ಚಿಕ್ಕಮಗಳೂರಿನಲ್ಲಿ ಮಿತಿಮೀರಿದ ಕಾಡಾನೆ ಹಾವಳಿ: ಗಣಪತಿಕಟ್ಟೆ ಗ್ರಾಮಸ್ಥರಲ್ಲಿ ಆತಂಕ
ಚಿಕ್ಕಮಗಳೂರು, ಜನವರಿ 4: ಕಾಡಾನೆಗಳು ರಾತ್ರಿ ವೇಳೆ ಮನೆ ಬಾಗಿಲಿಗೆ ಬರುತ್ತಿದ್ದು ಹಳ್ಳಿಗರು ಸಂಜೆಯಾಗುತ್ತಿದ್ದಂತೆ ಮನೆಯಿಂದ ಹೊರಬರುವುದಕ್ಕೆ ಭಯಪಡುವಂತಹ ಸ್ಥಿತಿ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಗಣಪತಿಕಟ್ಟೆ ಗ್ರಾಮದಲ್ಲಿ ನಿರ್ಮಾಣವಾಗಿದೆ.
ಕಳಸ ತಾಲೂಕಿನ ಗಣಪತಿಕಟ್ಟೆಯಲ್ಲಿ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತ ಸ್ಥಳಿಯರಲ್ಲಿ ಆತಂಕ ಹುಟ್ಟಿಸಿದೆ. ಅರಣ್ಯ ಅಧಿಕಾರಿಗಳು ಆನೆಗಳನ್ನ ಓಡಿಸಲು ಹುಡುಕಾಡುತ್ತಾ ಹರಸಾಹಸ ಪಡುತ್ತಿದ್ದಾರೆ. ಆದರೆ, ಒಮ್ಮೆ ಒಂದು ಜಾಗದಲ್ಲಿ ಕಂಡರೆ ಮತ್ತೊಮ್ಮೆ ಮತ್ತೊಂದು ಜಾಗಕ್ಕೆ ಹೋಗುತ್ತಿರುವುದರಿಂದ ಸ್ಥಳೀಯರು ಹಾಗೂ ಅಧಿಕಾರಿಗಳು ಹೈರಾಣಾಗಿದ್ದಾರೆ.
ಗಣಪತಿಕಟ್ಟೆ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿದೆ. ಈ ಮಾರ್ಗದಲ್ಲಿ ಹೆಚ್ಚಾಗಿ ವಾಹನಗಳು ಓಡಾಡುವುದರಿಂದ ಭಕ್ತರು ಹಾಗೂ ಪ್ರವಾಸಿಗರು ಭಯಗೊಂಡಿದ್ದಾರೆ. ಗಣಪತಿಕಟ್ಟೆಯಲ್ಲೇ ಬೀಡು ಬಿಟ್ಟಿರುವ ಎರಡು ಕಾಡಾನೆಗಳು ರಾತ್ರಿ ವೇಳೆ ಮನೆ ಬಳಿಯೇ ಬರುತ್ತಿವೆ. ಸ್ಥಳೀಯರು ಮನೆ ಬಳಿ ಬಂದ ಕಾಡಾನೆಗಳ ಓಡಾಟವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ದೌಡಾಯಿಸಿದ 20 ಸಿಬ್ಬಂದಿಯುಳ್ಳ ಅಧಿಕಾರಿಗಳ ತಂಡದ ಜೊತೆ ಸ್ಥಳೀಯರು ಕೂಡ ಆನೆ ಓಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನೇ ದಿನೇ ಕಾಡಾನೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ರೈತರು ಹಾಗೂ ಕಾಫಿ ಬೆಳೆಗಾರರು, ತೋಟಗಾರಿಕೆ ಮಾಡುವವರು ಹೈರಾಣಾಗಿ ಹೋಗಿದ್ದಾರೆ.
ಕಾಡಾನೆಗಳ ಹಿಂಡು ದಾಂದಲೆ ಮಾಡಿದ ಪರಿಣಾಮ ಸುಮಾರು ನಾಲ್ಕು ಎಕರೆ ಅಡಿಕೆ-ಬಾಳೆ ತೋಟ ಬಹುತೇಕ ನಾಶವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ನಂದಿಬಟ್ಲು ಗ್ರಾಮದಲ್ಲಿ ಕಳೆದ ವಾರ ನಡೆದಿದೆ.

ಡಿಸೆಂಬರ್ ತಿಂಗಳಿಂದ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸುತ್ತಮುತ್ತ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಸಿಡಿಸಿದಾಗ ಕಾಡಿನಲ್ಲಿ ಕಣ್ಮರೆಯಾಗುವ ಕಾಡಾನೆಗಳ ಹಿಂಡು ಮರುದಿನ ಬೆಳಗ್ಗೆ ಮತ್ತೆ ಹೊಲ-ಗದ್ದೆ-ತೋಟಗಳಲ್ಲಿ ಬೀಡು ಬಿಟ್ಟಿರುತ್ತದೆ. ಲಿಂಗದಹಳ್ಳಿ ಸಮೀಪದ ನಂದಿಬಟ್ಲು ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಾಲ್ಕು ಎಕೆರೆ ಅಡಿಕೆ-ಬಾಳೆ ತೋಟವನ್ನ ನಾಶಮಾಡಿವೆ. ಇನ್ನೊಂದು ವರ್ಷ ಕಳೆದಿದ್ದರೆ ಅಡಿಕೆ ಫಸಲು ಬರುತ್ತಿತ್ತು. ಬೆಳೆ ಬರುವ ಸಮಯದಲ್ಲಿ ತೋಟವನ್ನ ಕಳೆದುಕೊಂಡು ಬೆಳೆಗಾರ ಕಂಗಾಲಾಗಿದ್ದಾನೆ. ಲಿಂಗದಹಳ್ಳಿಯಲ್ಲಿ ಕಾಡಾನೆಗಳ ಹಿಂಡು ದಾಂದಲೆ ಮಾಡುತ್ತಿರುವ ಕಾರಣ ಈಗಾಗಲೇ ಹಲವು ರೈತರು ತಮ್ಮ ಬೆಳೆಗಳನ್ನ ಕಳೆದುಕೊಂಡಿದ್ದಾರೆ. ಇಷ್ಟಾದರೂ ಆನೆಗಳನ್ನು ಓಡಿಸದ ಅರಣ್ಯ ಇಲಾಖೆ ವಿರುದ್ಧ ನೂರಾರು ರೈತರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications