ಕಳಸದ ರಸ್ತೆ ಅವ್ಯವಸ್ಥೆ ಬಗೆಗಿನ ವ್ಯಂಗ್ಯ ಚಿತ್ರಗಳು ವೈರಲ್
ಚಿಕ್ಕಮಗಳೂರು, ನವೆಂಬರ್: ಕಳಸ ಪಟ್ಟಣದ ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯಚಿತ್ರಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿರುವುದು ಎಲ್ಲೆಡೆ ವೈರಲ್ ಆಗಿದೆ.
ಕಳಸ ಪಟ್ಟಣದ ಮುಖ್ಯರಸ್ತೆಯಿಂದ ಹೊರನಾಡಿಗೆ ಹೋಗುವ ರಸ್ತೆಯ ದುಸ್ಥಿತಿ ಕಂಡು ಅಲ್ಲಿನ ಗ್ರಾಮಸ್ಥರು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರಗಳ ಮೂಲಕ ಆಕ್ರೋಶ ವ್ಯಕ್ಯಪಡಿಸಿದ್ದಾರೆ. ರಸ್ತೆಯಲ್ಲ ಗುಂಡಿಮಯವಾಗಿದ್ದು, ವಾಹನ ಸವಾರರು ಪ್ರತಿನಿತ್ಯವೂ ಪರದಾಡುವಂತೆ ಆಗಿದೆ. ವಾಹನಗಳು ಚಲಿಸದಷ್ಟು ಹೊಂಡ-ಗುಂಡುಗಳಿಂದ ರಸ್ತೆ ಹದಗೆಟ್ಟು ಹೋಗಿದೆ. ವ್ಯಂಗ್ಯ ಚಿತ್ರಗಳು ಹರಿದಾಡುತ್ತಿರುವುದರಿಂದ ಕ್ಷೇತ್ರದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಕಳಸ ತಾಲೂಕು ಕೇಂದ್ರವಾಗಿದ್ದರೂ ಅಭಿವೃದ್ದಿ ಮಾತ್ರ ಶೂನ್ಯ ಆಗಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಗುಂಡಿಬಿದ್ದ ರಸ್ತೆಯಲ್ಲಿ ತುಳಸಿ ಪೂಜೆ ಮಾಡಿ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ
ನಿರ್ವಹಣೆಯಿಲ್ಲದ ರಸ್ತೆಗಳು
ತಾಲೂಕಿನಲ್ಲಿ ಕೆಲ ರಸ್ತೆಗಳ ನಿರ್ವಹಣೆಯಿಲ್ಲದೇ ವಾಹನ ಸವಾರರು ಪರದಾಡುವಂತಾಗಿದೆ. ಆದರೆ ಗುಣಮಟ್ಟದ ಕೊರತೆಯ ಕಾರಣಕ್ಕೆ ಕೋಟ್ಯಂತರ ರೂಪಾಯಿ ಸುರಿದು ಅಭಿವೃದ್ಧಿಪಡಿಸಿದ ರಸ್ತೆಗಳು ವರ್ಷದೊಳಗೆ ಗುಂಡಿ ಗೊಟರುಗಳಿಂದ ಪ್ರಯಾಣಿಕರ ಜೀವಹರಣ ಮಾಡುತ್ತಿವೆ ಎನ್ನುವ ಆರೋಪಗಳು ಪದೇ ಪದೇ ಕೇಳಿಬರುತ್ತಲೇ ಇವೆ. ಜಿಲ್ಲೆಯ ಕಳಸ ತಾಲೂಕಿನ ಭಾಗಕ್ಕೆ ಹೋದರೆ ರಸ್ತೆಗಳಲ್ಲಿ ಹೊಂಡ ಗುಂಡಿಗಳದ್ದೇ ಕಾರುಬಾರಾಗಿದೆ. ರಸ್ತೆಗಳು ಸ್ಥಿತಿ ಸಂಪೂರ್ಣವಾಗಿ ಅಯೋಮಯವಾಗಿದೆ. ಇನ್ನು ಚಿಕ್ಕಮಗಳೂರು ನಗರ ಸೇರಿದಂತೆ ಕೆಲ ತಾಲೂಕು ಕೇಂದ್ರಗಳ ರಸ್ತೆಗಳೂ ಹೊಂಡ ಗುಂಡಿಗಳಿಂದ ಕಂಗೊಳಿಸುತ್ತಿವೆ. ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆಗಳ ಅಭಿವೃದ್ಧಿಗೆ ಸುರಿಯುತ್ತಿರುವ ಕೋಟಿಗಟ್ಟಲೆ ಹಣ ನೀರಿನಲ್ಲಿ ಹೋಮ ಮಾಡಿದಂರೆ ಆಗುತ್ತಿದೆ. ಮೊದಲು ರಸ್ತೆಗೆ ಡಾಂಬರು ಹಾಕಿಕೊಂಡು ನಂತರ ನಲ್ಲಿ, ಕೇಬಲ್, ಪೈಪ್ಲೈನ್ ಅಳವಡಿಕೆಗೆ ಅಗೆದು ಹಾಕುವುದು ಅಧಿಕಾರಿಗಳಿಗೆ ಅಭ್ಯಾಸವಾಗಿ ಹೋಗಿದೆ.
ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯಚಿತ್ರ, ಆಕ್ರೋಶ
ರಸ್ತೆಗಳಿಗೆ ಡಾಂಬರು ಕೂಡ ಹಾಕದೆ ಬಿಲ್ ಮಾಡಿಸಿಕೊಳ್ಳುತ್ತಿರುವ ಆರೋಪವೂ ಕೇಳಿಬರುತ್ತಿದೆ. ಕೆಲವು ಕಡೆಗಳಲ್ಲಿಒಂದೇ ರಸ್ತೆಗೆ ಎರಡೆರಡು ಬಾರಿ ಬಿಲ್ ಮಾಡಿಸಿಕೊಳ್ಳಲಾಗಿದೆ. ಹಣ ಹೊಡೆಯುವ ದುರಾಸೆಯಲ್ಲಿ ರಸ್ತೆಗಳ ಹೊಂಡ ಗುಂಡಿಗಳು ಮತ್ತಷ್ಟು ಆಳವಾಗುತ್ತಿದ್ದು, ಜನರ ಹೆಣ ಬೀಳಿಸುತ್ತಿವೆ. ಸ್ಥಳೀಯ ಸಂಸ್ಥೆಗಳು, ವಿಧಾನಸಭೆ ಚುನಾವಣೆ ಘೋಷಣೆ ಆಗುವ ಒಂದು ತಿಂಗಳ ಮೊದಲಷ್ಟೇ ಕೆಲವು ಕಡೆಗಳಲ್ಲಿ ರಸ್ತೆಗಳಿಗೆ ದಿಢೀರ್ ಡಾಂಬರು ಹಾಕಲಾಗುತ್ತದೆ. ಚುನಾವಣೆ ಮುಗಿದ ತಿಂಗಳೊಳಗೆ ಆ ರಸ್ತೆಗಳೆಲ್ಲವೂ ಮತ್ತೆ ಹಳೇ ಸ್ಥಿತಿಗೆ ಮರಳುತ್ತಿವೆ. ಜನರ ಕಣ್ಣೊರೆಸುವ ಈ ತಂತ್ರಗಾರಿಕೆ ಬಗ್ಗೆ ಜನರಿಗೆ ಅರಿವಿದ್ದರೂ ಪ್ರತಿಭಟನೆ ಮಾಡುವ ಮನಸ್ಥಿತಿಯೇ ಇಲ್ಲವಾಗಿದೆ. ಗುಣಮಟ್ಟದ ಕಾಮಗಾರಿ ಭಾಷಣಗಳಿಗೆ ಸೀಮಿತವಾಗಿದ್ದು, ಕಳಪೆ ಕಾಮಗಾರಿ ಎಲ್ಲೆಲ್ಲೂ ರಾರಾಜಿಸುತ್ತಿದೆ. ಇದೀಗ ಎಚ್ಚೆತ್ತುಕೊಂಡ ಕಳಸ ತಾಲೂಕಿನ ಜನರು ರಸ್ತೆಗಳ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಚಿತ್ರಗಳ ಮೂಲಕ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ವ್ಯಂಗ್ಯಚಿತ್ರಗಳನ್ನು ಕಂಡ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಛೀಮಾರಿಗೆ ಒಳಗಾಗಿದ್ದಾರೆ.
ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶದಲ್ಲಿ ಭಾರೀ ಮಳೆ