Santosh Suicide Case: ಚಿಕ್ಕಮಗಳೂರಿನಲ್ಲಿ ಕೆ ಎಸ್ ಈಶ್ವರಪ್ಪ ಬಂಧನಕ್ಕೆ ಸಿದ್ದರಾಮಯ್ಯ ಆಗ್ರಹ
ಚಿಕ್ಕಮಗಳೂರು, ಏಪ್ರಿಲ್ 16: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ರೂವಾರಿ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಬಿಜೆಪಿಯವರು ಆರೋಪಿ ಕೆ.ಎಸ್.ಈಶ್ವರಪ್ಪ ಬೆನ್ನಿಗೆ ನಿಂತು ರಕ್ಷಣೆ ಮಾಡುತ್ತಿದ್ದಾರೆ. ಇಂತಹ ಆರೋಪ ಸಾಮಾನ್ಯ ವ್ಯಕ್ತಿಯ ಮೇಲೆ ಬಂದಿದ್ದರೇ ಸುಮ್ಮನೆ ಇರುತ್ತಿದ್ದರಾ? ಪೊಲೀಸರು ಮೊದಲು ಬಂಧಿಸುತ್ತಿದ್ದರು. ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಈ ನಿಟ್ಟಿನಲ್ಲಿ ಕೆ.ಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಸಿದ್ದರಾಮಯ್ಯ ಹೇಳಿದರು.


ಸರ್ಕಾರದಿಂದ 1 ಕೋಟಿ ಪರಿಹಾರ ನೀಡುವಂತೆ ಒತ್ತಾಯ
ಗುತ್ತಿಗೆದಾರ ಸಂತೋಷ ಪಾಟೀಲ್ನನ್ನು ಕಳೆದುಕೊಂಡ ಕುಟುಂಬ ಕಷ್ಟಕ್ಕೆ ಸಿಲುಕಿದ್ದು, ಆ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು. ಇದರ ಜೊತೆಗೆ ಕಾಮಗಾರಿ ಮೊತ್ತ 4 ಕೋಟಿ ರೂಪಾಯಿ ಅನ್ನು ನೀಡಬೇಕು ಹಾಗೂ ಸಂತೋಷ್ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಪ್ರಧಾನಿ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮ ಸರ್ಕಾರ ಇದ್ದಾಗ ಆಧಾರ ರಹಿತವಾಗಿ ಇದು 10 ಪರ್ಸೆಂಟ್ ಸರ್ಕಾರ ಎಂಬ ಆರೋಪ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಮಗಾರಿ ನಡೆಸಲು 40 ಪರ್ಸೆಂಟ್ ಕಮಿಷನ್ ನೀಡಬೇಕು ಎಂದು ಪ್ರಧಾನಿಗೆ ಪತ್ರ ಬರೆದು 8 ತಿಂಗಳು ಕಳೆದರೂ ಏಕೆ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಮೋದಿ 56 ಇಂಚಿನ ಎದೆಗಾರ ಎಂದು ಹೇಳಿಕೊಳ್ಳುತ್ತಿದ್ದು, ನಾನು ತಿನ್ನಲ್ಲ, ತಿನ್ನಲು ಬಿಡಲ್ಲ ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ. ಆಡಳಿತ ನಡೆಸಲು 56 ಇಂಚು ಎದೆ ಬೇಕಿಲ್ಲ, ತಾಯಿ ಹೃದಯ ಇರಬೇಕು. ಈ ಭ್ರಷ್ಟ ಸರ್ಕಾರವನ್ನು ಕಿತ್ತೋಗೆಯದಿದ್ದರೆ, ಈ ರಾಜ್ಯಕ್ಕೆ ಉಳಿಗಾಲವಿಲ್ಲ ಎಂದರು.

ಮಳೆಯಲ್ಲೇ ನಿಂತು ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ
'ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಸಿದ್ಧರಾಮಯ್ಯ ಭಾಷಣ ಪ್ರಾರಂಭಿಸುತ್ತಿದ್ದಂತೆ ಮಳೆ ಶುರು ಆಯಿತು. ಸಿದ್ಧರಾಮಯ್ಯ ಮಳೆಯಲ್ಲೆ ಭಾಷಣ ಮಾಡಿದರು. ನಾವು ಹೋರಾಟಗಾರರು ಮಳೆ ಗಾಳಿ, ಚಳಿ ಬಿಸಿಲನ್ನು ಲೆಕ್ಕಿಸಬಾರದೆಂದು ನೆರೆದಿದ್ದ ಜನರನ್ನು ಹುರಿದುಂಬಿಸಿದರು. 'ಈಶ್ವರಪ್ಪ ಭಂಡ ಕಣ್ರಿ ಆತ ಸುಲಭವಾಗಿ ರಾಜೀನಾಮೆ ಕೊಡುತ್ತಿರಲಿಲ್ಲ, ಕೇಂದ್ರದವರೇ ಹೇಳಿ ಕೊಡಿಸಿದ್ದಾರೆ. ಅನೇಕ ಮಂತ್ರಿಗಳ ಮೇಲೆ 40 ಪರ್ಸೆಂಟೇಜ್ ಆರೋಪ ಕೇಳಿ ಬರುತ್ತಿದೆ. ಈ ಸರ್ಕಾರ ಇರುವುದು ರಾಜ್ಯದ ಜನತೆಗೆ ಮುಜುಗರವಾಗುತ್ತಿದೆ,' ಎಂದು ಹೇಳಿದರು.

ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ
ಮುಂದಿನ ಐದು ದಿನಗಳ ಕಾಲ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸಲು ಕೆಪಿಸಿಸಿ 9 ತಂಡಗಳನ್ನು ರಚಿಸಿದೆ. ಜನರ ಬಳಿಗೆ ತೆರಳಿ ಬಿಜೆಪಿ ಸರ್ಕಾರದ ಭ್ರಷ್ಟಚಾರವನ್ನು ತಿಳಿಸಲಾಗುವುದು. ಈಶ್ವರಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವಾಗ ಬಲಗಡೆಗೆ ಹೂವು ಬಿದ್ದಿದೆ, ದೋಷಮುಕ್ತನಾಗಿ ಬರುತ್ತೇನೆ ಎನ್ನುತ್ತಿದ್ದಾನೆ. ಲೂಟಿ ಹೊಡೆಯುವವರಿಗೆ ದೇವರು ಸಹಾಯ ಮಾಡ್ತಾನೇನ್ರಿ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದರು.
ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಡಿಮ್ಯಾಂಡ್ ಮಾಡದಿದ್ದರೇ ರಾಜೀನಾಮೆ ಯಾಕೆ ಕೊಡುತ್ತಿದ್ದರು. ಬಿಜೆಪಿ ಕೇಂದ್ರದ ವರಿಷ್ಟರು ಈಶ್ವರಪ್ಪ ರಾಜೀನಾಮೆ ಯಾಕೆ ಪಡೆಯುತ್ತಿದ್ದರು. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಈಶ್ವರಪ್ಪನೇ ನನ್ನ ಸಾವಿಗೆ ಕಾರಣವೆಂದು ಡೆತ್ನೋಟ್ನಲ್ಲಿ ಹೇಳಿದ್ದಾರೆ. ವಾಟ್ಸಪ್ ಮೆಸೇಜ್ ಮೂಲಕ ಎಲ್ಲರಿಗೂ ಕಳಿಸಿದ್ದಾರೆ ಎಂದು ಉಲ್ಲೇಖಿಸಿದರು.












Click it and Unblock the Notifications