ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್ಕುಮಾರ್ ನಂಟು
ಚಿಕ್ಕಮಗಳೂರು, ಅಕ್ಟೋಬರ್ 29; ಕನ್ನಡ ಚಲನಚಿತ್ರ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಘಾತದಿಂದ ನಿಧನರಾಗಿದ್ದು, ತಮ್ಮನೆಚ್ಚಿನ ನಟ ಹಾಗೂ ಕಾಫಿನಾಡಿನ ಭಾಗೇಮನೆಯ ಅಳಿಯನನ್ನು ಕಳೆದುಕೊಂಡ ಚಿಕ್ಕಮಗಳೂರು ಜಿಲ್ಲೆಯ ಜನತೆ ಕಂಬನಿ ಮಿಡಿದಿದ್ದಾರೆ.
ಶುಕ್ರವಾರ ಬೆಳಗ್ಗೆ ನಟ ಪುನೀತ್ ರಾಜ್ಕುಮಾರ್ಗೆ ಹೃದಯಘಾತವಾಗಿ ಆಸ್ಪತೆಗೆ ಸೇರಿದ್ದಾರೆ ಎಂಬ ಸುದ್ಧಿ ಎಲ್ಲಡೆ ಬಿತ್ತರವಾಗುತ್ತಿದ್ದಂತೆ ಪುನೀತ್ ರಾಜ್ಕುಮಾರ್ ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ದೇವರ ಮೋರೆ ಹೋಗಿದ್ದು, ಅಭಿಮಾನಿಗಳ ಪ್ರಾರ್ಥನೆ ಫಲಿಸದೇ ಅವರು ಇಹಲೋಕ ತ್ಯಜಿಸಿದ್ದು ಕಾಫಿ ನಾಡಿನಾದ್ಯಂತ ದುಃಖ ಮಡುಗಟ್ಟಿದೆ.
ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಕಾಫಿನಾಡಿನೊಂದಿಗೆ ಅಪಾರವಾದ ನಂಟು ಹೊಂದಿದ್ದು, ಅವರ ಅನೇಕ ಚಲನಚಿತ್ರಗಳಿಗೆ ಈ ನೆಲ ಸಾಕ್ಷಿಯಾಗಿದೆ. ಅಭಿ, ಅಪ್ಪು, ಮಿಲನ, ಬೆಟ್ಟದಹೂವು ಸೇರಿದಂತೆ 15ಕ್ಕೂ ಹೆಚ್ಚು ಚಲನಚಿತ್ರಗಳ ಚಿತ್ರೀಕರಣ ಇಲ್ಲಿ ನಡೆದಿದ್ದು, ಚಿತ್ರೀಕರಣದ ಜೊತೆಗೆ ಕೌಟುಂಬಿಕ ನಂಟು ಹೊಂದುವ ಮೂಲಕ ಕಾಫಿನಾಡಿನ ಅಳಿಯನಾಗಿದ್ದು, ಕನ್ನಡ ಚಲನಚಿತ್ರ ರಂಗದ ಪವರ್ ಸ್ಟಾರ್ ಕಾಫಿನಾಡಿನ ಅಳಿಯನಾಗಿದ್ದು ನಾಡಿನ ಗರಿಮೆ ಹೆಚ್ಚಿಸಿತ್ತು.
ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಸಮೀಪದ ಬಾಗೇಮನೆ ಬಿ. ರೇವನಾಥ್ ಮತ್ತು ವಿಜಯಾ ರೇವನಾಥ್ ಪುತ್ರಿ ಅಶ್ವಿನಿಯವರೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮೂಲಕ ಕಾಫಿನಾಡಿನ ಅಳಿಯನಾದರೂ. 40 ವರ್ಷಗಳಿಂದ ಬಿ. ರೇವನಾಥ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಬಾಗೇಮನೆಯಲ್ಲಿ ಬಿ. ರೇವನಾಥ್ ಸೇರಿದ ಮನೆ ಇದ್ದು, ಅಲ್ಲಿಗೆ ಅನೇಕ ಬಾರೀ ಪುನೀತ್ ರಾಜ್ಕುಮಾರ್ ಬಂದು ತಂಗಿದ್ದರು. ಅವರ ನಿಧನದಿಂದ ಬಾಗೇಮನೆ ಮತ್ತು ಜಿಲ್ಲಾದ್ಯಂತ ಅತೀವ ಶೋಕ ಮಡುಗಟ್ಟಿದೆ.

ಅಂದಿನ ದಿನಗಳ ನೆನಪು
ರೇವನಾಥ್ ಮತ್ತ ವಿಜಯಾ ದಂಪತಿಗಳು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದು, ಅಶ್ವಿನಿ ಅಲ್ಲೇ ಹುಟ್ಟಿ ಬೆಳೆದಿದ್ದು ಅಶ್ವಿನಿ ಮತ್ತು ಪುನೀತ್ ರಾಜ್ಕುಮಾರ್ ಪ್ರೀತಿಸಿ ಕುಟುಂಬದ ಒಪ್ಪಿಗೆಯೊಂದಿಗೆ ದಾಂಪತ್ಯ ಕಾಲಿಟ್ಟರು ಎಂದು ಚಿಕ್ಕಮಗಳೂರು ನಗರದಲ್ಲಿ ನೆಲೆಸಿರುವ ಅಶ್ವಿನಿ ಸಂಬಂಧಿ ಐ. ಬಿ. ಶಂಕರ್ ಮತ್ತು ಉಮಾ ಶಂಕರ್ ದಂಪತಿಗಳು ಅಂದಿನ ದಿನಗಳನ್ನು ನೆನೆದು ಕಣ್ಣಿರಿಟ್ಟರು.

ಯೋಗಕ್ಷೇಮ ವಿಚಾರಿಸುತ್ತಿದ್ದರು
ರೇವನಾಥ್ ಮತ್ತು ಐ. ಬಿ. ಶಂಕರ್ ಸೋದರ ಸಂಬಂಧಿಯಾಗಿದ್ದು, ನಮ್ಮ ಕುಟುಂಬದೊಂದಿಗೆ ಬಹಳ ಒಡನಾಟ ಹೊಂದಿದ್ದರು. ಅಶ್ವಿನಿ ಮತ್ತು ನಮ್ಮ ಮಗಳು ಗೌರವಿ ಶಂಕರ್ ಒಟ್ಟಿಗೆ ಆಡಿ ಬೆಳೆದವರು. ಪುನೀತ್ ರಾಜ್ಕುಮಾರ್ ಫಿಲಂ ಚಿತ್ರೀಕರಣದ ಹಾಗೂ ಇತರೆ ಸಂದರ್ಭಗಳಲ್ಲಿ ಚಿಕ್ಕಮಗಳೂರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದರು. ನಮ್ಮ ಮನೆಯವರನ್ನೂ ತಮ್ಮ ಮನೆಯವರಂತೆ ಪ್ರೀತಿಸುತ್ತಿದ್ದ ಎಂದು ಭಾವುಕರಾದರು.

ಕೊನೆಯದಾಗಿ ನೋಡಿದ ನೆನಪು
ಐ. ಬಿ. ಶಂಕರ್ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದ ಪುನೀತ್ ರಾಜ್ಕುಮಾರ್ ಇತ್ತೀಚೆಗೆ ತಮ್ಮ ಮಗಳು ವಿದೇಶಕ್ಕೆ ಹೋಗುವಾಗ ತಮ್ಮನೆಲ್ಲಾ ಊಟಕ್ಕೆ ಕರೆದಿದ್ದರು. ನಾವೆಲ್ಲ ಭಾಗಿಯಾಗಿದ್ದೆವು. ಅದೇ ಕೊನೆಯದಾಗಿ ಅವರನ್ನು ನೋಡಿದ್ದು ಎಂದು ಅಂದಿನ ಕ್ಷಣವನ್ನು ನೆನೆದರು.
ಇತ್ತೀಚೆಗೆ ಬೆಂಗಳೂರಿಗೆ ಹೋದಾಗ ನಮ್ಮ ಕಾರಿನ ಡ್ರೈವರ್ ಅಪ್ಪು ಜೊತೆ ಫೋಟೋ ತೆಗೆಸಿಕೊಳ್ಳುವ ಹಂಬಲ ವ್ಯಕ್ತಪಡಿಸಿದ್ದ ಆದರೆ, ಸಾಧ್ಯವಾಗಿರಲಿಲ್ಲ ಈ ವಿಚಾರವನ್ನು ಅಪ್ಪುಗೆ ತಿಳಿಸಿದಾಗ ತುಂಬಾ ಬೇಸರಪಟ್ಟುಕೊಂಡಿದ್ದ ಎಂದು ಉಮಾಶಂಕರ್ ದುಖಿಃತರಾದರು.

ಅಕ್ಕಿರೊಟ್ಟಿ ಇಷ್ಟಪಡುತ್ತಿದ್ದರು
ಪುನೀತ್ ರಾಜ್ಕುಮಾರ್ ಚಿಕ್ಕಮಗಳೂರಿನ ನೇಚರ್ ನೋಡಲು ಅನೇಕ ಸಲ ಚಿಕ್ಕಮಗಳೂರಿಗೆ ಬರುತ್ತಿದ್ದರು. ಮುಳ್ಳಯ್ಯನಗಿರಿ ಸೇರಿದಂತೆ ಮೂಡಿಗೆರೆ, ಕೊಟ್ಟಿಗೆಹಾರ ಹೀಗೆ ಅನೇಕ ಕಡೆ ಬಹಳ ಷ್ಟು ಬಾರೀ ಬಂದಿದ್ದರು. ಇಲ್ಲಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಚಿಕ್ಕಮಗಳೂರಿಗೆ ಬಂದಾಗಲೇಲ್ಲ ಹೆಚ್ಚಾಗಿ ಸರಾಯ್ ಹೋಟೆಲ್, ತ್ರಿವಿಕ್, ಕ್ರೀಮ್ ರೋಸ್ ಹೊಟೇಲ್ಗಳಲ್ಲಿ ತಂಗುತ್ತಿದ್ದರು. ಮಲೆನಾಡಿನ ಅಕ್ಕಿರೊಟ್ಟಿ ಮೀನುಸಾರು, ಮಟನ್ಚಾಪ್ಸ್ ಎಂಜಾಯ್ ಮಾಡುತ್ತಿದ್ದರು ಎಂದು ಐ. ಬಿ. ಶಂಕರ್ ಹೇಳಿದರು.

ವಿಡಿಯೋ ಮಾಡಿ ಹಾಕಿದ್ದರು
ಪುನೀತ್ ರಾಜ್ಕುಮಾರ್ ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂವು ಚಲನಚಿತ್ರ ಬಹುತೇಕ ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ, ಕೆಮ್ಮಣ್ಣಗುಂಡಿ ಸುತ್ತಮುತ್ತ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಇತ್ತೀಚೆಗೆ ಈ ಚಿತ್ರ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಂದು ಚಿತ್ರೀಕರಣ ನಡೆಸಿದ ಜಾಗಗಳಿಗೆ, ಮನೆಗೆ ಭೇಟಿ ನೀಡಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಆ ವಿಡಿಯೋ ಬಾರೀ ಜನಮೆಚ್ಚುಗೆಗೆ ಪಾತ್ರವಾಗಿತ್ತು. ಅಂದಿನ ಪರಿಸರ ಹಾಗೂ ಇಂದಿನ ಬದಲಾದ ಪರಿಸರವನ್ನು ನೋಡಿ ಬಾರೀ ಎಂಜಾಯ್ ಮಾಡಿದ್ದರು.












Click it and Unblock the Notifications