ದೀದಿ ರಕ್ತ ಸಿಕ್ತ ಕೈಗಳಿಂದ ಪುಣ್ಯ ಬರಲ್ಲ; ಸಿ. ಟಿ. ರವಿ
ಚಿಕ್ಕಮಗಳೂರು, ಮೇ 05; "ಮಮತಾ ದೀದಿ ರಕ್ತಸಿಕ್ತ ಕೈಗಳನ್ನು ಯಾವ ಪುಣ್ಯ ಕಾರ್ಯದಿಂದಲೂ ತೊಳೆದುಕೊಳ್ಳಲು ಆಗುವುದಿಲ್ಲ. ಇಂಥ ಕೈಗಳಿಂದ ಅಧಿಕಾರ ನಡೆಸಿದರೆ ಪಾಪ ಹೆಚ್ಚಾಗುತ್ತೆ ವಿನಃ ಪುಣ್ಯ ಬರುವುದಿಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಟೀಕಿಸಿದ್ದಾರೆ.
ಬುಧವಾರ ಮಮತಾ ಬ್ಯಾನರ್ಜಿ 3ನೇ ಬಾರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿಕ್ಕಮಗಳೂರಿನಲ್ಲಿ ಸಿ. ಟಿ. ರವಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದರು.
"ಚುನಾವಣೆ ಪೂರ್ವದಲ್ಲೂ ದೌರ್ಜನ್ಯದ ಮೂಲಕ ಚುನಾವಣೆ ನಡೆಸಲು ಮುಂದಾದರು ಅದಕ್ಕೆ ಅವಕಾಶ ಸಿಗಲಿಲ್ಲ. ಈಗ ದೌರ್ಜನ್ಯದ ಮೂಲಕ ಬಿಜೆಪಿ ಬೆಳವಣಿಗೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದೀರಾ?, ಇದನ್ನು ನಾವು ಖಂಡಿಸುತ್ತೇವೆ" ಎಂದರು.

"ಪಶ್ಚಿಮ ಬಂಗಾಳದಲ್ಲಿ ಕಳೆದ 72 ಗಂಟೆಗಳಲ್ಲಿ ಬಿಜೆಪಿ ಕಚೇರಿಯನ್ನು ಸುಟ್ಟು, ಮನೆಗಳಿಗೆ ಬೆಂಕಿ ಹಾಕಿ, ಕಾರ್ಯಕರ್ತರ ಅಂಗಡಿ ಲೂಟಿ ಮಾಡಿ 12ಕ್ಕೂ ಹೆಚ್ಚು ಕಾರ್ಯಕರ್ತರನ್ನು ಹತ್ಯೆ ಮಾಡಿದ್ದಾರೆ. 281ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ" ಎಂದು ಸಿ. ಟಿ. ರವಿ ಹೇಳಿದರು.
"ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದಂತಹಾ ಪಶ್ಚಿಮ ಬಂಗಾಳ ಸರಕಾರವೇ ಗೂಂಡಾಗಳಿಗೆ ಬೆಂಬಲವಾಗಿ ನಿಂತಿದೆ. ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನ ಖಂಡಿಸಿ ಬಿಜೆಪಿ ದೇಶಾದ್ಯಂತ ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದೆ" ಎಂದು ತಿಳಿಸಿದರು.
"ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ ನೈತಿಕ ಧೈರ್ಯ ತುಂಬುವ ಕೆಲಸ ಮಾಡುತ್ತಾರೆ. ನಾವು ಪ್ರಜಾಪ್ರಭುತ್ವದ ತೀರ್ಪನ್ನು ಗೌರವಿಸಿ, ಅಭಿವೃದ್ಧಿಗೆ ಸಹಕಾರ ಕೊಡುತ್ತೇವೆ ಎಂದಿದ್ದೇವೆ. ಬಿಜೆಪಿ ಯಾವತ್ತೂ ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧವಾಗಿ ವರ್ತಿಸಿಲ್ಲ" ಎಂದು ಸ್ಪಷ್ಟಪಡಿಸಿದರು.
"ಹತ್ಯೆಯ ಮೂಲಕ ಒಂದು ರಾಜಕೀಯ ಪಕ್ಷದ ಧ್ವನಿಯನ್ನು ಹತ್ತಿಕ್ಕಬಹುದು ಎಂಬ ದುಷ್ಟ ಆಲೋಚನೆ ಸರಿಯಲ್ಲ. ಶ್ಯಾಂಪ್ರಸಾದ್ ಮುಖರ್ಜಿ, ದೀನದಯಾಳ್ ಅವರನ್ನು ಹತ್ಯೆ ಮಾಡಿದರು. ಬಿಜೆಪಿ ಬೆಳವಣಿಗೆ ತಡೆಯಲು ಆಗಲಿಲ್ಲ, ಹತ್ಯೆ ಮೂಲಕ ಪಕ್ಷದ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ. ಪಕ್ಷ ಮತ್ತೆ ಹತ್ತು ಪಟ್ಟು ಸಾಮರ್ಥ್ಯದಿಂದ ಮೇಲೆದ್ದು ನಿಲ್ಲುತ್ತದೆ. ಹತ್ಯಾ ರಾಜಕಾರಣ ಕೊನೆಯಾಗಬೇಕು" ಎಂದು ಸಿ. ಟಿ. ರವಿ ಹೇಳಿದರು.












Click it and Unblock the Notifications