ಗುತ್ತಿಗೆದಾರನ ಬಳಿ ಕಮಿಷನ್ ಕೇಳಿದ ಆರೋಪ: ಕಡೂರು ತಾ.ಪಂ ಇಒ ಅಮಾನತು
ಚಿಕ್ಕಮಗಳೂರು, ನವೆಂಬರ್ 19 : ಗುತ್ತಿಗೆದಾರನ ಬಳಿಕ ಕಮಿಷನ್ ಕೇಳಿದ ಆರೋಪದ ಮೇಲೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಪಂಚಾಯತಿ ಇಓನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಕಡೂರು ತಾಲೂಕಿನ ತಾಲೂಕು ಪಂಚಾಯಿತಿ ಇಓ ವಿರುದ್ಧ ಕಮಿಷನ್ ಕೇಳಿ ಆರೋಪ ಹೊರಿಸಿ ರಾಷ್ಟ್ರಪತಿಗೆ ದಯಾಮರಣ ಕೇಳಿ ಪತ್ರ ಬರೆದಿದ್ದ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ್ ಅವರ ಪ್ರಕರಣ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ನೀಡಿದ ವರದಿ ಮೇರೆಗೆ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕಡೂರು ಹಿರಿಯ ಪಶುವೈದ್ಯಾಧಿಕಾರಿ ಹಾಗೂ ತಾಲೂಕು ಪಂಚಾಯಿತಿಯ ಪ್ರಭಾರ ಇಓ ದೇವರಾಜ್ ನಾಯಕ್ ಇಬ್ಬರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಬಸವರಾಜ ಅಮರಗೋಳ ಎನ್ನುವವರು ಕೋವಿಡ್ ವೇಳೆ ಕಡೂರು ಹಾಗೂ ಮೂಡಿಗೆರೆ ತಾಲೂಕಿಗೆ ಕೋವಿಡ್ ಪರಿಕರಗಳನ್ನು ಪೂರೈಸಿದ್ದರು. ಅದರ ಬಿಲ್ಗಳನ್ನು 2 ವರ್ಷವಾದರೂ ಪಾವತಿ ಮಾಡಿರಲಿಲ್ಲ. ಈ ಸಂಬಂಧ ಕಡೂರು ತಾ.ಪಂ ಪ್ರಭಾರ ಇಈ ದೇವರಾಜ್ ನಾಯಕ್ ಅವರನ್ನು ವಿಚಾರಿಸಿದಾಗ ಕಮಿಷನ್ ನೀಡಬೇಕೆಂದು ಹೇಳಿ ಎರಡು ವರ್ಷಗಳಿಂದ ಬಿಲ್ ಪಾವತಿಸದೆ ಹಾಗೇ ಉಳಿಸಿಕೊಂಡಿದ್ದರು ಎಂದು ಗುತ್ತಿಗೆದಾರ ಆರೋಪಿಸಿದ್ದರು.

ತಮಗೆ ಸೇರಬೇಕಾದ ಹಣ ನೀಡದೆ, ಕಮಿಷನ್ ಕೇಳಿದ ಹಿನ್ನೆಲೆಯಲ್ಲಿ ಗುತ್ತಿಗೆದಾರ ಬಸವರಾಜ್ ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆದು ದಯಾಮರಣಕ್ಕೆ ಅನುಮತಿ ನೀಡಬೇಕು. ಇಲ್ಲವೇ ನನಗೆ ಸಂಬಂಧಿಸಿದ ಬಿಲ್ ಪಾವತಿಸಬೇಕೆಂದು ಕೋರಿದ್ದರು.
ಪ್ರಕರಣ ಸಂಬಂಧ ಕಡೂರು ತಾಲೂಕು ಪಂಚಾಯತಿ ಇಓ ದೇವರಾಜ್ ನಾಯಕ್, ಗುತ್ತಿಗೆದಾರನ ಬಳಿ ಕಮಿಷನ್ ಕೇಳುತ್ತಿರುವ ಮೊಬೈಲ್ ಆಡಿಯೋಗಳು ಕೂಡ ವೈರಲ್ ಆಗಿದ್ದವು. ಆಡಿಯೋ ಸಂಬಂಧ ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಸಿಇಒ ಅವರು ಪರಿಶೀಲನೆ ನಡೆಸಿದಾಗ, ಕಮಿಷನ್ ಕೇಳಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಓ ವರದಿ ಅನ್ವಯ ರಾಜ್ಯ ಸರ್ಕಾರ ಕಡೂರು ತಾಲೂಕು ಪಂಚಾಯಿತಿ ಇಓ ದೇವರಾಜ ನಾಯಕ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ.
ಇನ್ನು ಕಡೂರು ತಾಲೂಕಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನ ಖಂಡಿಸಿ ನವೆಂಬರ್ 14ರಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ತಾಲೂಕಿನ ಭ್ರಷ್ಟ ಅಧಿಕಾರಿಗಳ ಮತ್ತು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಡೂರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಾಲೂಕು ಕಚೇರಿಗೆ ಬೀಗ ಜಡಿದಿದ್ದರು.












Click it and Unblock the Notifications