ಸಂವಿಧಾನವನ್ನು ಉಳಿಸುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು- ಅಂಬೇಡ್ಕರ್ ಮೊಮ್ಮಗ
ಚಿಕ್ಕಮಗಳೂರು, ಜನವರಿ 5: ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಸಂವಿಧಾನ ಇಂದು ಕಷ್ಟದಲ್ಲಿದ್ದು, ಸಂವಿಧಾನವನ್ನು ಬಚಾವ್ ಮಾಡುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಅಂಬೇಡ್ಕರ್ ಮೊಮ್ಮಗ ಡಾ. ರಾಜರತ್ನಂ ಅಂಬೇಡ್ಕರ್ ಕರೆ ನೀಡಿದರು.
ಚಿಕ್ಕಮಗಳೂರು ನಗರದಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಬಹಿರಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭೀಮಾ ಕೋರೆಗಾಂವ್ನಲ್ಲಿ ನಮ್ಮ ಪೂರ್ವಜನರ ಹೆಸರು ಕೆತ್ತಲಾಗಿದೆ. ಅಂಬೇಡ್ಕರ್ ಅವರು ಪ್ರತಿವರ್ಷ ಜನವರಿ1 ರಂದು ಭೀಮಾ ಕೋರೆಗಾಂವ್ಗೆ ಹೋಗುತ್ತಿದ್ದರು. ಕೋರೆಗಾಂವ್ನಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸುತ್ತಿದ್ದರು ಎಂದರು.
ಚಿಕ್ಕಮಗಳೂರು: ದತ್ತಪೀಠದಲ್ಲಿ ಮುಡಿ ಕೊಟ್ಟ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ
ದಂಡುಮೇಜಿನ ಸಭೆಗೆ ಅಂಬೇಡ್ಕರ್ ಅವರು ಹೋಗಿದ್ದ ವೇಳೆ ಮಹಾತ್ಮಗಾಂಧಿಜೀಯವರು ವಿರೋಧ ಮಾಡಿದ್ದರು. ಅಸ್ಪೃಶ್ಯರ ನಾಯಕ ನಾನು ಎಂದು ಹೇಳಿಕೊಂಡಿದ್ದರು. ಸಭೆಯಲ್ಲಿ ಅಂಬೇಡ್ಕರ್ ಅವರು ಅಸ್ಪೃಶ್ಯರ ಹಕ್ಕುಗಳನ್ನು ಪಡೆದಿದ್ದರು. ಎರಡನೇ ದುಂಡು ಮೇಜಿನ ಸಭೆಯಲ್ಲೂ ಅಂಬೇಡ್ಕರ್ ಅವರು ಪಾಲ್ಗೊಂಡಿದ್ದು ಅವರಿಗೆ ವಿಜಯ ಸಿಕ್ಕಿತ್ತು. ಅಂಬೇಡ್ಕರ್ ಅವರನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂಬ ಅರಿವಾಗಿತ್ತು ಎಂದು ತಿಳಿಸಿದರು.
ಸಂವಿಧಾನ ರಚನೆ ಸಂದರ್ಭದಲ್ಲೂ ಅಂಬೇಡ್ಕರ್ ಅವರು ಅನೇಕ ಅಡೆತಡೆಗಳನ್ನು ಎದುರಿಸಿದ್ದರು. ಸರ್ದಾರ್ ವಲ್ಲಬಾಯಿ ಪಾಟೇಲ್ ಮತ್ತು ನೆಹರು ಅವರು ಸಂವಿಧಾನ ಸಭೆಗೆ ಅಂಬೇಡ್ಕರ್ ಅವರು ಹೋಗದಂತೆ ತಡೆವೊಡ್ಡಿದ್ದರು. ಅಡೆತಡೆಗಳನ್ನು ದಾಟಿ ಅಂಬೇಡ್ಕರ್ ಅವರು ಸಭೆಯೊಳಗೆ ಹೋಗಿ ದೇಶದ ಮೂಲನಿವಾಸಿಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರೂ ಅಂಬೇಡ್ಕರ್ ಪರ ನಿಲ್ಲುವ ಕೆಲಸ ಮಾಡಿದರು. ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದರು.
ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ನೀಡಿರುವ ಸಂವಿಧಾನ ಇಂದು ಅಪಾಯದಲ್ಲಿದೆ. ಕಷ್ಟದಲ್ಲಿರುವ ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕಿದೆ ಎಂದು ತಿಳಿಸಿದರು.
ಭೀಮಾ ಕೋರೆಗಾವ್ ವಿಜಯೋತ್ಸವ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಹಿನ್ನಲೆ ಯಲ್ಲಿ ಬೃಹತ್ ಮೆರೆವಣಿಗೆ ನಡೆಸಲಾಯಿತು. ನಗರದ ಕೆಇಬಿ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಬಸವ ನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್ಪಾರ್ಕ್ ವೃತ್ತದ ವರೆಗೂ ಮೆರವಣಿಗೆ ನಡೆಸಲಾಯಿತು.
ಮೆರವಣಿಯುದ್ದಕ್ಕೂ ಡಿ.ಜೆ ಸದ್ದಿಗೆ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಕುಣಿದು ಕುಪ್ಪಳಿಸಿದರು.
ಮಹಿಳೆಯರಿಗಾಗಿ ಪ್ರತ್ಯೇಕ ಡಿ.ಜೆ. ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ಮೆರವಣಿಗೆ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಂಡರು.
ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನರು ಬುದ್ಧ ಬಸವ ಅಂಬೇಡ್ಕರ್ ಹಾಗೂ ನೀಲಿ ಭಾವುಟಗಳನ್ನು ಹಿಡಿದು ಜೈಕಾರ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಮೆರವಣಿಗೆ ಆಜಾದ್ಪಾರ್ಕ್ ವೃತ್ತದಲ್ಲಿ ಸಮಾಪ್ತಿಗೊಂಡು ಬಹಿರಂಗಸಭೆ ನಡೆಯಿತು. ಮೆರವಣಿಗೆಯಲ್ಲಿ ಅಂಬೇಡ್ಕರ್ ಮೊಮ್ಮಗ ಡಾ.ರಾಜರತ್ನಂ ಅಂಬೇಡ್ಕರ್, ಮೈಸೂರು ಉರಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಅಲಂಕೃತ ವಾಹನದಲ್ಲಿ ಮೆರವಣಿಯಲ್ಲಿ ಪಾಲ್ಗೊಂಡಿದ್ದರು.