ಚಿತ್ರದುರ್ಗ: ಇನೋವಾ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ಹಣ ವಶ
ಚಿತ್ರದುರ್ಗ, ನವೆಂಬರ್, 29: ಹೊಳಲ್ಕೆರೆ ಬಳಿ ಇನೋವಾ ಕಾರ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 8 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಬಳಿ ಹೊಳಲ್ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಚಿತ್ರದುರ್ಗದ ಉದ್ಯಮಿಯೊಬ್ಬರಿಗೆ ಸೇರಿದ ಹಣ ಇದಾಗಿದ್ದು, ಶಿವಮೊಗ್ಗಕ್ಕೆ ಹಣ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಈ ಕುರಿತಾಗಿ ಯಾವುದೇ ದೂರು ದಾಖಲಾಗಿಲ್ಲ. ವಿಚಾರಣೆ ಬಳಿಕ ಕೇಸ್ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಡಿಡಿಪಿಐ ಮೇಲೆ ಲೋಕಾಯುಕ್ತ ದಾಳಿ
ಇನ್ನು ಇತ್ತೀಚೆಗಷ್ಟೇ ಲಂಚಕ್ಕೆ ಬೇಡಿಕೆಯಿಟ್ಟ ಆರೋಪ ಹಿನ್ನೆಲೆ ಡಿಡಿಪಿಐ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು
ಮೂಡಿಗೆರೆ ತಾಲೂಕಿನ ಕಡೆಮಕ್ಕಲ್, ಹೆಸ್ಗಲ್ ಶಾಲೆಯ ಕಾಂಪೌಂಡ್ ನಿರ್ಮಾಣ ಮಾಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಡಿಪಿಐ ರಂಗನಾಥಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಿಡಿಪಿಐ ರಂಗನಾಥಸ್ವಾಮಿ ಅವರು ಎಸ್.ಡಿ.ಎ.ಅಸ್ರಾರ್ ಅಹಮದ್ ಮೂಲಕ ಡೀಲ್ ಕುದುರಿಸುತ್ತಿದ್ದು, ಮುಂಗಡವಾಗಿ 1000 ಸಾವಿರ ಹಣ ಪಡೆದಿದ್ದರು.
ಒಂದು ಫೈಲ್ಗೆ 5 ಸಾವಿರದಂತೆ 2 ಫೈಲ್ಗೆ 10 ಸಾವಿರ ಕೇಳಿದ್ದರು. ಈ ಬಗ್ಗೆ ಮೂಡಿಗೆರೆ ಮೂಲದ ಗುತ್ತಿಗೆದಾರ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಈ ಹಿನ್ನೆಲೆ ಡಿಡಿಪಿಐ ರಂಗನಾಥ ಸ್ವಾಮಿ ಮೇಲೆ ಲೋಕಾಯುಕ್ತ ತಿರುಮಲೇಶ್ ನೇತೃತ್ವದ ತಂಡದಿಂದ ದಾಳಿ ನಡೆದಿತ್ತು.
ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
ಇತ್ತೀಚೆಗಷ್ಟೇ ಹಿರಿಯೂರು ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದ ಘಟನೆ ನಡೆದಿತ್ತು. ಸೋಮವಾರ ಬೆಳಗ್ಗೆಯಿಂದ ಸಂಜೆ ಸುಮಾರು 7ಗಂಟೆಯವರೆಗೂ ಮನೆಯಲ್ಲಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದರು.
ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ ಕೃಷ್ಣಮೂರ್ತಿ ಅವರ ಕುವೆಂಪು ನಗರದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ 600 ಗ್ರಾಂ ಚಿನ್ನ, 2ಕೆಜಿ ಬೆಳ್ಳಿ, 2ಕಾರು ಹಾಗೂ 10 ನಿವೇಶನಗಳು ಪತ್ತೆಯಾಗಿದ್ದವು. ಚಿತ್ರದುರ್ಗ ಅರಣ್ಯ ಇಲಾಖೆ ಎಸಿಎಫ್ ನಾಗೇಂದ್ರ ನಾಯಕ ಅವರ ಚಂದ್ರಾ ಲೇಔಟ್ನಲ್ಲಿರುವ ಮನೆಯಲ್ಲಿ 650 ಗ್ರಾಂ ಚಿನ್ನ, 4ಕೆಜಿ ಬೆಳ್ಳಿ, 2ಲಕ್ಷ ನಗದು, 11ನಿವೇಶನಗಳು ಹಾಗೂ ಇನ್ನೋವಾ ಸೇರಿದಂತೆ ಎರಡು ಕಾರುಗಳು ಇರುವುದು ಪತ್ತೆಯಾಗಿದ್ದವು
ಹಿರಿಯೂರು ನಗರದಲ್ಲಿರುವ ಇಬ್ಬರು ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪ್ರತ್ಯೇಕ ತಂಡವಾಗಿ ಆಗಮಿಸಿ, ಮನೆ ಮೇಲೆ ದಾಳಿ ನಡೆಸಿದ್ದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಸೇರಿದಂತೆ, ತುಮಕೂರು, ಹಾವೇರಿ, ಬಳ್ಳಾರಿ, ರಾಯಚೂರು,ಹಾಸನ, ತುಮಕೂರು, ಬೆಂಗಳೂರು ನಗರ, ಮಂಡ್ಯ, ಕಲ್ಬುರ್ಗಿ ಸೇರಿದಂತೆ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಲೋಕಾಯುಕ್ತ ದಾಳಿಯಲ್ಲಿ ಲಕ್ಷಾಂತರ ರೂ. ನಗದು, ಚಿನ್ನಾಭರಣ ಸೇರಿ 35.54 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ಪತ್ತೆ ಹಚ್ಚಿದ್ದರು.












Click it and Unblock the Notifications