿಗೆ ಬಂದಿರುವ ಅಡಿಕೆ, ತೆಂಗಿನ ಮರಗಳು ಸಂಪೂರ್ಣ ಜಲಾವೃತವಾಗಿದ್ದು, ಅನ್ನದಾತರು ಕಣ್ಣೀರು ಸುರಿಸುತ್ತಿರುವ ದೃಶ್ಯ ಮನುಕುಲಕುವಂತೆ ಮಾಡಿದೆ. ತಾಲೂಕಿನ 54 ಗ್ರಾಮಗಳು, ಸುಮಾರು 250 ಮನೆಗಳು ವಿವಿ ಸಾಗರದ ಹಿನ್ನೀರಿಗೆ ಸಿಲುಕಿ ಮನೆ, ಮಠ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಪೂಜಾರಹಟ್ಟಿ ಗ್ರಾಮದಲ್ಲಿ 9 ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿವೆ.

ಅನ್ನದಾತರ ಅಳಲು
ಮಾರಿಕಣಿವೆ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೊರಬಂದಿರುವ ನೀರಿನಿಂದ ತೋಟಗಳು ಸಂಪೂರ್ಣವಾಗಿ ಮುಳುಗಿದ್ದು ಅನ್ನದಾತರು ಕಣ್ಣೀರು ಹಾಕುತ್ತಿದ್ದಾರೆ. ನಮಗೆ ಪರಿಹಾರ ಬೇಡ್ವೋ ಯಪ್ಪಾ, ನಮಗೆ ತೋಟ ಉಳಿಸಿಕೊಡಿ ಸಾಕು, ಮಕ್ಳು ಮರಿಗಳನ್ನು ಕಟ್ಟಿಕೊಂಡು ಹೇಗೆ ಜೀವನ ಮಾಡಬೇಕು, ದಯಮಾಡಿ ನಮ್ಮನ್ನು ಉಳಿಸಿಕೊಡಿ, ನಿಮ್ಮ ಕೈ ಮುಗಿತೀವಿ, ನಾವು ಹೇಗೋ ಮಾಡಿ ಜೀವನ ಸಾಗಿಸುತ್ತೀವಿ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನು ಸರಕಾರವಾಗಲಿ ಅಥವಾ ಸ್ಥಳೀಯ ಅಧಿಕಾರಿಗಳು ಗಮನ ಹರಿಸದಿದ್ದರೆ ನಾವು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮಾಜಿ ಶಾಸಕರಿಂದ ವೀಕ್ಷಣೆ
ಮುಳುಗಡೆಯಾದ ಗ್ರಾಮಗಳು, ರಸ್ತೆ ಸೇರಿದಂತೆ ರೈತರ ಜಮೀನುಗಳನ್ನು ವೀಕ್ಷಣೆ ಮಾಡಿದ ಮಾಜಿ ಶಾಸಕ ಬಿ.ಜೆ. ಗೋವಿಂದಪ್ಪ, " ಸ್ಥಳೀಯ ಆಡಳಿತ, ಇಲ್ಲಿನ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ, ಇದುವರೆಗೂ ಸಂಕಷ್ಟಕ್ಕೆ ಸಿಲುಕಿದ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಡ್ಯಾಂ ನೀರಿನ ಮಟ್ಟ 135 ಅಡಿ ತಲುಪಿದೆ. ಇನ್ನು ಮಳೆಗಾಲ ಇದ್ದು, ಹೆಚ್ಚು ಮಳೆ ಹೀಗೆ ಬಂದರೆ ಡ್ಯಾಂಗೆ ಅಪಾಯ ಇದೆ, ಯಾರೋ ತಜ್ಞರು ಬಂದು ಹೇಳಿದ್ದಾರೆಂದು ಸುಮ್ಮನಿರುವುದು ಬೇಡ, ನಾನೊಬ್ಬ ರೈತನ ಮಗನಾಗಿ ಹೇಳುತ್ತೇನೆ ಜಲಾಶಯಕ್ಕೆ ತೊಂದರೆ ಇದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಬಂದು ಈ ಭಾಗದಲ್ಲಿ ಹಾನಿಯಾಗಿರುವ ಪ್ರದೇಶವನ್ನು ವೀಕ್ಷಣೆ ಮಾಡಿಸುವ ಮೂಲಕ ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತುವ ಸರಕಾರದ ಗಮನ ಸೆಳೆಯುವಂತೆ ಮಾಡಲಾಗುವುದು ಎಂದು ಮಾಜಿ ಶಾಸಕ ಗೋವಿಂದಪ್ಪ ಹೇಳಿದರು.












Click it and Unblock the Notifications