ವಿವಿ ಸಾಗರ ಜಲಾಶಯಕ್ಕೆ ನೀರಿನ ಕೊರತೆ ನೀಗಿಸಲಾಗುವುದು: ಸಿಎಂ ಭರವಸೆ
ಚಿತ್ರದುರ್ಗ,ಜೂ 4: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ಬರಬೇಕಾಗಿರುವ ನೀರಿನ ಕೊರತೆಯನ್ನು ನೀಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಭರವಸೆ ನೀಡಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಗೂ ಏತನೀರಾವರಿ ಕೆರೆಗೆ ನೀರು ಹರಿಸುವ 90 ಕೋಟಿ ವೆಚ್ಚದ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಹರಿಯಬ್ಬೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
"ಹಿಂದೆ ನಾನು ನೀರಾವರಿ ಮಂತ್ರಿಯಾಗಿದ್ದಾಗ ಹಿರಿಯೂರು ನಗರದಲ್ಲಿ ರೈತರು 543 ದಿನಗಳ ಕಾಲ ಗಂಭೀರವಾದ ಹೋರಾಟ ನಡೆಸಿದ್ದರು. ಅಂದು ನಾನು ಹೋರಾಟದ ಸ್ಥಳಕ್ಕೆ ಬಂದು ಹೋರಾಟದ ರೈತರನ್ನು ಮನವೊಲಿಸಿ, ಅವರೊಂದಿಗೆ ಮೂರು ಗಂಟೆಗಳ ಕಾಲ ಚರ್ಚಿಸಿ, ಹದಿನೈದು ದಿನಗಳ ಒಳಗೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ 5 ಟಿಎಂಸಿ ನೀರು ಹಂಚಿಕೆ ಮಾಡಲಾಯಿತು ಎಂದು ಹೇಳಿದರು. ನಾನು ಹಂಚಿಕೆ ಮಾಡಿದ 5 ಟಿಎಂಸಿ ನೀರಿನಲ್ಲಿ, ಕಾಂಗ್ರೆಸ್ ಸರ್ಕಾರ 3 ಟಿಎಂಸಿ ನೀರು ಕಡಿತಗೊಳಿ, 2 ಟಿಎಂಸಿಗೆ ಇಳಿಸಲಾಗಿದೆ. ಭದ್ರಾ ಜಲಾಶಯದಿಂದ ವಿವಿ ಸಾಗರಕ್ಕೆ ಬಾಕಿ ಇರುವ ನೀರಿನ ಬಗ್ಗೆ ಶಾಸಕಿ ಕೆ ಪೂರ್ಣಿಮಾ ತಲೆಕೆಡಿಸಿಕೊಳ್ಳುವಂತಿಲ್ಲ. ಮತ್ತೆ 5 ಟಿಎಂಸಿ ಹಂಚಿಕೆ ಮಾಡುವ ಮೂಲಕ ಅದನ್ನು ಸರಿದುಗಿಸಲಾಗುವುದು ಎಂದು ಹೇಳಿದರು.

ಇನ್ನೊಂದು ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಪೂರ್ಣ
ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ ಕ್ಯಾಬಿನೆಟ್ನಲ್ಲಿ ಅನುಮೋದನೆ ಪಡೆಯಲಿದೆ. ಇತ್ತ ಧರ್ಮಪುರ ಕೆರೆಯ ಜೊತೆಗೆ ಏಳು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇನ್ನೊಂದು ತಿಂಗಳ ಒಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ನಾನು ಸಿಎಂ ಆದ ಬಳಿಕ ಚಿತ್ರದುರ್ಗ ಜಿಲ್ಲೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದ್ದು, ಮುಂದಿನ ದಿನಗಳಲ್ಲಿ ಕಾಲೇಜು ಸ್ಥಾಪನೆಗೆ ನಾನೇ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ನೇರ ರೈಲು ಸಂಪರ್ಕ ಕಲ್ಪಿಸುವ ಯೋಜನೆಗೆ ಕೇಂದ್ರ ಸಚಿವರೊಂದಿಗೆ ಶೀಘ್ರದಲ್ಲೇ ಅಡಿಗಲ್ಲು ಹಾಕಲಾಗುತ್ತದೆ.ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಒಂದೇ ದಿನ ಹಲವಾರು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಅವರು ಹಿರಿಯೂರು ಕ್ಷೇತ್ರದಲ್ಲಿ ಸಾಮಾಜಿಕ ಅವಕಾಶ ಒದಗಿಸುತ್ತಾ ಬಂದಿದ್ದಾರೆ ಎಂದು ಪೂರ್ಣಿಮಾ ಅವರ ಕಾರ್ಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಇನ್ನು ಬಿಟ್ಟು ಹೋಗಿರುವ ಹರಿಯಬ್ಬೆ ಕೆರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನವ ಕರ್ನಾಟಕ ನವ ಭಾರತ ನಿರ್ಮಾಣ ಮಾಡೋಣ
ಜನರು ಭಾಗಿಯದಾಗ ನಿಜವಾದ ರಾಜ್ಯದ ಅಭಿವೃದ್ಧಿ ಆಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ 7 ಸಾವಿರ ಶಾಲಾ ಕೊಠಡಿ ನಿರ್ಮಾಣ ಮಾಡಲು ಕ್ರಮ ಕೈಗೊಂಡಿದೆ. ಶಿಥಿಲಗೊಂಡ ಶಾಲೆಗಳನ್ನು ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲಾಗುತ್ತಿದೆ. ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸುವ ಮೂಲಕ ಬಹಳಷ್ಟು ಸಾಧನೆ ಮಾಡಲಾಗಿದೆ. ಬಡವರಿಗೆ ನೊಂದವರಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದರು. ದುಡಿಯುವ ಕೈಗಳಿಗೆ ಧನಸಹಾಯ ಮಾಡಿದರೆ ರಾಜ್ಯ ಮತ್ತು ಜಗತ್ತು ಬದಲಾವಣೆ ತರಲು ಸಾಧ್ಯ ಎಂದರು. ಬಡ ರೈತರ ಮಕ್ಕಳ ಶಿಕ್ಷಣಕ್ಕೆ ಸುಮಾರು 14 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಕೊಡಲಾಗಿದೆ. ಈಗೆ ಸರ್ಕಾರ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ನವ ಕರ್ನಾಟಕ ನವ ಭಾರತ ನಿರ್ಮಾಣ ಮಾಡೋಣ ಎಂದು ಜನರಿಗೆ ಸಿಎಂ ಕರೆ ನೀಡಿದರು. ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ತ್ರಿಚಕ್ರ ವಾಹನ, ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಯೋಜನೆ ಸಲಕರಣೆಗಳನ್ನು ವಿತರಿಸಲಾಯಿತು.

ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ
ಹೌದು ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹಾಗೂ ಹೋಬಳಿಯ 7 ಕೆರೆಗಳಿಗೆ ನೀರು ತುಂಬಿಸುವ 90 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಶಂಕುಸ್ಥಾಪನೆ ಹಾಗೂ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಗೆ ಆಗಮಿಸಲಿದ್ದು ಹೊಸಳ್ಳಿ ಚೆಕ್ ಡ್ಯಾಂ ಬಳಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.
ವಾಣಿವಿಲಾಸ ಜಲಾಶಯದಿಂದ ನೀರು ವೇದಾವತಿ ನದಿಗೆ ಹರಿಸಿ, ಹೊಸಳ್ಳಿ ಬ್ಯಾರೇಜ್ ನಿಂದ ನೇರವಾಗಿ ಪೈಪ್ ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಮಾರ್ಗ ಮಧ್ಯ ಬರುವ ಮುಂಗಸವಳ್ಳಿ, ಸೂಗೂರು, ಅಬ್ಬಿನಹೊಳೆ, ಈಶ್ವರಗೆರೆ, ಗೂಳ್ಯ ಹಾಗೂ ಶ್ರವಣೆಗೆ ಕೆರೆಗಳಿಗೂ ಸಹ ನೀರು ತುಂಬಿಸಲಾಗುತ್ತಿದೆ.

ಎರಡು ಟಿಎಂಸಿಗೆ ಕಡಿತಗೊಳಿಸಿ ಜಿಲ್ಲೆಗೆ ದ್ರೋಹ ಬಗೆದ ಕಾಂಗ್ರೆಸ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕಳೆದ ಕಾಂಗ್ರೆಸ್ ಸರ್ಕಾರ ವಿವಿ ಸಾಗರಕ್ಕೆ ಮಂಜೂರಾಗಿದ್ದ ಐದು ಟಿಎಂಸಿ ನೀರನ್ನು ಎರಡು ಟಿಎಂಸಿಗೆ ಕಡಿತಗೊಳಿಸಿ ಜಿಲ್ಲೆಗೆ ದ್ರೋಹ ಬಗೆದಿದ್ದಾರೆ. ಆದ್ದರಿಂದ ಐದು ಟಿಎಂಸಿ ನೀರನ್ನು ಮುಂಜೂರು ಮಾಡುವಂತೆ ಸಿಎಂ ಗೆ ಮನವಿ ಮಾಡಿದರು. ಜೊತೆಗೆ ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋಗಿರುವ ಅಜ್ಜನಕಟ್ಟೆ ಕೆರೆಯನ್ನು ಸೇರಿಸುವಂತೆ ಒತ್ತಾಯಿಸಿದರು.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕಪೀಲ್ ಮುರೇಶ್, ನೀರಾವರಿ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಜಿಹೆಚ್. ತಿಪ್ಪಾರೆಡ್ಡಿ, ಎಂ. ಚಂದ್ರಪ್ಪ, ರಾಜೇಶ್ ಗೌಡ, ಎಂಎಲ್ಸಿಗಳಾದ ಕೆಎಸ್. ನವೀನ್, ಚಿದಾನಂದ ಎಂ. ಗೌಡ, ನಾರಾಯಣಸ್ವಾಮಿ. ಡಿಸಿ ಕವಿತಾ ಎಸ್ ಮಣ್ಣೀಕೆರಿ, ಅಧಿಕಾರಿಗಳು, ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.












Click it and Unblock the Notifications