ಇದು ಮತ್ತಿನ್ನೇನು ಅನಾಹುತಕ್ಕೆ ಕಾರಣವಾಗುವುದೋ; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ
ಚಿಕ್ಕಮಗಳೂರು, ಮೇ 04: ರಾಜ್ಯಾದ್ಯಂತ ಇಂದು ಮದ್ಯದಂಗಡಿಗಳು ತೆರೆದಿವೆ. ಎಲ್ಲೆಲ್ಲೂ ಮದ್ಯ ಮಾರಾಟ ಜೋರಾಗಿ ಸಾಗಿದೆ. ಈ ನಡುವೆ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದರ ಬಗ್ಗೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿ ತಿಳಿದು ನಿಜಕ್ಕೂ ಆಘಾತವಾಯಿತು. ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ. ಕೊರೊನಾ ಕಾರಣದಿಂದ ಮದ್ಯಪಾನ ನಿಷೇಧಿಸಿದ್ದರಿಂದ ಬಹುತೇಕ ಕುಡುಕರು ಆ ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಸರ್ಕಾರದ ತೀರ್ಮಾನ ಸರಿಯಿಲ್ಲ ಎಂದು ಹೇಳಿದ್ದಾರೆ.
ಕುಡಿದವರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಇದು ಮತ್ತಿನ್ನೇನು ಅನಾಹುತಕ್ಕೆ ಕಾರಣವಾಗುವುದೋ? ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ನೆಲ ಕಚ್ಚುತ್ತದೆ, ಅಪರಾಧ, ಅನಾಹುತಗಳು ಸಾಲುಸಾಲಾಗಿ ನಡೆಯಬೇಕೆ? ಬಡವರಿಗೆ ಕುಡಿಸಿ ಆ ಹಣದಿಂದಲೇ ರಾಜ್ಯಭಾರ ಮಾಡಬೇಕೇ? ಕುಡಿತ ಬಿಟ್ಟಿರುವುದರಿಂದ ಆಗಿರುವ ಅನುಕೂಲತೆ, ಅನನುಕೂಲಗಳನ್ನು ಸರ್ವೆ ಮಾಡಿಸಿದ್ದರೆ ಖಂಡಿತ ಕೇಂದ್ರ ಸರ್ಕಾರ ಈ ನಿಲುವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಸರ್ಕಾರದ ಈ ನಿಲುವನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಕೊರೊನಾ ಮಾರಿ ಮರೆಯಾಗುವವರೆಗಾದರೂ ಸಂಪೂರ್ಣ ಮದ್ಯ ನಿಷೇಧ ಮಾಡಿ ನಂತರ ಸರ್ವೇ ಮೂಲಕ ಮುಂದಿನ ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇಲ್ಲವೆಂದರೆ ಕೊರೊನಾ ತಡೆಗಟ್ಟಲು ಇದುವರೆಗೂ ಮಾಡಿರುವ ಸಾಹಸ ಹೊಳೆಯಲ್ಲಿ ಹುಣಸೆಹಣ್ಣನ್ನು ಕದಡಿದಂತಾಗುವುದು. ತುಂಬಾ ನೊಂದು ಈ ಮಾತುಗಳನ್ನು ಹೇಳುತ್ತಿದ್ದೇನೆ. ಜನರೂ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿ ಕುಡಿತದಿಂದ ಕುಟುಂಬವನ್ನು ರಕ್ಷಿಸುವ ಸಂಕಲ್ಪ ಸ್ವೀಕರಿಸಬೇಕು ಎಂದು ಮನವಿ ಮಾಡಿದರು.












Click it and Unblock the Notifications