"ಊರಿನ ಸಮಸ್ಯೆ ಬಗೆಹರಿಸುವಂಥ ಯೋಗ್ಯರನ್ನು ಆಯ್ಕೆ ಮಾಡಿ"
ಚಿಕ್ಕಮಗಳೂರು, ನವೆಂಬರ್ 30: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಕೋವಿಡ್ ಹಿನ್ನೆಲೆ ಮೈ ಮರೆಯದೇ ಚುನಾವಣೆ ಎದುರಿಸಬೇಕು. ಪಕ್ಷಾತೀತ ಚುನಾವಣೆ ಆದ್ದರಿಂದ ಊರಿನ ಸಮಸ್ಯೆ ಬಗೆಹರಿಸುವಂತಹ ಯೋಗ್ಯರನ್ನು ಆಯ್ಕೆ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಚಿವ ಸಿ.ಟಿ.ರವಿ ಮತದಾರರಿಗೆ ಮನವಿ ಮಾಡಿದರು.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಗ್ರಾಮ ಸ್ವರಾಜ್ ಯಾತ್ರೆಯ ಮೂಲಕ ಈಗಾಗಲೇ ಚುನಾವಣೆ ಸಿದ್ಧತೆ ನಡೆಸಲಾಗಿದೆ. ಪಕ್ಷದ ಕಾರ್ಯರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬರುವ ವಿಶ್ವಾಸ ನನಗಿದೆ ಎಂದು ಹೇಳಿದರು.
ನಟ ರಜನೀಕಾಂತ್ ರಾಜಕೀಯ ಪ್ರವೇಶ ವಿಚಾರವಾಗಿ ಮಾತನಾಡಿದ ಅವರು, ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋದು ಹತ್ತು ವರ್ಷದಿಂದ ಕೇಳಿಬರುತ್ತಿರುವ ಮಾತು. ಅವರು ನಿರ್ಣಯ ಮಾಡದೇ ನಾವು ಪ್ರತಿಕ್ರಿಯೆ ನೀಡೋದು ಸೂಕ್ತವಲ್ಲ ಎಂದಿದ್ದಾರೆ. ರಾಜಕೀಯಕ್ಕೆ ಬರುವ ಬಗ್ಗೆ ರಜನೀಕಾಂತ್ ನಿರ್ಣಯ ಮಾಡಲಿ. ನಿರ್ಣಯ ಮಾಡಿದ ಮೇಲೆ ಸನ್ನಿವೇಶ, ಸಂದರ್ಭ ನೋಡಿ ಮುಂದಿನ ತೀರ್ಮಾನವನ್ನು ಅವರು ಕೈಗೊಳ್ಳಲಿ" ಎಂದು ತಿಳಿಸಿದರು.

ಯಡಿಯೂರಪ್ಪ ವಿರುದ್ಧ ಮಾಜಿ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿ, "ಕಾಂಗ್ರೆಸ್ಸಿಗೆ ಇರುವ ಪಟ್ಟವನ್ನು ಇನ್ಯಾರೂ ಕಿತ್ತುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ಗೆ ಬಂದ ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಪಾಠವನ್ನೇ ಕಲಿಯುತ್ತಿದ್ದಾರೆ. ಸತ್ಯವನ್ನು ನಂಬದೇ ಇರುವವರಿಗೆ ಸತ್ಯವೆಲ್ಲ ಸುಳ್ಳಾಗಿ ಕಾಣುತ್ತದೆ. ಸತ್ಯವನ್ನು ನಂಬುವ ಸ್ವಭಾವ ಕಾಂಗ್ರೆಸ್ ನವರಿಗೆ ಇಲ್ಲ. ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಹೇಳುವ ಮೂಲಕ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಸಿಎಎ ವಿರುದ್ಧ ಭಯ ಹುಟ್ಟಿಸಿ ಮುಸ್ಲಿಮರನ್ನು ಬೀದಿಗೆ ಇಳಿಸಿದಿರಿ. ಕೇಂದ್ರದ ನೂತನ ಕೃಷಿ ಕಾಯ್ದೆಯ ಬಗ್ಗೆಯೂ ಕಾಂಗ್ರೆಸ್ ಅಪಪ್ರಚಾರ ಮಾಡಿದಿರಿ. ಕೃಷಿ ಕಾಯ್ದೆ ರೈತರ ಬದುಕನ್ನು ಕಿತ್ತುಕೊಳ್ಳುತ್ತದೆ ಎಂದು ಅಪಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications