ಚಿಕ್ಕಮಗಳೂರಲ್ಲಿ ಮತ್ತೆ ಮಳೆ, ಆಂಬುಲೆನ್ಸ್ಗೆ ಕುಡುಕರ ಕಿರಿಕ್, ತೆರವು ಭೂತಕ್ಕೆ ಮೊದಲ ಬಲಿ!
ಚಿಕ್ಕಮಗಳೂರು ಅಕ್ಟೋಬರ್ 5: ರಾಜ್ಯದೆಲ್ಲೆಡೆ ಕೊಂಚ ಬಿಡುವು ಪಡೆದಿದ್ದ ಮಳೆ ಮತ್ತೆ ಅಧಿಕವಾಗಿದೆ. ಅಕ್ಟೋಬರ್ ಆರಂಭದಿಂದಲೂ ರಾಜ್ಯದಲ್ಲಿ ಹಲವೆಡೆ ಮಳೆ ಜೋರಾಗಿದೆ. ಚಿಕ್ಕಮಗಳೂರಲ್ಲೂ ಮಳೆಯ ಅಬ್ಬರ ಮುಂದುವರೆದಿದೆ. ಇದರಿಂದಾಗಿ ಇಂದು ಧಾರಾಕಾರ ಮಳೆಗೆ ರಸ್ತೆಗೆ ಮರವೊಂದು ಅಡ್ಡಲಾಗಿ ಬಿದ್ದು ಅವಾಂತರವನ್ನೇ ಸೃಷ್ಟಿ ಮಾಡಿತ್ತು.
ಚಿಕ್ಕಮಗಳೂರು ತಾಲೂಕಿನ ಗೌರಿಗಂಡಿ ಗ್ರಾಮದ ಸಮೀಪದಲ್ಲಿ ಮಳೆ ಅಬ್ಬರಕ್ಕೆ ರಸ್ತೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದಾಗಿ ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಸ್ಥಳೀಯರೇ ಮರವನ್ನು ತೆರವುಗೊಳಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಚುರುಕುಗೊಂಡಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಯ ಅರ್ಭಟಕ್ಕೆ ಮಲೆನಾಡು ಭಾಗದ ಜನರು ತತ್ತರಿಸಿ ಹೋಗಿದ್ದಾರೆ.

ಚಿಕ್ಕಮಗಳೂರು: ಎಣ್ಣೆ ಏಟಲ್ಲಿ ಆಂಬುಲೆನ್ಸ್ ಗೆ ದಾರಿ ಬಿಡದೆ ಹುಚ್ಚಾಟ
ಮದ್ಯವೆಸನಿಗಳು ಆಂಬುಲೆನ್ಸ್ ಗೆ ದಾರಿ ಬಿಡದೆ ಹುಚ್ಚಾಟ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಡೆದಿದೆ. ಸೈರನ್ ಹಾಕಿ, ಹಾರನ್ ಮಾಡಿದರೂ ಜಾಗ ಬಿಡದೆ ಕುಡುಕರು ಆಂಬುಲೆನ್ಸ್ ಗೆ ಅಡ್ಡ ಕೈ ಹಾಕಿ ಸತಾಯಿಸಿದ್ದಾರೆ.
ಇಂದು ತರೀಕೆರೆ ತಾಲೂಕಿನ ಕೆಂಚಾಪುರ ಗೇಟ್ ಬಳಿ ಭೀಕರ ಅಪಘಾತವೊಂದು ಸಂಭವಿಸಿತ್ತು. ಬೊಲೆರೋ-ಟ್ರ್ಯಾಕ್ಟರ್ ಮಧ್ಯೆ ನಡೆದ ಭೀಕರ ಅಪಘಾತದಿಂದಾಗಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಗಾಯಾಳುಗಳನ್ನ ಆಂಬುಲೆನ್ಸ್ ನಲ್ಲಿ ಹಾಕಿಕೊಂಡು ಹೋಗುವಾಗ ಮಾರ್ಗ ಮಧ್ಯೆ ಕುಡುಕರು ಹುಚ್ಚಾಟವಾಡಿದ್ದಾರೆ. ಗಾಯಾಳುಗಳನ್ನು ತರೀಕೆರೆ ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ಗೆ ಕುಡುಕರು ಅಡ್ಡಹಾಕಿ ಕಿರಿಕ್ ಮಾಡಿದ್ದಾರೆ. ಗಂಭೀರ ಗಾಯಗೊಂಡ 15 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿನಾಡಲ್ಲಿ ಒತ್ತುವರಿ ತೆರವು ಭೂತಕ್ಕೆ ಮೊದಲ ಬಲಿ...
ಸಾಲದ ಜೊತೆ ಒತ್ತುವರಿ ಆತಂಕದಿಂದ ವಿಷ ಕುಡಿದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಕೆಂಚೇನಹಳ್ಳಿ ಗ್ರಾಮದ ಮಲ್ಲೇಶ್ (38) ಆತ್ಮಹತ್ಯೆಗೆ ಶರಣಾದ ರೈತ. ಮೃತ ಮಲ್ಲೇಶ್ ಕೆರೆ ಪಕ್ಕ 14 ಗುಂಟೆ ಒತ್ತುವರಿ ಮಾಡಿದ್ದರು. ಒತ್ತುವರಿ ಸಂಬಂಧ ಅಧಿಕಾರಿಗಳು ನೋಟೀಸ್ ನೀಡಿದ್ದರು. ಕೆರೆ ಒತ್ತುವರಿ ತೆರವು ಮಾಡ್ತಾರೆ ಎಂದು ಭಯಪಟ್ಟ ಮಲ್ಲೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಲ್ಲೇಶ್ ಸಕ್ರಮ ಜಮೀನಿನ ಜೊತೆ ಒತ್ತುವರಿ ಮಾಡಿ ಕಾಫಿ-ಮೆಣಸು ಬೆಳೆದಿದ್ದರು. ಕೆರೆ ಒತ್ತುವರಿ ತೆರವು ಮಾಡ್ತಾರೆ ಎಂದು ಭಯಪಟ್ಟ ಕಾಫಿಗೆ ಸಿಂಪಡಿಸಲು ತಂದಿದ್ದ ಕಳೆನಾಶಕವನ್ನೇ ಸೇವಿಸಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 2 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಮಲ್ಲೇಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications