ಚಿಕ್ಕಮಗಳೂರು ಮಳೆ: ಜನರು ಮಾತ್ರವಲ್ಲ, ಅಧಿಕಾರಿಗಳಿಗೂ ದಾರಿ ಸಿಗುತ್ತಿಲ್ಲ!
ಚಿಕ್ಕಮಗಳೂರು, ಆಗಸ್ಟ್ 9: ಕಾಫಿನಾಡು ಚಿಕ್ಕಮಗಳೂರಿನಾದ್ಯಂತ ವರುಣನ ರೌದ್ರ ನರ್ತನ ಮುಂದುವರಿದಿದೆ. ಅನಾಹುತಕಾರಿ ಮಳೆ ಜನರಲ್ಲಿ ಆತಂಕ ಹೆಚ್ಚಿಸಿದೆ. ಭೂಕುಸಿತ, ಪ್ರವಾಹ ದಿಕ್ಕೆಡಿಸವೆ.
ಮೂಡಿಗೆರೆ-ಚಿಕ್ಕಮಗಳೂರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಭೂತನಕಾಡು ಎಂಬಲ್ಲಿ ಕಾಫಿ ತೋಟವೇ ರಸ್ತೆಗೆ ಕೊಚ್ಚಿಕೊಂಡು ಬಂದಿದೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದು ಕಿ.ಮೀ.ಗೂ ಹೆಚ್ಚು ಉದ್ದ ಸಂಚಾರ ದಟ್ಟಣೆ ಉಂಟಾಗಿತ್ತು. ರಸ್ತೆಯಲ್ಲಿ ಬಿದ್ದಿರುವ ಕಲ್ಲು,ಮಣ್ಣನ್ನು ತೆಗೆಯಲು ಜನರು ಹರಸಾಹಸ ಪಟ್ಟರು.
ಚಿಕಿತ್ಸೆಗಾಗಿ ಮಹಿಳೆಯನ್ನು 10ಕಿ.ಮೀ ಹೊತ್ತು ತಂದ ಗ್ರಾಮಸ್ಥರು
ಮೂಡಿಗೆರೆಗೆ ಸಂಪರ್ಕಿಸುವ ಬಹುತೇಕ ರಸ್ತೆಗಳಿಗೆ ಹಾನಿಯಾಗಿದ್ದು, ಮೂಡಿಗೆರೆ ಪಟ್ಟಣ ಎಲ್ಲ ಕಡೆಗಳಿಂದಲೂ ಸಂಪರ್ಕ ಕಡಿಕೊಳ್ಳುತ್ತಿದೆ. ಕೊಟ್ಟಿಗೆಹಾರದ ಪರಿಹಾರ ಕೇಂದ್ರಕ್ಕೆ ಹೊರಟಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಸ್ತೆ ಸಂಪರ್ಕ ಕಡಿತದಿಂದ ಅಲ್ಲಿಗೆ ತಲುಪಲು ಆಗದೆ ವಾಪಸ್ ಬಂದಿದ್ದಾರೆ.
ಪರಿಹಾರ ಕೇಂದ್ರಕ್ಕೆ ತಲುಪಲು ಸಾಧ್ಯವಾಗದೆ ಜಾವಳಿಯಲ್ಲಿ ಹಲವು ಕುಟುಂಬಗಳು ಆತಂಕಕ್ಕೆ ಸಿಲುಕಿವೆ. ಜನರು ಮಾತ್ರವಲ್ಲದೆ, ರಸ್ತೆ ಸಂಪರ್ಕವಿಲ್ಲದೆ ಅಧಿಕಾರಿಗಳು ಸಹ ಪರದಾಡುವಂತಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಮಲೆಮನೆ ಎಂಬ ಗ್ರಾಮದಲ್ಲಿ ಒಂಬತ್ತು ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಈ ಗ್ರಾಮಕ್ಕೆ ಸಂಪರ್ಕಿಸುವ ಎಲ್ಲ ಮಾರ್ಗಗಳೂ ಕಡಿತಗೊಂಡಿವೆ. ಹತ್ತಾರು ಮನೆಗಳು ಗಾಳಿ ಮಳೆಗೆ ನೆಲಸಮವಾಗಿವೆ. ಭಯಭೀತರಾಗಿರುವ ಜನರು ಒಂದೇ ಮನೆಯಲ್ಲಿ ರಕ್ಷಣೆ ಪಡೆದುಕೊಂಡಿದ್ದಾರೆ.
ಮಳೆಯಲ್ಲಿ ಕಾರು ನಿಯಂತ್ರಣ ತಪ್ಪಿ ಚಿಕ್ಕಮಗಳೂರಿನಲ್ಲಿ ಎರಡು ಕಡೆ ಅಪಘಾತ; ಒಂದು ಸಾವು
ಈ ಮನೆಯಿಂದಲೇ ಅಧಿಕಾರಿಗಳನ್ನು ಫೋನ್ ಮೂಲಕ ಸಂಪರ್ಕಿಸುವಲ್ಲಿ ಯಶಸ್ವಿಯಾದ ಜನರು ತಮ್ಮನ್ನು ರಕ್ಷಿಸುವಂತೆ ಅವರಿಗೆ ಕೋರಿದ್ದಾರೆ. ಆದರೆ, ಅಲ್ಲಿಗೆ ತೆರಳಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಗ್ರಾಮದ ಸುಮಾರು 200 ಜನರು ಈಗಾಗಲೇ ಕೊಟ್ಟಿಗೆಹಾರ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಮಳೆ ಇನ್ನಷ್ಟು ತೀವ್ರಗೊಳ್ಳುತ್ತಿರುವುದರಿಂದ ಮಲೆಮನೆ, ಬಾಳೂರು, ಚನ್ನಹಡ್ಲು ಸೇರಿದತೆ ವಿವಿಧ ಗ್ರಾಮಗಳಲ್ಲಿ ಮಳೆ ಅಬ್ಬರಕ್ಕೆ ಅನೇಕ ಮನೆಗಳು ಕುಸಿದಿವೆ.