ಶೃಂಗೇರಿಗೆ ಪ್ರಧಾನಿ ಮೋದಿ ಪತ್ನಿ ಜಶೋದಾಬೆನ್ ಭೇಟಿ
ಚಿಕ್ಕಮಗಳೂರು, ಮಾರ್ಚ್ 04: ಪ್ರಧಾನಿ ನರೇಂದ್ರ ಮೋದಿ ಪತ್ನಿ ಜಶೋದಾಬೆನ್ ಅವರು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇಂದು ಶೃಂಗೇರಿ ಶಾರದಾದೇವಿಯ ದರ್ಶನ ಪಡೆದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ಜಶೋದಾಬೆನ್ ಅವರು, ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಕೆಲ ನಿಮಿಷಗಳ ಕಾಲ ಶಾರದಾಂಬೆ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿದರು.
ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಜಶೋದಾಬೆನ್ ಅವರು ನಂತರ ತುಂಗಾ ನದಿಯ ಸೌಂದರ್ಯ ಕಣ್ತುಂಬಿಕೊಂಡರು. ಇದಕ್ಕೂ ಮೊದಲು ಜಶೋದಾಬೆನ್ ಅವರು ಬೆಳಿಗ್ಗೆ ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ನೀಲಕಂಠೇಶ್ವರ ದೇವರ ಅಭಿಷೇಕ, ಅಷ್ಟೋತ್ತರ, ಮಹಾ ಮಂಗಳಾರತಿಯ ದರ್ಶನ ಪಡೆದರು. ಈ ವೇಳೆ ಮೋದಿ ಸೇರಿದಂತೆ ಇಡೀ ಪರಿವಾರಕ್ಕೆ ದೇವರ ಅನುಗ್ರಹ ಬೇಡಿದರು. ನೀಲಕಂಠೇಶ್ವರ ದೇವರ ದರ್ಶನದ ನಂತರ ನಗರದ ಪ್ರವಾಸಿ ಮಂದಿರಕ್ಕೆ ತೆರಳಿ ಉಪಾಹಾರ ಸೇವಿಸಿದರು.
ನಂತರ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ಆಯೋಜಿಸಿರುವ 'ಶ್ರೀ ಕೃಷ್ಣಾರ್ಪಣಂ' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಾದ ಪಡೆದರು. ಅಲ್ಲಿಂದ ಶೃಂಗೇರಿಗೆ ಬಂದಿದ್ದಾರೆ.












Click it and Unblock the Notifications