ಶೃಂಗೇರಿ ಸಾಹಿತ್ಯ ಸಮ್ಮೇಳನ; ಮನು ಬಳಿಗಾರ್ ವಿರುದ್ಧ ಸಾಹಿತಿ ಕುಂ.ವೀರಭದ್ರಪ್ಪ ಆಕ್ರೋಶ
ಚಿಕ್ಕಮಗಳೂರು, ಜನವರಿ 10: ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರವಾಗಿ ವಿರೋಧ ವ್ಯಕ್ತಗೊಂಡು, ವಿವಾದ, ಗೊಂದಲಗಳಿಗೆ ಕಾರಣವಾಗಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಕುರಿತು ಹಿರಿಯ ಸಾಹಿತಿ ಕುಂ ವೀರಭದ್ರಪ್ಪ ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮನು ಬಳಿಗಾರ್ ವಿರುದ್ಧ ಕುಂ ವೀರಭದ್ರಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದು, "ಸರ್ಕಾರದ ಮುಂದೆ ಕನ್ನಡ ಸಾಹಿತ್ಯ ಪರಿಷತ್ತನ್ನು ಮಂಡಿಯೂರಿಸಿ ಸಮರ್ಪಿಸಿದ್ದು ಆಘಾತಕಾರಿ. ಶೃಂಗೇರಿ ಸಮ್ಮೇಳನ ರಾಜಕಾರಣ ಮತ್ತು ಸಾಹಿತ್ಯದ ಗುಪ್ತಮುಖವನ್ನು ಅನಾವರಣಗೊಳಿಸಿದೆ. ಹಣ ನೀಡಿ ಆಶೀರ್ವಾದ ಮಾಡುವ ದೇವರುಗಳನ್ನು ಸಾಹಿತ್ಯ ನಂಬುವುದಿಲ್ಲ. ನಾವು ಇಂದು ಅಪಾಯಕಾರಿ ಸನ್ನಿವೇಶದಲ್ಲಿ ಇದ್ದೇವೆ" ಎಂದಿದ್ದಾರೆ.
"ಆರ್ ಎಸ್ ಎಸ್, ಭಜರಂಗದಳದ ಕಪಿಮುಷ್ಟಿಯಲ್ಲಿ ರಾಜಕಾರಣ ಸಿಲುಕಿದೆ. ಸಮ್ಮೇಳನಕ್ಕೆ ಸರ್ಕಾರ ನೀಡುವ ಹಣ ಅವರಪ್ಪನ ಮನೆಯ ಖಜಾನೆಯದ್ದಲ್ಲ. ಕನ್ನಡಿಗರ ತೆರಿಗೆಯ ಹಣವನ್ನು ಉದಾರವಾಗಿ ನೀಡಬೇಕು. ಪ್ರತಿಭಟನೆ, ಪ್ರತಿರೋಧ ಸಾಹಿತ್ಯದ ಮೂಲದ್ರವ್ಯ. ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸದಿರುವವನು ಲೇಖಕನೇ ಅಲ್ಲ.

ಕಲ್ಕುಳಿ ವಿಠಲ ಹೆಗಡೆ ಪರಿಸರನಾಶದ ವಿರುದ್ಧ ಹೋರಾಟ ಮಾಡಿದವರು ಹಾಗೂ ಅವರೊಬ್ಬ ಚಿಂತಕ. ಅವರನ್ನು ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ " ಎಂದರು.
"ಸಂಘ ಪರಿವಾರ ಹೇಳಿದವರನ್ನು ಆಯ್ಕೆ ಮಾಡಬೇಕು, ನಾವು ಏನು ಊಟ ಮಾಡಬೇಕು, ಯಾವ ಬಟ್ಟೆ ತೊಡಬೇಕು ಎಂಬುದನ್ನು ಸೂಚಿಸುವುದು ಫ್ಯಾಸಿಸಂ. ಇದು ಅಫ್ಘಾನಿಸ್ತಾನದ ತಾಲಿಬಾನ್ ಧೋರಣೆ" ಎಂದು ಖಂಡಿಸಿದ್ದಾರೆ.












Click it and Unblock the Notifications