ಚಂದ್ರಶೇಖರ್ ಸಾವು ಪ್ರಕರಣ: ವಿನಯ್ ಗುರೂಜಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರು
ಚಿಕ್ಕಮಗಳೂರು, ನವೆಂಬರ್ 7: ನಿಗೂಢವಾಗಿ ನಾಪತ್ತೆಯಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಗುರುವಾರ ತುಂಗಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಚಂದ್ರಶೇಖರ್ ಸಾವಿನ ಪ್ರಕರಣ ಚುರುಕುಗೊಂಡಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಚಂದ್ರಶೇಖರ್ ಸಾವಿನ ಬಗ್ಗೆ ವರದಿ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ ಬೆನ್ನಲ್ಲೇ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಚಿಕ್ಕಮಗಳೂರಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಂದ್ರಶೇಖರ್ ಸಾವು: ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಕಳೆದುಕೊಂಡರಾ ರೇಣುಕಾಚಾರ್ಯ?
ವಿನಯ್ ಗುರೂಜಿ ಬಳಿ ಸಮಸ್ಯೆ ಹೇಳಿಕೊಂಡಿದ್ದರಾ ಚಂದ್ರು..?
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆಯ ಪಿಎಸ್ಐ ನೇತೃತ್ವದ ನಾಲ್ವರ ತನಿಖಾ ತಂಡ ನಾಲ್ಕು ಬಾರಿ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಆಶ್ರಮದ ಸಿಬ್ಬಂದಿ, ಆಶ್ರಮದ ಉಸ್ತುವಾರಿ ವಹಿಸಿರುವ ಭಕ್ತರಿಂದ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು..? ಭೇಟಿ ವೇಳೆ ಏನಾದರೂ ಸಮಸ್ಯೆಯನ್ನು ನಿಮ್ಮೊಂದಿಗೆ ಹೇಳಿಕೊಂಡಿದ್ದರಾ..? ಚಂದ್ರು, ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾ..? ಈ ಎಲ್ಲಾ ಪ್ರಶ್ನೆಗಳನ್ನು ಪೊಲೀಸರು ವಿನಯ್ ವಿನಯ್ ಗುರೂಜಿ ಅವರ ಬಳಿ ಕೇಳಿದ್ದಾರೆ ಎನ್ನಲಾಗಿದೆ.
ಚಂದ್ರು ಸಾವಿನ ಬಗ್ಗೆ ನನಗೂ ನೋವಿದೆ ಎಂದ ವಿನಯ್ ಗುರೂಜಿ
ಪೊಲೀಸರ ಪ್ರಶ್ನೆಗೆ ಉತ್ತರಿಸಿರುವ ವಿನಯ್ ಗುರೂಜಿ, ಚಂದ್ರು ಆಶ್ರಮದ ಭಕ್ತ. ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾನೆ.
ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚೆನೂ ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ ಹೋಗಿ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನು ಕಳುಹಿಸಿದ್ದೇನೆ. ಆಶ್ರಮದಲ್ಲಿ ನಡೆದಿರುವುದು ಇಷ್ಟು. ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಆಶ್ರಮದ ಸಿಬ್ಬಂದಿ ಜೊತೆಯೂ ಮಾತನಾಡಿರುವ ಪೊಲೀಸರು, ಇಂಚಿಂಚು ಮಾಹಿತಿ ಕಲೆ ಹಾಕಿದ್ದಾರೆ.
ಕೊನೆಯ ಬಾರಿಗೆ ವಿನಯ್ ಗುರೂಜಿ ಭೇಟಿಯಾಗಿದ್ದ ಚಂದ್ರು
ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಆಶ್ರಮಕ್ಕೆ ಬಂದಿದ್ದ ಚಂದ್ರಶೇಖರ್ ಹಾಗೂ ಆತನ ಸ್ನೇಹಿತ ಕಿರಣ್ 9.40ರವರೆಗೂ ವಿನಯ್ ಗುರೂಜಿಗಾಗಿ ಕಾದಿದ್ದರು. ಬಳಿಕ ವಿನಯ್ ಗುರೂಜಿ ಆರ್ಶೀವಾದ ಪಡೆದು, 30-10-2022ರ ಭಾನುವಾರ ರಾತ್ರಿ 9.45ಕ್ಕೆ ಆಶ್ರಮದಿಂದ ತೆರಳಿದ್ದರು. ಆಶ್ರಮದಿಂದ ತೆರಳುವ ಮುನ್ನ ವಿನಯ್ ಗುರೂಜಿ ಆಶೀರ್ವಾದ ಮಾಡುವಾಗ ಜಾಗ್ರತೆ ಎಂದು ಕಿವಿಮಾತು ಹೇಳಿದ್ದರು ಎನ್ನಲಾಗಿದೆ.
ವಿನಯ್ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿ ಮರಳಿದ ಬಳಿಕ ಮಧ್ಯರಾತ್ರಿ ಒಂದು ಗಂಟೆಗೆ ಚಂದ್ರಶೇಖರ್ ಕಾರು ಶಿವಮೊಗ್ಗದ ಹತ್ತಿರದ ಸುರಹೊನ್ನೆಯಲ್ಲಿರುವ ಪೆಟ್ರೋಲ್ ಬಂಕ್ ಮುಂದಿನ ರಸ್ತೆ ಮೂಲಕ ಹಾದು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಯಾಗಿತ್ತು.
ಚಂದ್ರಶೇಖರ್ನದ್ದು ಪೂರ್ವನಿಯೋಜಿತ ಕೊಲೆ
ಇನ್ನು ಚಂದ್ರಶೇಖರ್ ಕೊಲೆ ಪ್ರಕರಣದ ಸಂಬಂಧ ಎಂ.ಪಿ ರೇಣುಕಾಚಾರ್ಯ ಅವರು ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿದೆ. ಚಂದ್ರಶೇಖರ್ನದ್ದು ಸಹಜ ಸಾವಲ್ಲ, ಅಪಘಾತವಲ್ಲ. ಇದೊಂದು ಪೂರ್ವನಿಯೋಜಿತ ಕೊಲೆ ಎಂಬುದುನ್ನು ಎಲ್ಲರೂ ಹೇಳುತ್ತಿದ್ದಾರೆ. ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆ ಆಗಿದೆ. ನೂರಾರು ಪೊಲೀಸರು, ತಂಡಗಳಿದ್ದರೂ ಚಂದ್ರು ನಾಪತ್ತೆ ಆಗಿದ್ದರೂ ಯಾಕೆ ಪತ್ತೆ ಹಚ್ಚಲಿಲ್ಲ..? ಪಕ್ಷದ ಮುಖಂಡರು, ಕಾರ್ಯಕರ್ತರು ಶಿವಮೊಗ್ಗದಿಂದ ಡ್ರೋನ್ ತರಿಸಿ ಕಾರು ಮತ್ತು ಚಂದ್ರುನನ್ನು ಪತ್ತೆ ಹಚ್ಚಿದ್ದಾರೆ. ಆದರೆ ತನಿಖೆ ಸಂಪೂರ್ಣ ವಿಫಲವಾಗಿದೆ ಎಂದು ಎಂ. ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.