ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ವಿನಯ್ ಗುರೂಜಿ ಸಾಥ್
ಚಿಕ್ಕಮಗಳೂರು, ಫೆಬ್ರವರಿ 18: ತೀವ್ರ ಆರ್ಥಿಕ ಸಂಕಷ್ಟದಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿರುವ ಕೊಪ್ಪದ ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಸಹಕಾರ ಸಾರಿಗೆ ಕಾರ್ಮಿಕರ ಪ್ರತಿಭಟನೆಗೆ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿನಯ್ ಗುರೂಜಿ, ""ನನ್ನ ಒಬ್ಬನ ವಾಯ್ಸ್ ನಿಂದ ಏನು ಆಗಲ್ಲ. ಎಲ್ಲರ ವಾಯ್ಸ್ ಸೇರಿದರೆ ಖಂಡಿತ ಇದಕ್ಕೆ ಇದೊಂದು ದೊಡ್ಡ ಪ್ರತಿಭಟನೆಯಾಗುತ್ತದೆ'' ಎಂದರು.
ಸ್ಥಗಿತಗೊಳ್ಳುವ ಭೀತಿಯಲ್ಲಿ ಕೊಪ್ಪದ ಸಹಕಾರ ಸಾರಿಗೆ: ಸಿಎಂ ಆದೇಶಕ್ಕೂ ಬೆಲೆಯಿಲ್ಲ
ಈ ವಿಚಾರವಾಗಿ ಮೂರು ಪಕ್ಷದವರು ರಾಜಕೀಯ ಮರೆತು ಪ್ರಯತ್ನಿಸಿದರೆ ನೂರಕ್ಕೆ ನೂರರಷ್ಟು ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ. ನೀವು ಉಪವಾಸ ಮಾಡಿದರೆ, ನಾನು ಹಾಗೂ ನಮ್ಮ ಆಶ್ರಮದವರು ನಿಮ್ಮ ಪರವಾಗಿ ಉಪವಾಸ ಮಾಡುತ್ತೇವೆ ಎಂದು ಹೇಳಿದರು.
ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ಗ್ರಾಮೀಣ ಸಾರಿಗೆಯ ಜೀವನಾಡಿಯಾಗಿದ್ದ ಸಹಕಾರ ಸಾರಿಗೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಸಾರಿಗೆ ಸಂಸ್ಥೆಗೆ ಅನುದಾನ ನೀಡಲು ಒಪ್ಪಿಗೆ ಕೊಟ್ಟರೂ ಹಣಕಾಸು ಇಲಾಖೆ ಅಧಿಕಾರಿಗಳಿಂದ ತಿರಸ್ಕರಿಸಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅನುದಾನ ನೀಡೋಕೆ ಕಳೆದ ವರ್ಷವೇ ಹಣಕಾಸು ಇಲಾಖೆಗೆ ಸೂಚಿಸಿದ್ದರು. ಆದರೆ ಹಣಕಾಸು ಇಲಾಖೆಯಿಂದ ಸಹಕಾರ ಸಾರಿಗೆಗೆ ಅನುದಾನ ನೀಡೋಕೆ ಸಾಧ್ಯವಿಲ್ಲ ಅನ್ನೋ ಉತ್ತರ ಬಂದಿದೆ. ಹೀಗಾಗಿ ಸರ್ಕಾರದಿಂದ ಆರ್ಥಿಕ ಸಹಾಯ ಸಿಗದಿರುವ ಕಾರಣ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಗರದಲ್ಲಿ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಂದ ಪ್ರತಿಭಟನೆ ನಡೆಯುತ್ತಿದೆ.