ಚಿಕ್ಕಮಗಳೂರು; ಗ್ರಾಮಕ್ಕೆ ಶಾಪ, ಹೋಮ, ಪೂಜೆ ಮೊರೆ ಹೋದ ಜನರು!
ಚಿಕ್ಕಮಗಳೂರು, ಸೆಪ್ಟೆಂಬರ್ 07; ಚಿಕ್ಕಮಗಳೂರು ತಾಲೂಕಿನ ಸಗನೀಪುರ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಾಗಮಂಡಲ ಪೂಜೆ, ಆಶ್ಲೇಷ ಬಲಿ ಇನ್ನೀತರ ಪೂಜೆ-ಪುನಸ್ಕಾರ, ಹೋಮ-ಹವನಗಳನ್ನು ನಡೆಸಲಾಗಿದೆ. ಇದರ ಹಿಂದೆ ಊರ ಗ್ರಾಮ ದೇವತೆಯರ ಶಾಪ ಹಾಗೂ ನಾಗದೋಷವಿದೆ ಅಂಶ ಬೆಳಕಿಗೆ ಬಂದಿದೆ.
ಕಾಫಿನಾಡು ಚಿಕ್ಕಮಗಳೂರು ನಗರದ ಸನಿಹದ ಹಳ್ಳಿಯಾದ ಸಗನೀಪುರ ಅಪ್ಪಟ ಅರೆಮಲೆನಾಡಿನ ಸಮೃದ್ಧ ಭೂಮಿಯ ಜೊತೆಗೆ ಫಲವತ್ತಾದ ಬೆಳೆ ಬೆಳೆಯಬಹುದಾದ ಜಾಗ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಸರಿಯಾದ ಮಳೆ, ಬೆಳೆಯಾಗುತ್ತಿರಲಿಲ್ಲ.
ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಕಾಪುವಿನಲ್ಲಿ ಅಷ್ಟ ಮಂಡಲ ಪ್ರಶ್ನೆಗೆ ಮುಂದಾಗಿದ್ದು, ಈ ವೇಳೆ ಗ್ರಾಮ ದೇವತೆಯ ಶಾಪವಿದೆ ಎಂದು ತಂತ್ರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಶೇಷ ಪೂಜೆ ಮಾಡಿಸುವ ಮೂಲಕ ತನ್ನೂರಿನ ಶಾಪ ವಿಮೋಚನೆಗೆ ಮುಂದಾಗಿದ್ದಾರೆ.
ಈ ಗ್ರಾಮದ ಸುತ್ತಮುತ್ತಲೂ ಸಹ ರೈತಾಪಿ ವರ್ಗದ ಜನರು ಹೆಚ್ಚು ವಾಸ ಮಾಡುತ್ತಿದ್ದು ಮಳೆ, ಬೆಳೆಯ ಕೊರತೆಯ ಜೊತೆಗೆ ಗ್ರಾಮದಲ್ಲಿ ಅಭಿವೃದ್ಧಿ ಕಾಣುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಾಕಷ್ಟು ಕಡೆ ತನ್ನೂರಿನ ಸಮಸ್ಯೆಯ ಬಗ್ಗೆ ಕೇಳತೊಡಗಿದ್ದರು. ಅದೇ ರೀತಿ ಅಷ್ಟಮಂಡಲ ಪ್ರಶ್ನೆ ಹಾಕಿಸಿ ನೋಡಿದಾಗ ಈ ಗ್ರಾಮದಲ್ಲಿ ಈ ಹಿಂದೆ ನೆಲೆಸಿದ್ದ ದೇವರಿಗೆ ದುರಿತವಾಗಿರುವುದು ಕಂಡು ಬಂದಿತ್ತಂತೆ. ಈ ಹಿನ್ನೆಲೆಯಲ್ಲಿ ಗ್ರಾಮದ ಜನರು ತಂತ್ರಿಗಳು ಹೇಳಿದ ಪ್ರಕಾರ ಮೂರು ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಿ ದೋಶ ಪರಿಹಾರ ಮಾಡಿದ್ದಾರೆ.

ಗ್ರಾಮದಲ್ಲಿ ಹಲವಾರು ಸಮಸ್ಯೆಗಳು
ಸಗನೀಪುರ ಗ್ರಾಮದಲ್ಲಿ ಈ ಹಿಂದೆ ತೋಪಿನಮ್ಮ ದೇವಿಯನ್ನು ಆರಾಧಿಸಿಕೊಂಡು ಬರಲಾಗುತ್ತಿತ್ತು. ದೇವರಿಗೆ ಮೂರ್ತಿ ಸ್ವರೂಪ ಇಲ್ಲದ ಕಾರಣ ಕಳಸವನ್ನು ಇಟ್ಟು ಪೂಜಿಸಲಾಗುತ್ತಿತ್ತು. ಪೂರ್ವಜರ ಕಾಲದಲ್ಲಿ ಓರ್ವ ಮಹಿಳೆಯಿಂದ ಆ ನಾಗನ ರೂಪದಲ್ಲಿದ್ದ ದೇವರಿಗೆ ತೊಂದರೆ ಉಂಟಾಗಿದ್ದರಿಂದ ಈ ಗ್ರಾಮದಲ್ಲಿ ಹಲವು ಸಮಸ್ಯೆಗಳು ಕಂಡು ಬಂದಿರುವುದು ಅಷ್ಟ ಮಂಗಳ ಪ್ರಶ್ನೆ ಹಾಕಿದ ಸಂದರ್ಭದಲ್ಲಿ ತಿಳಿದು ಬಂದಿದೆ.

7 ಹಳ್ಳಿಗಳಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ
"ಗ್ರಾಮ ದೇವತೆಯ ಶಾಪದಿಂದ ಊರಿಗೆ ತೊಂದರೆಗಳು ಉಂಟಾಗುತ್ತಿದೆ ಎಂಬ ಕಾರಣಕ್ಕೆ ಈ ರೀತಿಯ ವಿಶೇಷ ಪೂಜೆ, ಪುನಸ್ಕಾರ, ಹೋಮ, ಹವನ ನಡೆಸಿದ್ದೇವೆ. ಇದರಿಂದ ಸುತ್ತ 7 ಹಳ್ಳಿಗಳಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ" ಎಂದು ಗ್ರಾಮಸ್ಥರಾದ ಯತೀಶ್ ತಿಳಿಸಿದರು. ಅಕ್ಕಪಕ್ಕದ ಹಲವಾರು ಹಳ್ಳಿಗಳ ಜನರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಸಮಸ್ಯೆಯನ್ನು ಬಗೆಹರಿಸಲಾಗಿದೆ
ಅಷ್ಟ ಮಂಡಲ ಪ್ರಶ್ನೆ ಕೇಳಿದಾಗ ಗ್ರಾಮ ದೇವತೆಯ ಶಾಪವಿದೆ ಎಂದು ತಂತ್ರಿಗಳು ತಿಳಿಸಿದ್ದರು. ನಾಗ ದೇವರ ತೊಂದರೆ ಸಹ ಊರಿನಲ್ಲಿತ್ತು. "ನಾಗಮಂಡಲ ಪೂಜೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ" ಎಂದು ಶ್ರೀನಿವಾಸ ತಂತ್ರಿ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

11 ಲಕ್ಷ ರೂಪಾಯಿ ಖರ್ಚು
ಈ ವಿಶೇಷ ಪೂಜೆಗೆ ಸರಿಸುಮಾರು 11 ಲಕ್ಷ ಖರ್ಚಾಗಿದೆ. ಊರಿನ 70 ಮನೆಗಳಿಂದ ಪ್ರತಿ ಮನೆಗೆ 16 ಸಾವಿರ ರೂಪಾಯಿಗಳಂತೆ 11 ಲಕ್ಷ ರೂಪಾಯಿಗಳನು ಸಂಗ್ರಹಿಸಿ 3 ದಿನಗಳ ಕಾಲ ನಾಗಮಂಡಲ ಹಾಗೂ ಆಶ್ಲೇಷಾ ಬಲಿ ಪೂಜೆ ನಡೆಸಲಾಗಿದೆ. ಮೂರು ದಿನಗಳ ಅನ್ನಸಂತರ್ಪಣೆ ಮಾಡಲಾಗಿದೆ. ಇನ್ನು ಮುಂದೆ ಗ್ರಾಮಕ್ಕೆ ಅಂಟಿದ್ದ ಶಾಪ ವಿಮೋಚನೆ ಆಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.












Click it and Unblock the Notifications