ಝೀರೊ ಟ್ರಾಫಿಕ್ ಮೂಲಕ ಬೆಂಗಳೂರಿಗೆ ಯುವತಿ; ಹಾರೈಸಿದ ಕೊಟ್ಟಿಗೆಹಾರದ ಜನ
ಚಿಕ್ಕಮಗಳೂರು, ಡಿಸೆಂಬರ್ 02: ಶ್ವಾಸಕೋಶದ ತುರ್ತು ಚಿಕಿತ್ಸೆಗೆಂದು ಯುವತಿಯನ್ನು ಪುತ್ತೂರಿನಿಂದ ಬೆಂಗಳೂರಿಗೆ ಝೀರೊ ಟ್ರಾಫಿಕ್ ನಲ್ಲಿ ಕರೆದೊಯ್ಯುವಾಗ ಮೂಡಿಗೆರೆಯ ಕೊಟ್ಟಿಗೆಹಾರದ ಸ್ಥಳೀಯರು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಚಾಲಕ ಹಾಗೂ ಯುವತಿಗೆ ಹಾರೈಸಿದ್ದಾರೆ.
ಹಾಸನದ ಬೇಲೂರಿನ ಅರೇಹಳ್ಳಿ ಮೂಲದ 22 ವರ್ಷದ ಸುಹಾನಾ ಎಂಬ ಯುವತಿ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಪುತ್ತೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬುಧವಾರ ಬೆಳಿಗ್ಗೆ ಅವರಿಗೆ ತುರ್ತು ಚಿಕಿತ್ಸೆ ನಡೆಸಬೇಕಿತ್ತು. ಹೀಗಾಗಿ ಝೀರೊ ಟ್ರಾಫಿಕ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು.
ಎಮರ್ಜೆನ್ಸಿ ಅಲರ್ಟ್ ನಲ್ಲಿ ಕರೆತರಲು ನಿರ್ಧರಿಸಿ, ಈ ರಸ್ತೆಯ ಮೂಲಕ ಹಾದು ಹೋಗುವ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರ ಸಹಕಾರವನ್ನು ಕೋರಲಾಗಿತ್ತು. ಪುತ್ತೂರು ಆಸ್ಪತ್ರೆಯಿಂದ ಗುರುವನಕೆರೆ, ಉಜಿರೆ, ಹ್ಯಾನ್ ಪೋಸ್ಟ್, ಗೋಣಿಬೀಡು, ಬೇಲೂರು, ಹಾಸನ, ಯಶವಂತಪುರ- ವೈದೇಹಿ ಆಸ್ಪತ್ರೆ ಈ ಮಾರ್ಗದಲ್ಲಿ ಝೀರೊ ಟ್ರಾಫಿಕ್ ಗೆ ಸಹಕರಿಸಬೇಕೆಂದು ಕೋರಲಾಗಿತ್ತು.

ಹೀಗಾಗಿ ಚಿಕ್ಕಮಗಳೂರು ಪೊಲೀಸರು ಚಿಕ್ಕಮಗಳೂರು ಗಡಿ ಭಾಗದಿಂದ ಝೀರೊ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಿದ್ದರು. ಆಂಬುಲೆನ್ಸ್ ಪುತ್ತೂರಿನಿಂದ ಕೊಟ್ಟಿಗೆ ಹಾರಕ್ಕೆ ಬರುತ್ತಿದ್ದಂತೆ ಸ್ಥಳೀಯರು ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಡ್ರೈವರ್ ಹಾಗೂ ಯುವತಿಗೆ ಚಪ್ಪಾಳೆ ತಟ್ಟುವ ಮೂಲಕ ಹಾರೈಸಿದರು.












Click it and Unblock the Notifications