ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇನೆ ಎಂದ ಸಿಎಂ
ಚಿಕ್ಕಮಗಳೂರು, ಮಾರ್ಚ್ 7: "ನಾನು ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇನೆ. ಅಡಿಕೆ ಬೆಳೆಗಾರರಿಗೆ ಸಹಕಾರಿ ಬ್ಯಾಂಕ್ ಮೂಲಕ ಎರಡೂವರೆ ಲಕ್ಷ ಸಾಲ ನೀಡಿ ಶೇ 5ರಷ್ಟು ಬಡ್ಡಿಯನ್ನು ಸರ್ಕಾರ ಭರಿಸುತ್ತದೆ" ಎಂದು ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಹೇಳಿದ್ದಾರೆ ಸಿಎಂ ಯಡಿಯೂರಪ್ಪ.
ಇಂದು ರಂಭಾಪುರೀ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮಕ್ಕಾಗಿ ಬಾಳೆಹೊನ್ನೂರಿಗೆ ಬಂದಿದ್ದ ಅವರು, ಮೊದಲು ಕ್ಷೇತ್ರದ ವೀರಭದ್ರೇಶ್ವರ ಸ್ವಾಮಿ ದರ್ಶನ ಪಡೆದರು. ನಂತರ ರಂಭಾಪುರಿ ಶ್ರೀ ಭೇಟಿ ಮಾಡಿ ಆರ್ಶೀವಾದ ಪಡೆದುಕೊಂಡರು.
ಬಜೆಟ್ 2020: ಪ್ರವಾಸೋದ್ಯಮ ಬೆಳವಣಿಗೆಗೆ ಯಡಿಯೂರಪ್ಪ ಮಾಸ್ಟರ್ ಪ್ಲಾನ್
ದೀಪ ಹಚ್ಚುವ ಮೂಲಕ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, "ಈ ಬಾರಿ ಉತ್ತಮ ಬಜೆಟ್ ಮಂಡಿಸಿದ್ದೇವೆ. ಮೊನ್ನೆಯ ಬಜೆಟ್ ನಲ್ಲಿ ಚಿಕ್ಕಮಗಳೂರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೇವೆ. ಗೊಂಧಿ ನೀರಾವರಿ ಯೋಜನೆ ಆಗಬೇಕು ಎಂಬುದು ಇಲ್ಲಿನ ಜನರ ಒತ್ತಾಯ. ಮುಂದಿನ ದಿನಗಳಲ್ಲಿ ಆ ಯೋಜನೆಯನ್ನೂ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ 5 ಸಾವಿರ ಕೋಟಿಯನ್ನು ಏತ ನೀರಾವರಿಗೆ ಮೀಸಲಿಡಲಾಗಿದೆ" ಎಂದು ಹೇಳಿದರು.