ಚಿಕ್ಕಮಗಳೂರಿನಲ್ಲಿ ರಣ ಮಳೆ; ಆಗಸ್ಟ್ 1ರಿಂದ 10 ರವರೆಗೆ ಕ್ವಿಕ್ ರಿಪೋರ್ಟ್
ಚಿಕ್ಕಮಗಳೂರು, ಆಗಸ್ಟ್ 10: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದೆ. ದಿನೇ ದಿನೇ ಮಳೆ ಪ್ರಮಾಣ ಹೆಚ್ಚುತ್ತಿದ್ದು, ತುಂಗಾ ನದಿ ಪ್ರವಾಹದ ಮಟ್ಟ ಮೀರಿ ಹರಿದು ಹಲವು ಮನೆ, ಹೊಲ ಗದ್ದೆಗಳನ್ನು ಆಪೋಶನ ತೆಗೆದುಕೊಂಡಿದೆ. ಪರಿಸ್ಥಿತಿಯ ನಿಯಂತ್ರಣಕ್ಕೆ ಜಿಲ್ಲಾಡಳಿತವೂ ಪ್ರಯತ್ನಿಸುತ್ತಿದೆ.
ಆದರೆ ರಭಸದ ಈ ಮಳೆಗೆ ಇಡೀ ಊರಿಗೆ ಊರೇ ಕೊಚ್ಚಿ ಹೋದಂತೆ ಭಾಸವಾಗುತ್ತಿದೆ. ಕಣ್ಣಿಗೆ ಕಂಡ ಜಾಗವೆಲ್ಲಾ ಭದ್ರೆಯ ಒಡಲಾಗಿ ಕಾಣುತ್ತಿದೆ. ಅಸಹಾಯಕ ಸ್ಥಿತಿಯಲ್ಲಿ ಜನರಿದ್ದಾರೆ. ತಮ್ಮನ್ನು ತಾವು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಆಗಸ್ಟ್ ಒಂದರಿಂದ ಆರಂಭಗೊಂಡಿರುವ ಮಳೆ ಇಲ್ಲಿಯವರೆಗೂ ಸೃಷ್ಟಿಸಿರುವ ಅವಾಂತರ, ಮಳೆ ಪ್ರಮಾಣ ಎಲ್ಲದರ ವಿವರ ಇಲ್ಲಿದೆ...
ಮಳೆಯ ತಾಲೂಕುವಾರು ವಿವರ...
ಚಿಕ್ಕಮಗಳೂರು: 326.6 ಮಿ.ಮಿ
ಕಡೂರು: 126.2.ಮಿ.ಮಿ
ಕೊಪ್ಪ: 693.4 ಮಿ.ಮಿ
ಮೂಡಿಗೆರೆ: 844.8 ಮಿ.ಮಿ
ಎನ್.ಆರ್.ಪುರ: 442.9 ಮಿ.ಮಿ
ಶೃಂಗೇರಿ: 796.6 ಮಿ.ಮಿ
ತರೀಕೆರೆ: 275.9 ಮಿ.ಮಿ

* ಮಲೆನಾಡು ಭಾಗದಲ್ಲಿ ಮಳೆಯಿಂದಾಗಿ ಧರೆ ಕುಸಿತ, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತಗೊಂಡಿದೆ.
* ತುಂಗಾ, ಭದ್ರಾ, ಹೇಮಾವತಿ ನೀರಿನ ಹರಿವು ಹೆಚ್ಚಳವಾಗಿದೆ.
* ಭದ್ರ ನದಿಗೆ ಪ್ರಸ್ತುತ ನೀರಿನ ಒಳ ಹರಿವು 79158 ಕ್ಯೂಸೆಕ್ ಇದೆ.
* ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆ, ಹಳ್ಳವಳ್ಳಿ- ಹೊರನಾಡು ರಸ್ತೆ, ಸುಂಕಶಾಲೆ ರಸ್ತೆ, ಕೊಟ್ಟಿಗೆಹಾರ - ಕಳಸ ರಸ್ತೆ, ತತ್ಕೋಳ - ಕುಂದೂರು ರಸ್ತೆ, ದುರ್ಗದ ಹಳ್ಳಿ, ಚನ್ನಹಡ್ಲು, ಹಿರೇಬೈಲು ಮಲ್ಲೇಶ್ವರ ರಸ್ತೆ ತಾತ್ಕಾಲಿಕ ಕಡಿತಗೊಂಡಿವೆ
* ಮೂಡಿಗೆರೆ ತಾಲೂಕಿನಲ್ಲಿ ಬಾರಿ ಮಳೆಯಿಂದ 125 ಹೆಚ್ಚು ಜನರಿಗೆ ತೊಂದರೆಯಾಗಿದ್ದು, ರಕ್ಷಣೆ ಕೋರಿ ಸರ್ಕಾರಕ್ಕೆ ಜಿಲ್ಲಾಡಳಿತ ಮನವಿ ಮಾಡಿದೆ.
ಮಿಲಿಟರಿ ಹೆಲಿಕಾಫ್ಟರ್ ಹಾಗೂ ಎನ್ ಡಿಆರ್ ಎಫ್ ತಂಡ ನೀಡುವಂತೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
* ಪ್ರವಾಹಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಕ್ಕೆ ದೋಣಿ, ಲೈಫ್ ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್ ಇತ್ಯಾದಿ ಸಲಕರಣೆಗಳ ಮೂಲಕ ಅಗ್ನಿಶಾಮಕ ದಳ. ಪೋಲಿಸ್ ಇಲಾಖೆ ವತಿಯಿಂದ ರಕ್ಷಣಾ ಕಾರ್ಯ ಮುಂದುವರೆದಿದೆ.
* ಚಾರ್ಮಾಡಿಯಲ್ಲಿ ನಿರಂತರ ಗುಡ್ಡ ಕುಸಿತದಿಂದಾಗಿ 14-08-19 ವರಗೆ ಜಿಲ್ಲಾಡಳಿತ ರಸ್ತೆ ಸಂಚಾರ ಬಂದ್ ಮಾಡಿದೆ.
* ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣ ಮುಳ್ಳಯ್ಯನ ಗಿರಿ, ದತ್ತಪೀಠಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.












Click it and Unblock the Notifications