ಹಿರಿಯೂರು: ಜೆ.ಜೆ.ಹಳ್ಳಿ ಬಳಿ ದಾಖಲೆ ಇಲ್ಲದ ₹1.44 ಕೋಟಿ ಹಣ ವಶ
ಹಿರಿಯೂರು, ಮಾರ್ಚ್, 23: ತಾಲೂಕಿನ ಜವನಗೊಂಡನಹಳ್ಳಿ ಗಡಿ ಬಳಿ ಪರಿಶೀಲನೆ ನಡೆಸುವ ವೇಳೆ ಯಾವುದೇ ದಾಖಲೆಯಿಲ್ಲದ 1.44 ಕೋಟಿ ರೂಪಾಯಿ ಸಾಗಾಟ ಮಾಡುತ್ತಿದ್ದ ಸಿಎಂಎಸ್ ಕಂಪನಿಯ ವಾಹನ ದೊರಕಿದೆ. ಹಿರಿಯೂರು ತಹಶೀಲ್ದಾರ್ ರಾಜೇಶ್, ಹಿರಿಯೂರು ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಂಚಾರಿ ಜಾರಿ ದಳದ ಅಧಿಕಾರಿಗಳು ಹಣ ಜಪ್ತಿ ಮಾಡಿ ವಾಹನ ವಶಕ್ಕೆ ಪಡೆದಿದ್ದಾರೆ. ಇನ್ನು ಈ ವಿಚಾರಣೆ ಪ್ರಗತಿಯಲ್ಲಿದೆ.
ಎಟಿಎಂಗಳ ಹಣ ನಿರ್ವಹಣೆ ಮಾಡವ ಸಿಎಂಎಸ್ ಕಂಪನಿಯ ತುಮಕೂರಿನಿಂದ ಶಿರಾ ತಾಲ್ಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ ಶಿರಾ ತಾಲ್ಲೂಕು ಹೊರತುಪಡಿಸಿ ಹಿರಿಯೂರು ತಾಲ್ಲೂಕು ಗಡಿ ಪ್ರವೇಶಿಸಿದೆ. ಈ ಕುರಿತು ವಿಚಾರಿಸಿದಾಗ ಹಿರಿಯೂರು ಗಡಿ ಪ್ರವೇಶಿಸಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಪ್ರಸ್ತುತ ಪಡಿಸಿರುವುದಿಲ್ಲ.

ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಚಿತ್ರದುರ್ಗ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯ. ಆದ್ದರಿಂದ 1.44 ಕೋಟಿ ರೂಪಾಯಿ ಹಣ ಹಾಗೂ ವಾಹನ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾಗಿ ತಹಶೀಲ್ದಾರ್ ರಾಜೇಶ್ ತಿಳಿಸಿದ್ದಾರೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಶಪಡಿಸಿಕೊಂಡ ಹಣವನ್ನು ಸೂಕ್ತ ವಿಚಾರಣೆಯ ಬಳಿಕೆ ಜಿಲ್ಲಾ ಪಂಚಾಯತಿ ಸಿಇಓ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ದಾಖಲೆ ಇಲ್ಲದ 1.50 ಲಕ್ಷ ರೂಪಾಯಿ ವಶ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ದಾಖಲೆ ಇಲ್ಲದೆ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ತುರುವನೂರು ಹೋಬಳಿ ಚೆಕ್ಪೋಸ್ಟ್ನಲ್ಲಿ ಶನಿವಾರ (ಮಾರ್ಚ್ 23) ವಶಕ್ಕೆ ಪಡೆಯಲಾಗಿದೆ.
ಎಫ್ಎಸ್ಟಿ ತಂಡದ ಮುಖ್ಯಸ್ಥ ಟಿ.ಕೆ.ಸಂತೋಷ್ ಕುಮಾರ್ ಅವರು ತುರುವನೂರು ಹೋಬಳಿ ಚೆಕ್ಪೋಸ್ಟ್ನಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಾಹನಗಳನ್ನು ಪರಿಶೀಲನೆ ಮಾಡುವಾಗ ಕೊಪ್ಪಳದ ಇರ್ಪಾನ್ ಶೇಕ್ ಬಿನ್ ದಾದಾಪೀರ್ ಎಂಬುವರು ಕಾರಿನಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 1.50 ಲಕ್ಷ ರೂಪಾಯಿ ಹಣವನ್ನು ಎಫ್ಎಸ್ಟಿ ತಂಡ ತಪಾಸಣೆ ನಡೆಸಿ, ಹಣ ವಶಪಡಿಸಿಕೊಂಡಿದೆ.
ಜಪ್ತಿ ಪಡಿಸಿಕೊಂಡ ಹಣವನ್ನು ನಗದು ವಶಪಡಿಸಿಕೊಳ್ಳುವ ಪರಿಹಾರ ಸಮಿತಿ ಗಮನಕ್ಕೆ ತಂದಿದ್ದು, ಈ ಹಣವನ್ನು ಚಳ್ಳಕೆರೆಯ ಉಪ ಖಜಾನೆಯ ಭದ್ರತಾ ಕೊಠಡಿಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ.












Click it and Unblock the Notifications