ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದಲ್ಲಿ ಕಡೂರು-ತರೀಕೆರೆಯಲ್ಲಿ ಜನಸಂಕಲ್ಪ ಯಾತ್ರೆ
ಚಿಕ್ಕಮಗಳೂರು, ನವೆಂಬರ್ 14 : ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು-ತರೀಕೆರೆ ತಾಲೂಕುಗಳಲ್ಲಿ ಮಂಗಳವಾರ ಮುಖ್ಯಮಂತಿ ಬಸವರಾಜ ಬೊಮ್ಮಾಯಿ ಸಭೆ ಸಮಾರಂಭ ನಡೆಸಲಿದ್ದು, ಮೊದಲು ಕಡೂರು ಪಟ್ಟಣಕ್ಕೆ ಆಗಮಿಸಲಿದ್ದಾರೆ.
ಜನಸಂಕಲ್ಪ ಯಾತ್ರೆಯ ಮೂಲಕ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ತಂಡವಾಗಿ ಆಡಳಿತ ಪಕ್ಷವಾದ ಬಿಜೆಪಿ ಪ್ರವಾಸ ಮಾಡುತ್ತಿದೆ. ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಗೆ ಪ್ರತಿಯಾಗಿ ಈ ಜನಸಂಕಲ್ಪ ಯಾತ್ರೆ ನಡೆಯುತ್ತಿದೆ.
ನಂದಿನಿ ಹಾಲಿನ ದರ ಏರಿಕೆಗೆ ತಡೆ: ಸಿಎಂ ಸಭೆ ಬಳಿಕ ಮುಂದಿನ ನಿರ್ಧಾರ
ಇನ್ನು ಭದ್ರಾಮೇಲ್ದಂಡೆ ಯೋಜನೆಯಡಿ 32 ಕೆರೆಗಳನ್ನು ಒಳಗೊಂಡು 108 ಕೆರೆಗಳಿಗೆ ನೀರು ತುಂಬಿಸಲು 1289 ಕೋಟಿ ಅನುದಾನವನ್ನ ಕಡೂರು ಹಾಗೂ ತರೀಕೆರೆ ಕ್ಷೇತ್ರಗಳಿಗೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನೀಡಲಾಗಿತ್ತು. ಆ ವೇಳೆ ಬಸವರಾಜ ಮೊಮ್ಮಾಯಿ ನೀರಾವರಿ ಸಚಿವರಾಗಿದ್ದರು. ಹಾಗಾಗೀ ಇಬ್ಬರು ನಾಯಕರು ಒಟ್ಟಾಗಿ ಆಗಮಿಸುತ್ತಿರುವುದರಿಂದ ಕಡೂರಿನಲ್ಲಿ ನಡೆಯುವ ಜನಸಂಕಲ್ಪ ಯಾತ್ರೆಯಲ್ಲಿ ವಿಶೇಷವಾಗಿ ಅಭಿನಂದಿಸಲು ನಿರ್ಧರಿಸಲಾಗಿದೆ.
ಮಂಗಳವಾರ ಕಾರ್ಯಕ್ರಮಕ್ಕೆ ವಿಶೇಷವಾದ ವೇದಿಕೆಯನ್ನ ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಜನಸಂಕಲ್ಪ ಯಾತ್ರೆಗೆ ರೆಡಿ ಮಾಡಲಾಗಿದ್ದು, 25 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಗಿದೆ. ಕಡೂರಿಗೆ ಹೆಲಿಕಾಪ್ಟರ್ ಮೂಲಕ ಸಿಎಂ, ಮಾಜಿ ಸಿಎಂ ಬೆಳಗ್ಗೆ 10.30ಕ್ಕೆ ಆಗಮಿಸಲಿದ್ದು, ಸುಮಾರು ಎರಡು ಗಂಟೆಗಳ ಕಾಲ ಜನಸಂಕಲ್ಪಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.
ಒಂದೆಡೆ ಕಡೂರಿನಲ್ಲಿ ಬಿಜೆಪಿ ಪಕ್ಷದ ಜನಸಂಕಲ್ಪಯಾತ್ರೆ ನಡೆದರೆ ಆ ಬಳಿಕ ತರೀಕೆರೆ ಪಟ್ಟಣದಲ್ಲಿ ಸರ್ಕಾರಿ ಕಾರ್ಯಕ್ರಮ ನಡೆಯಲಿದೆ. ಕಡೂರಿನಲ್ಲಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1.30ಕ್ಕೆ ಬಿಜೆಪಿ ಪಾಳೆಯ ಪಕ್ಕದ ತರೀಕೆರೆಗೆ ಶಿಫ್ಟ್ ಆಗಲಿದೆ. ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಶುದ್ದ ಕುಡಿಯುವ ನೀರಿನ ಯೋಜನೆಗೆ ಸರ್ಕಾರ, ಈಗಾಗಲೇ 600 ಕೋಟಿ ಹಣ ನೀಡಿದೆ. ಜಲಜೀವನ್ ಮಿಷನ್ ಯೋಜನೆಗೆ ತರೀಕೆರೆ ಪಟ್ಟಣದ ಎಸ್ಜೆಎಂ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಿಎಂ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಲ್ಲದೇ ತಾಲೂಕು ಕಚೇರಿ ಆವರಣದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನ ಅನಾವರಣಗೊಳಿಸಲಿದ್ದಾರೆ.
ಹೀಗೆ ಮಂಗಳವಾರ ಇಡೀ ದಿನ ಬಿಜೆಪಿ ಪಾಳೆಯ ಕಾಫಿನಾಡಿನ ಎರಡು ಕಡೆ ಸಭೆ ಸಮಾರಂಭ ಮಾಡಲಿದ್ದು, ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸಲು ಸಿಎಂ, ಮಾಜಿ ಸಿಎಂ ಜೊತೆಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ನಾರಾಯಣ ಸ್ವಾಮಿ, ಗೋವಿಂದ ಕಾರಜೋಳ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.