ಚಿಕ್ಕಮಗಳೂರಿನಲ್ಲಿ ಪ್ರೀತಿ ನಿರಾಕರಿಸಿದ ಯುವತಿಯ ಸಾವಿಗೆ ಟ್ವಿಸ್ಟ್
ಚಿಕ್ಕಮಗಳೂರು, ಫೆಬ್ರವರಿ 05: ಯುವಕನ ಪ್ರೀತಿಯನ್ನು ನಿರಾಕರಿಸಿದ ಕಾರಣ ಯುವತಿಯನ್ನು ಆಟೋದಿಂದ ತಳ್ಳಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದ ರಶ್ಮಿ ಎಂಬ ವಿದ್ಯಾರ್ಥಿನಿ ನಿನ್ನೆ ಕಾಲೇಜು ಮುಗಿಸಿಕೊಂಡು ಬರುವ ವೇಳೆ ಆಟೋದಿಂದ ಬಿದ್ದು ಸಾವನ್ನಪ್ಪಿದ್ದಳು. ಈ ವೇಳೆ ತಲೆತಿರುಗಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಬಾನಳ್ಳಿ ಗ್ರಾಮದ ಆಟೋ ಚಾಲಕ ಚೇತನ್ ಎಂಬಾತ, ರಶ್ಮಿಯನ್ನು ಹಲವು ದಿನಗಳಿಂದ ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದ. ಮೂಡಿಗೆರೆ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಬಿ ಕಾಂ ಓದುತ್ತಿದ್ದ ರಶ್ಮಿಗೆ ಈ ಪಾಗಲ್ ಪ್ರೇಮಿ ಚೇತನ್ ಕಾಟ ದಿನೇ ದಿನೇ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.

ಇದರ ಕುರಿತು ಈ ಹಿಂದೆ ರಶ್ಮಿಯ ಪೋಷಕರು ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಪೊಲೀಸರು ಬುದ್ದಿ ಹೇಳಿ ವಿದ್ಯಾರ್ಥಿನಿಯ ಸಹವಾಸಕ್ಕೆ ಬರದಂತೆ ತಾಕೀತು ಮಾಡಿದ್ದರು.
ಆದರೆ ನಿನ್ನೆ ಈತ ಬಲವಂತವಾಗಿ ರಶ್ಮಿಯನ್ನು ತನ್ನ ಆಟೋದಲ್ಲಿ ಕೂರಿಸಿಕೊಂಡು ಬಂದು ಮೂಡಿಗೆರೆ ಸಮೀಪದ ಬಸವನಹಳ್ಳಿ ಬಳಿ ಆಟೋದಿಂದ ರಶ್ಮಿಯನ್ನು ಕೆಳಗೆ ತಳ್ಳಿದ್ದಾನೆ. ಅಲ್ಲದೇ ಈತನೇ ಆಸ್ಪತ್ರೆಗೆ ದಾಖಲು ಮಾಡಿ ರಶ್ಮಿ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ, ಅಲ್ಲದೇ ತಾನೇ ಹಾಸನಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿಯೂ ಹೇಳಿದ್ದಾನೆ.

ಆದರೆ ಹೆಚ್ಚಿನ ಚಿಕಿತ್ಸೆಗೆ ರಶ್ಮಿಯನ್ನು ಹಾಸನಕ್ಕೆ ಕರೆದುಕೊಂಡು ಹೋಗಿದ್ದು ರಶ್ಮಿ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ರಶ್ಮಿ ಸಾವನ್ನಪ್ಪಿದ್ದಾಳೆ. ಇತ್ತ ರಶ್ಮಿ ತಂದೆ ಆಟೋ ಚಾಲಕ ಚೇತನ್ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications