ರಾಮ ಮಂದಿರ ಉದ್ಘಾಟನೆ ವೇಳೆ ಮನೆಯ ಮುಂದೆ ದೀಪ ಬೆಳಗಲಿ
ಚಿಕ್ಕಮಗಳೂರು, ಜನವರಿ 07: "ಎಲ್ಲಾ ರಾಮಭಕ್ತರನ್ನು ಜನವರಿ 22ರಂದು ಅಯೋಧ್ಯೆಗೆ ಕರೆಯಲು ಸಾಧ್ಯವಿಲ್ಲ. ಅಲ್ಲಿಂದಲೇ ಮಂತ್ರಾಕ್ಷತೆ ಬಂದಿದೆ, ಅದನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು. ರಾಮ ಮಂದಿರ ಉದ್ಘಾಟನೆ ವೇಳೆ ಎಲ್ಲರ ಮನೆಯ ಮುಂದೆ ದೀಪ ಬೆಳಗಬೇಕು" ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಬಿಜೆಪಿ, ಮನೆಮನೆಗೆ ಮಂತ್ರಾಕ್ಷತೆ ಅಭಿಯಾನವನ್ನು ನಡೆಸುತ್ತಿದೆ.

ಭಾನುವಾರ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಈ ಅಭಿಯಾನ ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ನಡೆಯಿತು. ಮನೆ ಮನೆಗೆ ತೆರಳಿ ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಮಂತ್ರಾಕ್ಷತೆ ವಿತರಣೆಯನ್ನು ಶೋಭಾ ಕರಂದ್ಲಾಜೆ ಮಾಡಿದರು, ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಜೊತೆಗಿದ್ದರು.
ಜನರು ಶಾಂತಿ ಬಯಸುತ್ತಾರೆ: ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ನೀಡಿದರು. "ಕಾಂಗ್ರೆಸ್ ಮನಸ್ಥಿತಿಯೇ ಕೋಮ ಗಲಭೆ ಎಬ್ಬಿಸೋದು. ಈಗ ದೇಶ ಶಾಂತವಾಗಿದೆ, ಮೋದಿ ಆಡಳಿತದಲ್ಲಿ ವಿಘಟನೆ, ಕೋಮು ದಳ್ಳೂರಿ ನಡೆದಿಲ್ಲ" ಎಂದರು.
"ಕಾಂಗ್ರೆಸ್ ಆಡಳಿತದಲ್ಲಿ ದೇಶದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ. ದಾಳಿಯಾದಾಗ ಕಾಂಗ್ರೆಸ್ಸಿಗರಿಗೆ ಇದು ನಮ್ಮ ಸರ್ಕಾರ ಅನ್ನಿಸುತ್ತಿತ್ತು. ಮೋದಿ ಬಂದ ಮೇಲೆ ಎಲ್ಲಾ ಭಯೋತ್ಪಾದಕ ಮನಸ್ಥಿತಿಯ ಜನರಿಗೆ ಭಯ ಬಂದಿದೆ. ರಾಮ ಮಂದಿರ ಉದ್ಘಾಟನೆ ವೇಳೆ ಮತ್ತೆ ಕೋಮು ದಳ್ಳೂರಿಗೆ ಕಾಂಗ್ರೆಸ್ ಯೋಜನೆ ರೂಪಿಸಿರಬೇಕು. ಅದರ ಚಿಕ್ಕ ಝಲಕ್ ಅನ್ನು ಹರಿಪ್ರಸಾದ್ ಅವರು ಹೇಳಿರಬಹುದು" ಎಂದು ದೂರಿದರು.
"ದೇಶದ ಜನರಿಗೆ ಹಿಂಸೆ ಬೇಡ, ಜನ ಶಾಂತಿ ಬಯಸುತ್ತಿದ್ದಾರೆ. ದೇಗುಲ ನಿರ್ಮಾಣದ ಬಳಿಕ ರಾಮನಿಗೊಂದು ಅಸ್ಮಿತೆ ಬಂದಿದೆ. ನಮ್ಮ ದೇಶದಲ್ಲಿ ನಮ್ಮ ರಾಮನಿಗೆ ಮಂದಿರ ಆಗಿದೆ ಅನ್ನಿಸಿದೆ. ಈ ಮಾತಿಗೆ ಯಾರೂ ಕಿವಿಗೊಡಬೇಡಿ, ಎಲ್ಲರೂ ಶಾಂತಿ ಕಾಪಾಡಿ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದರು.
"ಶತಮಾನದ ಕನಸು ಈಗ ನನಸಾಗುತ್ತಿದೆ. ರಾಮ ಮಂದಿರಕ್ಕಾಗಿ ಲಕ್ಷಾಂತರ ಜನ ಪ್ರಾಣ ತ್ಯಾಗ ಮಾಡಿದ್ದರು. ಕಳೆದ 500 ವರ್ಷಗಳಿಂದ ರಾಮ ಮಂದಿರಕ್ಕಾಗಿ ಹೋರಾಟ ನಡೆಯುತ್ತಿದೆ. ಕಳಂಕಿತ ಹಾಗೂ ಅಪಮಾನದ ಸಂಕೇತದ ಬಾಬ್ರಿ ಮಸೀದಿಯನ್ನು ಜನರೇ ಉರುಳಿಸಿದ್ದರು. ಕೋರ್ಟ್ನಲ್ಲಿ ವಿಪಕ್ಷಗಳು ರಾಮನ ವಿರುದ್ಧ ವಾದ ಮಾಡಿದ್ದರು, ಸೂಕ್ತ ದಾಖಲೆಗಳ ಮೂಲಕ ರಾಮ ಮಂದಿರ ಹಿಂದೂಗಳಿಗೆ ಸಿಗುವಂತಾಯಿತು" ಎಂದರು.
"ಜನವರಿ 22ರಂದು ನಮ್ಮ ರಾಮ ಅಯೋಧ್ಯೆಯಲ್ಲಿ ವಿಜೃಂಭಿಸಲಿದ್ದಾನೆ. ಅಂದು ಎಲ್ಲಾ ರಾಮ ಭಕ್ತರನ್ನು ಅಯೋಧ್ಯೆಗೆ ಕರೆಯಲು ಸಾಧ್ಯವಿಲ್ಲ. ಅಲ್ಲಿಂದಲೇ ಮಂತ್ರಾಕ್ಷತೆ ಬಂದಿದೆ, ಅದನ್ನು ಮನೆಯಲ್ಲಿ ಇಟ್ಟು ಪೂಜಿಸಬೇಕು. ಅವರವರ ಊರುಗಳಲ್ಲಿ ರಾಮನ ಪೂಜೆ ನಡೆಯಬೇಕು" ಎಂದು ಸಚಿವರು ಹೇಳಿದರು.
"ರಾಮ ಮಂದಿರ ಉದ್ಘಾಟನೆ ವೇಳೆ ಎಲ್ಲರ ಮನೆಯ ಮುಂದೆ ದೀಪ ಬೆಳಗಬೇಕು. ರಾಮ ಮಂದಿರದಿಂದ ಬಂದಿರುವ ಮಂತ್ರಾಕ್ಷತೆಯನ್ನು ಪೂಜಿಸಿ, ಸಿಹಿ ಮಾಡಿ ಊಟ ಮಾಡಬೇಕು. ರಾಮ ಮಂದಿರಕ್ಕಾಗಿ ಇಟ್ಟಿಗೆ ಹೊತ್ತವರು, ಒದೆ ತಿಂದವರಿಗೆ ಇಂದು ತುಂಬಾ ಖುಷಿಯಾಗಿದೆ" ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.












Click it and Unblock the Notifications