20 ಅಡಿ ಜಡೆಯಿಂದಲೇ ಮನೆ ಮಾತಾಗಿದ್ದ ಶತಾಯುಷಿ ಪಾಲಯ್ಯ ನಿಧನ
ಚಿತ್ರದುರ್ಗ, ಅಕ್ಟೋಬರ್ 17: ದೇವರ ಹರಕೆಗೆಂದು ಸುಮಾರು 20 ಅಡಿವರೆಗೂ ತಲೆಗೂದಲು ಬಿಟ್ಟಿದ್ದ 103 ವರ್ಷದ ಶತಾಯುಷಿ ಜಡೆ ಪಾಲಯ್ಯ ನಿನ್ನೆ ನಿಧನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಾದ ಪಾಲಯ್ಯ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಜೀವನವಿಡೀ ಐದಾರು ಕೆ.ಜಿ. ತೂಕದ ತಲೆಗೂದಲನ್ನು ಹೊತ್ತುಕೊಂಡೇ ಬದುಕಿದ್ದ ಪಾಲಯ್ಯ ಜಿಲ್ಲೆಯಲ್ಲಿ "ಜಡೆ ಪಾಲಯ್ಯ" ಎಂದೇ ಪ್ರಸಿದ್ಧಿಯಾದವರು. ತಮ್ಮ ಅಷ್ಟುದ್ದದ ಜಡೆಯಿಂದಲೇ ಪಾಲಯ್ಯ ಮನೆ ಮಾತಾಗಿದ್ದರು. ಚಿತ್ರದುರ್ಗವಷ್ಟೇ ಅಲ್ಲದೇ ಆಂಧ್ರ ಪ್ರದೇಶದಲ್ಲೂ ತಮ್ಮ ಜಡೆಯಿಂದ ಹೆಸರು ಪಡೆದುಕೊಂಡಿದ್ದರು.
ಪಾಲಯ್ಯ ಅವರು ಹುಟ್ಟಿದಾಗಿನಿಂದಲೂ ತಲೆಗೂದಲಿಗೆ ಕತ್ತರಿ ಹಾಕಿರಲಿಲ್ಲ. ಹಸು, ಹೋರಿಗಳನ್ನು ಸಾಕಿ ಸಲಹುತ್ತಿದ್ದ ಪಾಲಯ್ಯ, ತಮ್ಮ ಮನೆ ದೇವರು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಹರಕೆಯ ಎತ್ತುಗಳಿಗೆ ಪಾಲಕನಾಗಿದ್ದರು. ಮಲ್ಲಿಕಾರ್ಜುನ ಸ್ವಾಮಿಗೆ ಜಡೆಯನ್ನು ಹರಕೆ ಬಿಟ್ಟಿದ್ದರು. ಕೊನೆವರೆಗೂ ಗೋವು ಪಾಲಕರಾಗಿಯೇ ಜೀವನ ನಡೆಸಿಕೊಂಡು ಬಂದಿದ್ದ ಪಾಲಯ್ಯ ತಮ್ಮ 103ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರಿಗೆ ಪತ್ನಿ, ಐವರು ಪುತ್ರರು, ಮೂವರು ಪುತ್ರಿಯರು ಇದ್ದಾರೆ. ಇಂದು ಇವರ 20 ಅಡಿಯ ಜಡೆಯನ್ನು ಸಮಾಧಿಯಲ್ಲಿ ಹಾಸಿ ಅದರ ಮೇಲೆಯೇ ಮೃತದೇಹವನ್ನು ಮಲಗಿಸಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.












Click it and Unblock the Notifications