ಚಿಕ್ಕಮಗಳೂರು; ಮಳೆಯಲ್ಲಿ ಕೊಚ್ಚಿ ಹೋದ ಹಸು, ಕುರಿ
ಚಿಕ್ಕಮಗಳೂರು, ನವೆಂಬರ್ 18; ಚಿಕ್ಕಮಗಳೂರು ತಾಲೂಕಿನ ಕಣಿವೆಹಳ್ಳಿಯ ಸಮೀಪ ರೈಲ್ವೆ ಇಲಾಖೆ ನೀರು ಹರಿಯಲು ನಿರ್ಮಾಣ ಮಾಡಿರುವ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಬುಧವಾರ ಸುರಿದ ಮಳೆಗೆ ಭಾರೀ ಅನಾಹುತ ಸಂಭವಿಸಿದೆ. ರೈಲ್ವೆ ಸೇತುವೆ ಕೆಳಗೆ ಬರುತ್ತಿದ್ದ ಕುರಿಗಳು ಹಾಗೂ ಹಸುಗಳು ನೀರಿನಲ್ಲಿ ತೇಲಿಹೋಗಿ 15 ಕುರಿ ಹಾಗೂ 2 ಹಸುಗಳು ಸಾವನ್ನಪ್ಪಿವೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಸೇತುವೆಯಿಂದ ನೀರು ಸರಾಗಾವಾಗಿ ಹರಿಯಲು ಕಾಲುವೆ ಇಲ್ಲದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು ರೈತರೊಬ್ಬರ ಶೆಡ್ನಲ್ಲಿದ್ದ ಮೂರು ಸಾವಿರ ಕೊಬ್ಬರಿ ನೀರು ಪಾಲಾಗಿದೆ.
ಇನ್ನು ಸೇತುವೆ ಕೆಳಗೆ ನೀರು ರಭಸವಾಗಿ ಹರಿದು ಬಂದ ಹಿನ್ನೆಲೆ ಹೊಲಗಳಿಗೆ ಕೆಲಸಕ್ಕೆ ಹೋಗಿದ್ದ ರೈತರು ನೀರಿನ ಪ್ರಮಾನ ಕಡಿಮೆಯಾಗುವ ತನಕ ಅಂದರೆ ರಾತ್ರಿ 10 ಗಂಟೆಯ ತನಕ ಹೊಲದಲ್ಲಿಯೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೈತರು ತಮ್ಮ ಓಡಾಟಕ್ಕೆ ಅನುಕೂಲವಾಗುವಂತೆ ರೈಲ್ವೆ ಅಂಡರ್ ಪಾಸ್ ನಿರ್ಮಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಕಾಂಗ್ರೆಸ್ ಮುಖಂಡೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಭೇಟಿ ನೀಡಿ ರೈತರಿಗೆ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿದ ಅವರು, "ಈ ಅವೈಜ್ಞಾನಿಕ ಸೇತುವೆಯಿಂದ ಜನ ಜಾನುವಾರುಗಳು ಸಂಕಷ್ಟ ಎದುರಿಸುವಂತಾಗಿದೆ. ಪ್ರತಿನಿತ್ಯ ಹೊಲಗಳಿಗೆ ನೂರಾರು ಜನರು ಓಡಾಡಲು ಸಾಧ್ಯವಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಹಲವಾರು ಭಾರಿ ಸಂಸದರಿಗೆ, ಸ್ಥಳೀಯ ಶಾಸಕರಿಗೆ ಹಲವು ಭಾರಿ ಮನವಿ ಮಾಡಿದರು ಸಹ ಯಾವುದೇ ಪ್ರಯೋಜನವಾಗಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಕೂಡಲೇ ಜನರು ಓಡಾಡಕ್ಕೆ ಅನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಬೇಕು ಹಾಗೂ ರೈಲ್ವೆ ಇಲಾಖೆ ಸೇತುವೆ ನಿರ್ಮಾಣವಾಗುವವರೆ ಪರ್ಯಾಯವಾಗಿ ಇರುವ ದಾರಿಯಲ್ಲಿ ಓಡಾಡಲು ಅವಕಾಶ ಮಾಡಿಕೊಡಬೇಕು" ಎಂದು ಒತ್ತಾಯಿಸಿದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಂತರಾಜ್ ಅರಸ್ ಮಾತನಾಡಿ, "ಅವೈಜ್ಞಾನಿಕ ಸೇತುವೆಯಿಂದ ಸಾಕಷ್ಟು ನಷ್ಟ ಉಂಟಾಗಿದೆ ಹಾಗೂ ಮಳೆಯಿಂದಾದ ಹಾನಿಗೆ ಸೂಕ್ತ ಪರಿಹಾರ ನೀಡಬೇಕು" ಎಂದು ಆಗ್ರಹಿಸಿದರು. ಈ ವೇಳೆ ಸುತ್ತಮುತ್ತಲ ನೂರಾರು ಗ್ರಾಮಸ್ಥರು ಇದ್ದರು.
ಜಿಲ್ಲೆಯಲ್ಲಿ ಭಾರೀ ಮಳೆ; ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರೆದಿದೆ.
ಮೂಡಿಗೆರೆ, ಕಳಸ, ಶೃಂಗೇರಿ, ಮೂಡಿಗೆರೆ, ಎನ್. ಆರ್. ಪುರ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಮಳೆಯಾಗುತ್ತಿದೆ.
ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಧಾರಾಕಾರ ಮಳೆಯಿಂದ ಜಿಲ್ಲೆಯ, ರೈತರು, ಕಾಫಿ ಬೆಳೆಗಾರರರು ಕಂಗಾಲಾಗಿದ್ದಾರೆ. ಅಡಕೆ, ಕಾಫಿ, ಮೆಣಸು ಒಣಗಿಸಲಾಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಸನದಲ್ಲೂ ಮಳೆ; ಹಾಸನ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗುತ್ತಿದೆ. ಬೇಲೂರು ತಾಲ್ಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಭಾಗಗಳಲ್ಲಿ ಇತ್ತೀಚಿಗೆ ಬಿದ್ದ ಭಾರೀ ಮಳೆಯಿಂದಾಗಿ ಕಾಫಿ ಬೆಳೆಗೆ ಹಾನಿಯಾಗಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಬೆಳೆ ಹಾನಿಯಾದ ಭಾಗಗಳಿಗೆ ಭೇಟಿ ನೀಡಿ ಬೆಳೆಗಾರರ ಹಾಗೂ ಕೂಲಿ ಕಾರ್ಮಿಕರ ಸಂಕಷ್ಟದ ಕುರಿತು ಮಾಹಿತಿ ಪಡೆದರು. ಮಳೆಯಿಂದಾಗಿ ಕೈಗೆ ಬಂದ ಫಸಲು ಗಿಡದಲ್ಲೇ ಕೊಳೆಯುವಂತಹ ಪರಿಸ್ಥಿತಿ ಉಂಟಾಗಿ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಭಾಗವನ್ನು ರಾಷ್ಟ್ರೀಯ ವಿಪತ್ತು ಪರಿಹಾರಕ್ಕೆ ಸೇರಿಸದಿರುವುದು ದುರಾದೃಷ್ಟಕರ, ಸರ್ಕಾರ ಹಾಗೂ ಕಂದಾಯ ಇಲಾಖೆ ಸರಿಯಾಗಿ ಯಾವುದೇ ವೈಜ್ಞಾನಿಕವಾಗಿ ವರದಿಯನ್ನು ನೀಡುತ್ತಿಲ್ಲ. ಆದ್ದರಿಂದ ಕಾಫಿ ಬೊರ್ಡ್ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಎಸಿ ಹಾಗೂ ತಹಶೀಲ್ದಾರ್ ಅವರಿಗೆ ಇನ್ನೆರಡು ದಿನಗಳಲ್ಲಿ ಸಭೆ ಕರೆದು ಇದರ ಬಗ್ಗೆ ಗಮನ ಹರಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಸಂಸದರು ಭರವಸೆ ನೀಡಿದ್ದಾರೆ.
ಕೇವಲ ಕಾಫಿ ಬೆಳೆಗಾರರು ಮಾತ್ರವಲ್ಲದೆ, ಕೂಲಿ ಕಾರ್ಮಿಕರು ಸಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಾರ್ಮಿಕ ಇಲಾಖೆಯ ಸಹಾಯ ಪಡೆದು ನೋಂದಾಯಿತ ಕೂಲಿಕಾರ್ಮಿಕರಿಗೆ ಸರ್ಕಾರದಿಂದ ಯಾವುದಾದರೂ ರೀತಿಯಲ್ಲಿ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications