ಹಿಂದೂಗಳನ್ನು ರಕ್ಷಿಸಲು 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ: ಪ್ರಮೋದ್ ಮುತಾಲಿಕ್
ಚಿಕ್ಕಮಗಳೂರು, ನವೆಂಬರ್, 14: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳನ್ನು ಸ್ವತಂತ್ರವಾಗಿ 25 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.
ದತ್ತಪೀಠದ ಆವರಣದಲ್ಲಿ ಮಾತನಾಡಿದ ಅವರು, ಸದ್ಯ ದೇಶದಲ್ಲಿ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಹೊರತುಪಡಿಸಿ ಮತ್ಯಾರು ಹಿಂದೂ ಧರ್ಮ ಹಾಗೂ ಹಿಂದುಗಳ ಉಳಿವಿಗಾಗಿ ಪ್ರಮಾಣಿಕವಾಗಿ ಪ್ರಯತ್ನ ಮಾಡುತ್ತಿಲ್ಲ. ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಮೂಲಕ ಅಧಿಕಾರಕ್ಕೆ ಏರಿದ ಬಹುತೇಕ ಶಾಸಕರು, ಮಂತ್ರಿಗಳು ಹಿಂದುಗಳ ಪರವಾಗಿ ಕೆಲಸ ಮಾಡುತ್ತಿಲ್ಲ. ಅವರೆಲ್ಲೂ ಡೋಂಗಿ ಹಿಂದುತ್ವವಾದಿಗಳಾಗಿದ್ದಾರೆ ಎಂದರು.
ಸಿ.ಟಿ. ರವಿಗೆ ದತ್ತಪೀಠದ ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ; ಚಿಕ್ಕಮಗಳೂರಿನಲ್ಲಿ ಮುತಾಲಿಕ್ ಆಕ್ರೋಶ
ಹಿಂದುತ್ವಕ್ಕಾಗಿ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ಗಳನ್ನು ಹಾಕಲಾಗಿದೆ. ಕೆಲವರು ಗೂಂಡಾ ಕೇಸ್ ಹಾಕಿಸಿಕೊಂಡು ಓಡಾಡುತ್ತಿದ್ದಾರೆ. ಅವರ ರಕ್ಷಣೆಗೆ ಬಿಜೆಪಿ ಸರ್ಕಾರ ಕ್ರಮವನ್ನು ಕೈಗೊಂಡಿಲ್ಲ. ಕೆಲ ಹಿಂದೂ ಕಾರ್ಯಕರ್ತರು ಕೊಲೆ ಆಗಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಗೆದ್ದವರಿಗೆ ಹಿಂದೂಗಳ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಪ್ರಖರ ಹಿಂದುತ್ವವಾದಿಗಳು, ಸ್ವಾಮೀಜಿಗಳನ್ನು ಚುನಾವಣಾ ಕಣಕ್ಕಿಳಿಸಲಾಗುವುದು. ರಾಜಕೀಯ ಅಧಿಕಾರ ಪಡೆದು ಹಿಂದುಗಳ ರಕ್ಷಣೆ ಮಾಡುತ್ತೇವೆ. ದತ್ತಪೀಠಕ್ಕೆ ಮುಕ್ತಿ ನೀಡುತ್ತೇವೆ. ಮುಂದಿನ ವರ್ಷದ ದತ್ತಮಾಲೆ ಅಭಿಯಾನ ನಮ್ಮ ಕೊನೆ ಅಭಿಯಾನ ಆಗಲಿದೆ ಎಂದರು.
ಬಿಜೆಪಿ ವಿರುದ್ಧ ಮುತಾಲಿಕ್ ವಾಗ್ದಾಳಿ
ಬಿಜೆಪಿ ಹುಟ್ಟಿದ್ದೇ ಹಿಂದುತ್ವಕ್ಕಾಗಿ, ಪಾರ್ಲಿಮೆಂಟ್, ವಿಧಾನಸಭೆಯಲ್ಲಿ ಹಿಂದೂಗಳ ರಕ್ಷಣೆ ಮಾಡುತ್ತೇವೆ ಎಂದು ಗೆದ್ದವರು ಈಗ ಮೌನ ವಹಿಸಿದ್ದಾರೆ. ಬಿಜೆಪಿಯವರು ಕಳೆದ 25 ವರ್ಷಗಳಿಂದ ದತ್ತಪೀಠದ ಹೆಸರು ಹೇಳಿಕೊಂಡು ಲಾಭ ಪಡೆದಿದ್ದಾರೆ. ಇನ್ನು ಇವರನ್ನು ನಂಬಲು ಸಾಧ್ಯವಿಲ್ಲ. ನಾವು ರಾಜಕೀಯ ಅಧಿಕಾರ ಪಡೆದು ದತ್ತಪೀಠಕ್ಕೆ ಮುಕ್ತಿ ನೀಡುತ್ತೇವೆ. ಗೋಹತ್ಯೆಯನ್ನು ತಡೆಯುತ್ತೇವೆ, ಮತಾಂತರಕ್ಕೆ ಕಡಿವಾಣ ಹಾಕುತ್ತೇವೆ, ಲವ್ ಜಿಹಾದ್ ನಿಲ್ಲಿಸುತ್ತೇವೆ ಎಂದು ದತ್ತಪೀಠದಲ್ಲಿ ಸಂಕಲ್ಪ ಮಾಡಿದ್ದೇವೆ ಎಂದರು.
ದತ್ತಮಾಲಾ ಅಭಿಯಾನ: ಹೊಸ ಆಚರಣೆಗೆ ಅವಕಾಶ ಇಲ್ಲ ಎಂದ ಚಿಕ್ಕಮಗಳೂರು ಜಿಲ್ಲಾಧಿಕಾರಿ
ಸಿ.ಟಿ. ರವಿ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ
''ರಾಮನ ಜನ್ಮಸ್ಥಾನಕ್ಕಾಗಿ ಐನೂರು ವರ್ಷ ಹೋರಾಟ ಮಾಡಬೇಕಾಯಿತು. ಅದೇ ಮಾದರಿಯಲ್ಲಿ ದತ್ತಪೀಠದ ಹೋರಾಟವನ್ನು 500 ವರ್ಷಕ್ಕೆ ತೆಗೆದುಕೊಂಡು ಹೋಗುತ್ತಿದ್ದೀರಿ, ನಿಮಗೆ ನಾಚಿಕೆ ಆಗಬೇಕು. ನಮ್ಮ ಕೊನೆ ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಟ ಮಾಡುತ್ತೇವೆ'' ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ. ರವಿ ವಿರುದ್ಧ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದರು. ಅಧಿಕಾರ ಇರುವಾಗಲೇ ಹಿಂದೂ ಅರ್ಚಕರನ್ನು ನೇಮಿಸಿ ಸಂಸ್ಯೆಯನ್ನು ಪರಿಹರಿಸಿ ಎಂದು ಕೋರ್ಟ್ ಹೇಳಿದೆ.
ಕೋರ್ಟ್ ಹೇಳಿದ 24 ಗಂಟೆಯ ಒಳಗಡೆ ಅರ್ಚಕರನ್ನು ನೇಮಿಸಬಹುದಿತ್ತು. ಅರ್ಚಕರನ್ನು ನೇಮಿಸಿ ಪೂಜೆ ಪ್ರಾರಂಭ ಮಾಡಿದರೆ ನಿಮ್ಮಪ್ಪನ ಗಂಟು ಏನು ಹೋಗುತ್ತಿತ್ತು ಸಿ.ಟಿ ರವಿಯವರೇ? ಸ್ಟೇ ತರುತ್ತಾರೆ ಅಂತಾ ಭಾರಿ ದೊಡ್ಡ ದೊಡ್ಡ ಮಾತನಾಡುತ್ತೀರಿ. ಯಾರು ಸ್ಟೇ ತರುತ್ತಾರೆ? ಮುಸ್ಲಿಮರ ಜೊತೆ ಕುಳಿತುಕೊಂಡು ಸೌಹಾರ್ದತೆಯಿಂದ ಬಗೆಹರಿಸಲು ಆಗುವುದಿಲ್ಲವಾ? ಪರಿಹರಿಸಲು ಇಚ್ಛಾಶಕ್ತಿ ಬೇಕಾಗಿದೆ. ಅದಿಲ್ಲದ ಪರಿಣಾಮದಿಂದ ರಾಜಕೀಯ ನಾಟಕ ಆಡುತ್ತಿದ್ದೀರಿ ನೀವು. ಆದರೆ ನಾವು ನಮ್ಮ ಕೊನೆ ಉಸಿರು ಇರುವವರೆಗೂ ದತ್ತಪೀಠಕ್ಕಾಗಿ ಹೋರಾಡುತ್ತೇವೆ," ಎಂದು ಶಾಸಕ ಸಿ.ಟಿ ರವಿ ವಿರುದ್ಧ ಪ್ರಮೋದ್ ಮುತಾಲಿಕ್ ಹರಿಹಾಯ್ದಿದ್ದರು.
ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ
ನಗರದಲ್ಲಿ ಶ್ರೀರಾಮಸೇನೆಯಿಂದ ದತ್ತಮಾಲಾ ಅಭಿಯಾನ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ದತ್ತವಿಗ್ರಹ ಮೆರವಣಿಗೆಯನ್ನು ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಆರಂಭಿಸಿದ್ದು, ಶೋಭಾಯಾತ್ರೆಯಲ್ಲಿ ಸಾವಿರಾರು ದತ್ತಮಾಲಾಧಾರಿಗಳು ಭಾಗಿ ಆಗಿದ್ದರು. ಹೊರಜಿಲ್ಲೆಗಳಿಂದಲೂ ಸಾವಿರಾರು ದತ್ತಮಾಲಾಧರಿಗಳು ಆಗಮಿಸಿದ್ದರು. ಒಂದು ಸಾವಿಕ್ಕೂ ಅಧಿಕ ಪೊಲೀಸರ ಬಿಗಿ ಬಂದೋಬಸ್ತ್ ನಡುವೆ ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆಯಲ್ಲಿ ಶೋಭಾಯಾತ್ರೆ ಸಾಗಿಸಲಾಗಿದೆ.
ದತ್ತಪಾದುಕೆ ದರ್ಶನ ಪಡೆದ ಭಕ್ತರು
ನಾಸಿಕ್, ಡೋಲು, ಭಗವಧ್ವಜದೊಂದಿಗೆ ಯಾತ್ರೆ ಸಾಗಿದೆ. ಶೋಭಾಯಾತ್ರೆ ಬಳಿಕ ದತ್ತಪಾದುಕೆ ದರ್ಶನ ದತ್ತಪೀಠಕ್ಕೆ ತೆರಳಿದ್ದು, ದತ್ತಪೀಠದಲ್ಲೂ ಸಹ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶ್ರೀರಾಮಸೇನೆ ವತಿಯಿಂದ ನಡೆದ ದತ್ತಮಾಲಾ ಅಭಿಯಾನಕ್ಕೆ ತೆರೆ ಬಿದ್ದಂತಾಗಿದೆ. ಕಳೆದ ಏಳು ದಿನಗಳಿಂದ ಮಾಲೆ ಧರಿಸಿ ದತ್ತಮಾಲಾಧಾರಿಗಳು ವ್ರತದಲ್ಲಿದ್ದರು. ದತ್ತಭಕ್ತರು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ಪಡೆದಿದ್ದಾರೆ. 9 ಗಂಟೆಗೆ ಚಿಕ್ಕಮಗಳೂರು ನಗರದ ಶಂಕರಮಠ ಮುಂಭಾಗದಲ್ಲಿ ಬಹಿರಂಗ ಸಮಾವೇಶ ನಡೆದಿತ್ತು.