ದಸರಾಕ್ಕೆ ಚ್ಯುತಿ ತಂದಿದೆ ರಾಜ್ಯ ಸರ್ಕಾರದ ನಡೆ- ಸಿಟಿ ರವಿ ವಾಗ್ದಾಳಿ
ಚಿಕ್ಕಮಗಳೂರು ಅಕ್ಟೋಬರ್ 12: ದಸರಾಕ್ಕೆ ಚ್ಯುತಿ ತರುವಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆ ಎಂದು ಮಾಜಿ ಸಚಿವ ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ದಸರಾಕ್ಕೆ ಚ್ಯುತಿ ತರುವಂತೆ ರಾಜ್ಯ ಸರ್ಕಾರ ನಡೆದುಕೊಂಡಿದೆ. ಎಲ್ಲಿ ರಾಜಕೀಯ ಮಾತಾಡ್ಬೇಕು, ಮಾತಾಡ್ಬಾರ್ದು ಅನ್ನೋ ಪರಿಜ್ಞಾನವೇ ಇಲ್ಲ. ಮೈಸೂರು ದಸರಾ ಉದ್ಘಾಟನೆ ದಿನವು ಸಂಸ್ಕೃತಿ, ಪರಂಪರೆ, ಇತಿಹಾಸದ ಬದಲು ಅಲ್ಲಿ ಮಾತನಾಡಿದ್ದು ರಾಜಕೀಯವೆ ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ದುಡ್ಡಲ್ಲಿ ಜಾಹಿರಾತು ನೀಡಿದ್ದಾರೆ. ಕಾಂಗ್ರೆಸ್ ದುಡ್ಡಾಗಿದ್ರೆ ಕೇಳ್ತಿರ್ಲಿಲ್ಲ. ಜಾಹಿರಾತು ನೀಡಿ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಕೋಮು ಗಲಭೆಗೆ ಕಾರಣರಾಗಿದ್ದವರ ಕೇಸನ್ನ ವಾಪಸ್ ಪಡೆದಿದ್ದಾರೆ. ಸ್ಟೇಷನ್ ಗೆ ಬೆಂಕಿ ಹಾಕಿದವರು, ಆಂಜನೇಯನ ದೇವಸ್ಥಾನದ ಮೇಲೆ ಕಲ್ಲು ಎಸೆದವರು ಕೇಸ್ ವಾಪಸ್ ಪಡೆದಿದ್ದಾರೆ. ಅವರು ರೈತರೋ ಅಥವ ಕನ್ನಡ ಹೋರಾಟಗಾರರೋ ಕೇಸ್ ವಾಪಸ್ ಪಡೆಯಲು ಎಂದು ಸಿಟಿ ರವಿ ಪ್ರಶ್ನೆ ಮಾಡಿದರು.
ದೊಡ್ಡ-ದೊಡ್ಡ ಜಾಹಿರಾತು ನೀಡಿ ಕೋಮು ಗಲಭೆ ಕಾರಣರಾದವರ ಕೇಸ್ ವಾಪಸ್ ಪಡೆದಿದ್ದೀರಾ. ನೀವು ಕೊಟ್ಟಿರೋ ಜಾಹಿರಾತು, ನಿಮ್ಮ ನಡೆಗೆ ಸಂಬಂಧವೇ ಇಲ್ಲ. ದಸರಾ ಸಂದರ್ಭದಲ್ಲಿ ನೀವು ದುಷ್ಟರ ರಕ್ಷಣೆಗೆ ಹೊರಟಿದ್ದೀರಾ... ದಸರಾ ಉದ್ದೇಶ ದುಷ್ಟರಿಗೆ ಶಿಕ್ಷೆಯಾಗಬೇಕು. ಸಜ್ಜನರ ರಕ್ಷಣೆ ಆಗಬೇಕು ಅನ್ನೋದು. ಕೇಸ್ ಹಿಂಪಡೆದು ಸಜ್ಜನರ ರಕ್ಷಣೆ ಮಾಡಲಿಲ್ಲ, ದುರ್ಜನರ ರಕ್ಷಣೆಗೆ ಹೊರಟಿದ್ದೀರಾ ಎಂದು ಗರಂ ಆದರು.
ಸರ್ಕಾರ ಕೂಡಲೇ ಕೇಸ್ ಹಿಂಪಡೆಯೋ ನಡೆಯನ್ನ ಪರಾಮರ್ಷಿಸಬೇಕು. ಇಲ್ಲವಾದರೆ, ಹುಬ್ಬಳ್ಳಿ ಚಲೋ ಕಾರ್ಯಕ್ರಮಕ್ಕೆ ಕರೆ ಕೊಡ್ತೀವಿ. ದುಷ್ಟರ ರಕ್ಷಣೆಗೆ ಹೊರಟ ಕಾಂಗ್ರೆಸ್ ನಡೆ ವಿರುದ್ಧ ಹುಬ್ಳಿ ಚಲೋ ಹಮ್ಮಿಕೊಳ್ತೀವಿ. ಕೋರ್ ಕಮಿಟಿ, ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸಿ ಸರ್ಕಾರದ ನೀತಿ ವಿರುದ್ಧ ಜನಾಂದೋಲನ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ನೀವು ಕಮ್ಯುನಲ್ ಫೋರ್ಸ್ ಗಳಿಗೆ ಬೆಂಬಲವಾಗಿ ನಿಲ್ತಿದ್ದೀರಾ. ಓಟ್ ಬ್ಯಾಂಕ್ ರಾಜಕಾರಣಕ್ಕೆ ರಾಜ್ಯದ ನೆಮ್ಮದಿಗೆ ಬೆಂಕಿ ಇಡುವ ಕೆಲಸ ಮಾಡ್ತಿದ್ದೀರಾ. ಸಿದ್ದರಾಮಯ್ಯ ಹಿಂದೆ ಸಿಎಂ ಆಗಿದ್ದಾಗ ಎಸ್.ಡಿ.ಪಿ.ಐ, ಪಿ.ಎಫ್.ಐನ 2000 ಜನರ ಕೇಸ್ ಹಿಂಪಡೆದಿದ್ದರು. ಅದರ ಪರಿಣಾಮ ರಾಜು, ರುದ್ರೇಶ್ ಹತ್ಯೆ ಸೇರಿ ಸರಣಿ ಹತ್ಯೆಗಳು ನಡೆದವು. ರಾಜ್ಯದಲ್ಲಿ ಮತ್ತೆ ಸರಣಿ ಹತ್ಯೆ ಪರಂಪರೆಯನ್ನ ಪುನರ್ ಸ್ಥಾಪಿಸಲು ಕೇಸ್ ಹಿಂಪಡೆದಿದ್ದೀರಾ. ಸರ್ಕಾರ ತನ್ನ ನಿಲುವನ್ನ ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿದರು.
ಸಿ.ಟಿ.ರವಿ ಮೇಲಿನ ಕೇಸ್ ಗಳನ್ನ ಹಿಂಪಡೆದಿದ್ದೀವಿ ಎಂದಿದ್ದಾರೆ. ಬಾಗೇಪಲ್ಲಿಯಲ್ಲಿ ನನ್ನ ಮೇಲೆ ಯಾವುದೇ ಕೇಸ್ ದಾಖಲಾಗಿರಲಿಲ್ಲ. ನನ್ನ ಮೇಲಿನ ಕೇಸ್ ಹಿಂಪಡೆಯಿರಿ ಎಂದು ಅರ್ಜಿಯನ್ನೂ ಕೊಟ್ಟಿಲ್ಲ. ಕಳೆದ ಎಂಪಿ ಎಲೆಕ್ಷನ್ ವೇಳೆ ನನ್ನ ಟ್ವಿಟ್ ಅಧಾರದ ಮೇಲೆ 4 ಕೇಸ್ ಹಾಕಿದ್ದಾರೆ. ನನ್ನ ಮೇಲಿನ ಕೇಸ್ ಗಳನ್ನ ಹೈಕೋರ್ಟಿನಲ್ಲಿ ಸ್ಟೇ ಮಾಡಿಸಿದ್ದೀನಿ. ಎರಡೂವರೆ ವರ್ಷದ ಹಿಂದೆ ಚಿಕ್ಕಬಳ್ಳಾಪುರ, ಕೋಲಾರದ ರೈತರ ಮೇಲಿನ ಕೇಸ್ ಹಿಂಪಡೆಯುವಂತೆ ಪತ್ರ ಕೊಟ್ಟಿದ್ದೆ. ಆ ಫೈಲ್ ಪುಟಪ್ ಆಗಿ ಈಗ ಬಂದಿರಬೇಕು. ರಾಷ್ಟ್ರಘಾತಲ ಶಕ್ತಿಗಳ ಜೊತೆ ನನ್ನ ಹೆಸರು ತೋರಿಸೋದು ಬೇಡ ಎಂದರು.
ನಿಮ್ಮ ಉದಾರತೆಯಿಂದ ಕೇಸ್ ಹಿಂಪಡೆಯೋ ಅಗತ್ಯವೂ ನನಗಿಲ್ಲ. ನೀವು ರೈತರು, ಕನ್ನಡ ಹೋರಾಟಗಾರ ಕೇಸ್ ಹಿಂಪಡೆದಿಲ್ಲ. ನೀವು ಹಿಂಪಡೆದಿರೋದು ಕ್ರಿಮಿನಲ್ ಅಂಡ್ ಕಮ್ಯುನಲ್ ಗಳ ಕೇಸ್ ಗಳನ್ನ, ನಾನು ಯಾರಿಗೂ ಅರ್ಜಿ ನೀಡಿಲ್ಲ, ನನ್ನ ಅರ್ಜಿ ಇದ್ದರೆ ತೋರಿಸಿ. ಕೋಲಾರದಲ್ಲಿ ನನ್ನ ಮೇಲೆ ಯಾವುದೇ ಕೇಸ್ ಇರಲಿಲ್ಲ. ಹೆಚ್.ಕೆ.ಪಾಟೀಲರಂತ ಸಿನಿಯರ್ ಮಿನಿಸ್ಟರ್ ಬಳಿ ಇಂತಹಾ ಸುಳ್ಳನ್ನ ನಿರೀಕ್ಷಿಸಿರಲಿಲ್ಲ. ನಾನು ಎರಡೂವರೆ ವರ್ಷದ ಹಿಂದೆ ಬೊಮ್ಮಾಯಿಗೆ ರೈತರ ಕೇಸ್ ಹಿಂಪಡೆಯಲು ಅರ್ಜಿ ನೀಡಿದ್ದೆ ಎಂದು ಆಕ್ರೋಶಗೊಂಡರು.












Click it and Unblock the Notifications