ಯಡಿಯೂರಪ್ಪ, ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ-ಡಿ.ಕೆ.ಶಿವಕುಮಾರ್
ಚಿಕ್ಕಮಗಳೂರು, ನವೆಂಬರ್ 29: ನನ್ನ ಮೇಲೆ ಯಾವುದೇ ರೌಡಿಶೀಟರ್ ಕೇಸ್ ಇಲ್ಲ. ಬಿ.ಎಸ್.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಹಾಗೇ ಅನೇಕ ಬಿಜೆಪಿ ಮುಖಂಡರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯ ಪ್ರೇರಿತ ದ್ವೇಷದಿಂದಾಗಿ ಜೈಲಿಗೆ ಹೋಗಿದ್ದೇನೆ, ವಿನಃ ಯಾವುದೇ ಭ್ರಷ್ಟಾಚಾರ ಮಾಡಿ ಹೋಗಿಲ್ಲ. ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಮೊದಲು ಅದನ್ನು ಸರಿಮಾಡಿಕೊಳ್ಳಲಿ ಎಂದರು.
ಸೋನಿಯಾ ಗಾಂಧಿ ಗನ್ ಮ್ಯಾನ್ ಭೇಟಿ ಮಾಡಿ, ಹೈಕಮಾಂಡ್ ಭೇಟಿ ಎನ್ನುತ್ತಿದ್ದರು: ಬಿಜೆಪಿ ವ್ಯಂಗ್ಯ
ತಿಹಾರ್ ಜೈಲಿ ಹೋಗಿ ಬಂದವರು ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಬಡ್ತಿ ಪಡೆದಿದ್ದಾರೆ ಎನ್ನುವ ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ರಾಜಕೀಯ ದ್ವೇಷದಿಂದ ಜೈಲಿಗೆ ಹೋಗಿ ಬಂದಿದ್ದೇನೆ. ಭ್ರಷ್ಟಾಚಾರ ಮಾಡಿ ಅಲ್ಲ ಎಂದು ಕಿಡಿಕಾರಿದರು.
ಸರ್ಕಾರದ ಹಣವನ್ನು ಲೂಟಿ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ
ಮಾತು ಮುಂದುವರಿಸಿದ ಅವರು, ಮತದಾರರ ಹಕ್ಕನ್ನು ಮಾರಾಟ ಮಾಡಲು ಮುಂದಾಗಿರುವ ಬಿಜೆಪಿಯವರು ನನ್ನ ವಿರುದ್ಧ ಮಾಡಿರುವ ಆರೋಪ ಆಧಾರ ರಹಿತವಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಜೆಪಿ ಶಾಸಕರು ಮಂತ್ರಿಗಳು ಮಾಡದಿರುವ ಭ್ರಷ್ಟಾಚಾರ ಇಲ್ಲ. ಸರ್ಕಾರದ ಹಣವನ್ನು ಲೂಟಿ ಹೊಡೆದು ಖಜಾನೆ ಖಾಲಿ ಮಾಡಿದ್ದಾರೆ. ರಾಜ್ಯದಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ. ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕೆಲವು ಸಮುದಾಯಗಳ ಹೆಸರು ಡಿಲೀಟ್ ಮಾಡಿಸಲು ಮುಂದಾಗಿದೆ
ಉದ್ಯಮಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರಿ ಹುದ್ದೆಗಳ ನೇಮಕಾತಿ ವರ್ಗಾವಣೆಯಲ್ಲಿ ಹಗರಣಗಳು ನಡೆಯುತ್ತಿದ್ದು, ಸರ್ಕಾರ ಮಾಡುತ್ತಿರುವ ತಪ್ಪಿಗೆ ಐಎಎಸ್, ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ಮುಂದಿನ ಚುನಾವಣೆಯಲ್ಲಿ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದು, ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಯಲ್ಲಿ ಕೆಲವು ಸಮುದಾಯಗಳ ಹೆಸರು ಡಿಲೀಟ್ ಮಾಡಿಸಲು ಮುಂದಾಗಿದೆ. ಇದರಿಂದ ಇಬ್ಬರು ಅಧಿಕಾರಿಗಳು ಅಮಾನತುಗೊಂಡಿದ್ದಾರೆ ಎಂದು ಹೇಳಿದರು.
ಸರ್ಕಾರದ ಅನುದಾನದಲ್ಲಿ ಕಮಿಷನ್ ದಂಧೆ ನಡೆಸಿಲ್ಲ
ಇನ್ನು ಟಿ.ಡಿ.ರಾಜೇಗೌಡ ಮತ್ತು ಸಿದ್ಧಾರ್ಥ್ ನಡುವೆ ನಡೆದಿರುವ ಜಮೀನು ಖರೀದಿ ಖಾಸಗಿ ವಿಚಾರ. ಅದರಲ್ಲಿ ಅವ್ಯವಹಾರವಾಗಿದ್ದರೆ ಐಟಿ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ರಾಜೇಗೌಡ ಶಾಸಕರಾಗಿ ಕೆಲಸ ಮಾಡಿದ್ದಾರೆ. ಸರ್ಕಾರದ ಅನುದಾನದಲ್ಲಿ ಕಮಿಷನ್ ದಂಧೆ ನಡೆಸಿಲ್ಲ. ಸಿ.ಎಂ.ರಾಜಕೀಯ ಕಾರ್ಯದರ್ಶಿ ಸಂಬಂಧಿಸಿದವರಿಗೆ ದೂರು ನೀಡಲಿ. ಅದನ್ನು ಬಿಟ್ಟು ರಾಜಕೀಯ ದ್ವೇಷಕ್ಕಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ಬಿಜೆಪಿ ಭ್ರಷ್ಟಚಾರದ ಗಂಗೋತ್ರಿಯಾಗಿದೆ. ಆ ಹಣದಲ್ಲಿ ಬದುಕುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಕೆಲಸ ಸಾಧ್ಯವೇ..?
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೂಡ ಬಿಜೆಪಿ ವಿರುದ್ಧ ಕಿಡಿಕಾರಿದ್ದ ಡಿ.ಕೆ ಶಿವಕುಮಾರ್, ಬಿಜೆಪಿ ಸರಕಾರ 3 ಬಾರಿ ನಡೆಸಿದ ಆಡಳಿತದಲ್ಲಿ ಜನರ ಬದುಕು ಬದಲಾವಣೆ ಮಾಡಲು ಸಾಧ್ಯವಾಗಿಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್, ಗೊಬ್ಬರ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈಗ ಅಧಿಕಾರ ಮುಗಿಯುತ್ತಾ ಬಂದಿದೆ. ಇಲ್ಲಿಯವರೆಗೆ ಅಧಿಕಾರವಿದ್ದಾಗಲೇ ಜನರ
ಬದುಕು ಹಸನು ಮಾಡಲು ಸಾಧ್ಯವಾಗಿಲ್ಲ. ಇನ್ನು ಅಧಿಕಾರ ಕಳೆದುಕೊಳ್ಳುವ ಸಮಯದಲ್ಲಿ ಸಾಧ್ಯವೇ ಎಂದು ಪ್ರಶ್ನಿಸಿದ್ದರು.