ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಅನಾಹುತ, ಜನರಲ್ಲಿ ಆತಂಕ
Recommended Video
ಚಿಕ್ಕಮಗಳೂರು, ಸೆಪ್ಟೆಂಬರ್ 8: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ನಿಂತರೂ ಬೆಟ್ಟ- ಗುಡ್ಡ, ಭೂ ಕುಸಿತ ನಿಲ್ಲುತ್ತಿಲ್ಲ. ಭಾನುವಾರ ಬೆಳಗ್ಗೆಯಿಂದ ಮಳೆ ಪ್ರಮಾಣ ಕ್ಷೀಣಿಸಿದರೂ ಅಲ್ಲಲ್ಲೇ ಕಾಫಿ ತೋಟಗಳು ಕುಸಿಯುತ್ತಲೇ ಇವೆ. ಶನಿವಾರ ಕೂಡ ಮೂಡಿಗೆರೆ ತಾಲೂಕಿನ ಹಂಡುಗುಳಿ ಗ್ರಾಮದಲ್ಲಿ ಒಂದು ಎಕರೆ ಕುಸಿದಿತ್ತು. ಭಾನುವಾರ ಹನುಮನಹಳ್ಳಿಯಲ್ಲಿ ರತ್ನಾಕರ್ ಎಂಬುವರಿಗೆ ಸೇರಿದ ಸುಮಾರು ಎರಡು ಎಕರೆ ಕಾಫಿ ತೋಟ ಸಂಪೂರ್ಣ ಕುಸಿದಿದೆ.
ಮಲೆನಾಡಿನಲ್ಲಿ ಆರ್ಭಟಿಸಿದೆ ಮಳೆ; ಆವರಿಸಿದ ಭೀತಿ
ಇದರಿಂದ ಅಡಿಕೆ, ಮೆಣಸು, ಕಾಫಿ ಕೊಚ್ಚಿ ಹೋಗಿದೆ. ಎರಡನೇ ಸುತ್ತಿನ ಮಳೆ ಅಬ್ಬರದಲ್ಲಿ ಭೂಮಿ ನಿಂತಲ್ಲೇ ಪಾತಾಳಕ್ಕೆ ಕುಸಿಯುತ್ತಿರುವುದರಿಂದ ಮಲೆನಾಡಿಗರ ಆತಂಕ ಕೂಡ ಹೆಚ್ಚುತ್ತಲೇ ಇದೆ. ಭಾನುವಾರ ಬೆಳಗ್ಗೆಯಿಂದ ವರುಣದೇವ ಸ್ವಲ್ಪ ಮಟ್ಟಿಗೆ ಶಾಂತನಾಗಿದ್ದು, ಕಳಸ, ಕುದುರೆಮುಖ, ಹಿರೇಬೈಲು, ಸಂಸೆ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದೆ.
ಎನ್. ಆರ್. ಪುರ, ಕೊಪ್ಪ ಹಾಗೂ ಶೃಂಗೇರಿಯಲ್ಲೂ ಸಾಧಾರಣ ಮಳೆ ಮುಂದುವರಿದಿದ್ದು, ತುಂಗಾ- ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಹೆಬ್ಬಾಳೆ ಸೇತುವೆ ಮುಳುಗಡೆಗೆ ಕೆಲ ಅಡಿಯಷ್ಟೆ ಬಾಕಿ ಇದೆ. ಕಳೆದ ವರ್ಷ 17 ಬಾರಿ, ಈ ವರ್ಷ ನಾಲ್ಕು ದಿನ 24 ಗಂಟೆಯೂ ಮುಳುಗಿತ್ತು. ಈ ಸೇತುವೆ ಮುಳುಗಿದರೆ ಹೊರನಾಡು- ಕಳಸ ಸಂಪರ್ಕ ಬಂದ್ ಆಗಲಿದೆ.