ಮೀಸಲಾತಿ ಹೆಚ್ಚಳ ಸ್ವಾಗತಾರ್ಹ, ಕಾಡುಗೊಲ್ಲರಿಗೂ ST ನೀಡುವಂತೆ ನಟ ಚೇತನ್ ಆಗ್ರಹ
ಚಿತ್ರದುರ್ಗ, ಅಕ್ಟೋಬರ್ 30 : ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ, ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಆಗ್ರಹಿಸಿದ್ದಾರೆ.
ಹಿರಿಯೂರು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ. ಮೈಸೂರು ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್, ಪೆರಿಯರ್ ಸೇರಿದಂತೆ ಮತ್ತಿತರರು ಮೀಸಲಾತಿ ತಿದ್ದುಪಡಿ ತರಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೀಸಲಾತಿ ಉಳಿಸುವುದು ಬಹಳ ಮುಖ್ಯ" ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆ: ಮಕ್ಕಳೊಂದಿಗೆ ರಾಹುಲ್ ಸ್ಫೂರ್ತಿಯ ಓಟ, ನೃತ್ಯ
ಚಿತ್ರದುರ್ಗ ಭಾಗದಲ್ಲಿ ಮೀಸಲಾತಿ ಹೋರಾಟ ಮುಂದುವರಿದಿದ್ದು ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ನಡೆಸಿದ್ದಾರೆ. ನಾಗ ಮೋಹನ್ ದಾಸ್ ವರದಿಯಿಂದ ಎಸ್ಟಿ ಜನಾಂಗಕ್ಕೆ ಶೇ 3 ಇರುವ ಮೀಸಲಾತಿ ಶೇ 7 ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯ ಜೊತೆಗೆ ಒಳಮೀಸಲಾತಿ ಸಿಗಬೇಕು ಎಂದು ತಿಳಿಸಿದರು.

2018ರಲ್ಲಿ ಜಾತಿ ಪಟ್ಟಿಗೆ ಸೇರಿದ ಕಾಡುಗೊಲ್ಲ ಜನಾಂಗ
ಕಾಡುಗೊಲ್ಲ ಬುಡಕಟ್ಟು ಜನಾಂಗ ತನ್ನದೆ ಆದ ವಿಶೇಷ ಮತ್ತು ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಈ ಸಮುದಾಯದಲ್ಲಿ ಜುಂಜಪ್ಪ, ಯತ್ತಪ್ಪ, ಜಂಪಣ್ಣ, ಕಾಟಪ್ಪ, ಕರಡಿಬುಳ್ಳಪ್ಪ ಇಂತಹ ಮಹಾನ್ ಪುರುಷರ ಪರಂಪರೆಯನ್ನು ಹೊಂದಿದೆ. ಬುಡಕಟ್ಟು ಲಕ್ಷಣಗಳನ್ನು ಹೊಂದಿರುವ ಸಮಾಜಕ್ಕೆ 2018ರಲ್ಲಿ ಜಾತಿ ಪಟ್ಟಿ ನೀಡುವಂತೆ ಸಮುದಾಯದ ಹೋರಾಟಗಾರರು, ಸ್ನೇಹಿತರು ಮತ್ತು ಮುಖಂಡರೊಂದಿಗೆ ಹೋರಾಟ ಮಾಡಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಯಿತು.
ಹಿಂದುಳಿದ ವರ್ಗದ ಪಟ್ಟಿಯಿಂದ ತಳವಾರ, ಪರಿವಾರ ಕೈ ಬಿಟ್ಟ ಸರ್ಕಾರ

ಮೀಸಲಾತಿಗಾಗಿ ಸಚಿವರ ಮೇಲೆ ಒತ್ತಡ
ಬುಡಕಟ್ಟು ಸಂಪ್ರದಾಯ ಹೊಂದಿರುವ ಇವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನನ್ನ ಬೇಡಿಕೆ ಇದೆ. ನಾನು ಸಹ ಈ ಬೇಡಿಕೆಯ ಹೋರಾಟವನ್ನು ಮುಂದುವರಿಸುತ್ತೇನೆ. ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಈ ಕುರಿತು ಒತ್ತಡ ಹಾಕಲಾಗಿದೆ. ಅದಷ್ಟು ಬೇಗ ಮೀಸಲಾತಿ ನೀಡುವಂತೆ ಮತ್ತೆ ಒತ್ತಡ ತರಲಾಗುವುದು. ಕಾಡುಗೊಲ್ಲರ ಎಸ್ಟಿ ಬೇಡಿಕೆ ಬಹಳ ನ್ಯಾಯಯುತವಾಗಿದೆ ಎಂದರು.

ಬ್ರಾಹ್ಮಣ್ಯ ಮತ್ತು ವೈಧಿಕತೆ ವಿರೋಧಿಸುತ್ತೇನೆ
ಕಾಡುಗೊಲ್ಲ ಸಮುದಾಯ, ಆದಿವಾಸಿ ಸಮಾಜ, ಮೂಲನಿವಾಸಿಗಳು ಹಾಗೂ ಬಹು ಸಂಸ್ಕೃತಿ ಜೊತೆ ಸದಾ ಜೊತೆಗಿರುತ್ತೇನೆ. ಬಹುಜನರ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಎಲ್ಲಾ ಜಾತಿ ಜನಾಂಗದ ಮಹಿಳೆಯರಿಗೊಸ್ಕರ ನ್ಯಾಯ ಒದಗಿಸಬೇಕು. ನಮಗೆ ಅಸಮಾನತೆ ಮಾಡಿರುವ ಬ್ರಾಹ್ಮಣ್ಯ ಮತ್ತು ವೈಧಿಕತೆಯನ್ನು ಎಲ್ಲರೂ ಸೇರಿ ವಿರೋಧಿಸೋಣ ಎಂದು ಹೇಳಿದರು.

ಚೇತನ್ ತೇಜೋವಧೆ ಖಂಡಿಸಿ ಜೈಬೀಮ್ ಬ್ರಿಗೇಡ್ ಹೋರಾಟ
ಕಾಂತಾರ ಸಿನಿಮಾದಲ್ಲಿ ಬರುವ ಭೂತ ಕೋಲದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವಿಚಾರದಲ್ಲಿ ಕೆಲವು ಹಿಂದೂ ಸಂಘಟನೆಗಳು ಚೇತನ್ ತೇಜೋವಧೆ ಮಾಡುತ್ತಿರುವುದನ್ನು ಕಂಡಿಸಿ ಜೈಬೀಮ್ ಬ್ರಿಗೇಡ್ ಶನಿವಾರ ಹಾಸನ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ ನಡೆಸಿದೆ.
ಭಾರತ ಸಂವಿಧಾನದ ಕಲಂ 19ರಲ್ಲಿ ಪ್ರಜೆಗಳಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ. ಅದರಂತೆ ಕಾಂತಾರ ಸಿನಿಮಾದಲ್ಲಿ ಭೂತ ಕೋಲ ಆರಾಧನೆ ಹಿಂದೂ ಧರ್ಮದ ಆಚರಣೆ ಅಲ್ಲ ಎಂದು ಚೇತನ್ ಹೇಳಿದ್ದರು. ಈ ವಿಚಾರ ಇಟ್ಟುಕೊಂಡು ನಟ ಚೇತನ್ ಅವರಿಗೆ ಬೆದರಿಕೆ ಕರೆಗಳ ಮೂಲಕ ದೌರ್ಜನ್ಯ ಎಸಗಲಾಗುತ್ತಿದೆ. ಸಾಮಾಜಿಕ ಹೋರಾಟಗಾರ ಚೇತನ್ ಅವರ ಮುಖಕ್ಕೆ ಮಸಿ ಬಳಿಯಲು, ಹಲ್ಲೆ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಕಿಡಿ ಕಾರಿದ್ದಾರೆ.