ಸಾಮಾಜಿಕ ಜಾಲಾತಾಣದಲ್ಲಿ ಅಪಪ್ರಚಾರ ಆರೋಪ: ವಿನಯ್ ಗುರೂಜಿ ಭಕ್ತರಿಂದ ಪ್ರತಿಭಟನೆ
ಚಿಕ್ಕಮಗಳೂರು, ನವೆಂಬರ್ 17 : ಹರಿಹರಪುರ ಸಮೀಪದ ಗೌರಿಗದ್ದೆ ಅವಧೂತ ವಿನಯ್ ಗುರೂಜಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಕ್ತರು ಗುರುವಾರ ಕೊಪ್ಪ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಅವಧೂತ ಗೌರಿಗದ್ದೆ ವಿನಯ್ ಗುರೂಜಿ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ, ಗೊಂದಲ ಸೃಷ್ಟಿಸುತ್ತಿರುವ ಹಿನ್ನೆಲೆ 500ಕ್ಕೂ ಅಧಿಕ ಭಕ್ತರು ಕೊಪ್ಪ ಪಟ್ಟಣದ ಪುರಭವನದಿಂದ ಬಸ್ ನಿಲ್ದಾಣದ ವರೆಗೆ ಮೆರೆವಣಿಗೆ ನಡೆಸಿದರು.
ಕೊಪ್ಪ ಪೊಲೀಸ್ ಇಲಾಖೆಯ ಮೂಲಕ ಎಸ್.ಪಿ ಮತ್ತು ಗೃಹ ಮಂತ್ರಿಗಳಿಗೆ ಹಾಗೂ ತಹಶೀಲ್ದಾರ್ ಮೂಲಕ ವಿನಯ್ ಗುರೂಜಿ ಬಗ್ಗೆ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವಿನಯ್ ಗುರೂಜಿ ಭಕ್ತರು ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರೂಜಿಯ ಸಾಮಾಜಿಕ ಕಳಕಳಿಯನ್ನು ನೆನೆದರು.

ಗುರೂಜಿಯವರು ಸಜ್ಜನ ವ್ಯಕ್ತಿಯಾಗಿದ್ದು ಸಮಾಜಕ್ಕೆ ಕೆಡಕನ್ನುಂಟು ಮಾಡುವಂತಹ ಕಾರ್ಯದಲ್ಲಿ ಬಾಗಿಯಾಗುವುದಿಲ್ಲ. ಅವರ ಜನಪ್ರಿಯತೆಯನ್ನು ಸಹಿಸದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕಿ ಅವರ ಘನತೆಗೆ ಕುತ್ತು ಬರುವ ರೀತಿಯಲ್ಲಿ ಪ್ರಸಾರ ಮಾಡುತಿದ್ದಾರೆ. ಅಂತಹವರ ವಿರುದ್ಧ ಅಪಪ್ರಚಾರ ನಡೆಸುವವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ತಹಸೀಲ್ದಾರ್ ವಿಮಲಾ ಸುಪ್ರೀಯಾ ರವರಿಗೆ ಮನವಿ ಸಲ್ಲಿಸಿದರು.
ಎರಡು ದಿನಗಳ ಹಿಂದೆಯೂ ಶಿವಮೊಗ್ಗದಲ್ಲೂ ವಿನಯ್ ಗುರೂಜಿ ಭಕ್ತರು ಪ್ರತಿಭಟನೆ ನಡೆಸಿ ಸಾಮಾಜಿಕ ಜಾಲಾತಾಣದಲ್ಲಿ ಗುರೂಜಿಯನ್ನು ಅವಹೇಳನ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾದಿಕಾರಿಗೆ ಮನವಿ ಸಲ್ಲಿಸಿದ್ದರು.
ವಿನಯ್ ಗುರೂಜಿಯವರು ನಾಡಿನ ಧಾರ್ಮಿಕ ನಾಯಕರಾಗಿದ್ದಾರೆ. ಈ ದೇಶದ ಸಂಸ್ಕೃತಿ ಎತ್ತಿ ಹಿಡಿಯುತ್ತಿದ್ದಾರೆ. ನಾಡಿನಾಧ್ಯಂತ ಅಲ್ಲದೆ ದೇಶ ವಿದೇಶಗಳಲ್ಲೂ ಭಕ್ತರಿದ್ದಾರೆ. ಇಂತಹ ವ್ಯಕ್ತಿಯ ಅಪಪ್ರಚಾರ ಮಾಡಿ ಅವರ ಘನತೆಗೆ ಧಕ್ಕೆ ಉಂಟುಮಾಡಲಾಗುತ್ತಿದೆ. ಇಂತಹ ಗುರು ನಿಂದನೆ ಕೊನೆಯಾಗಬೇಕು, ಅವಹೇಳನ ಮಾಡುವವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ದೂರಿದರು.

ಚಂದ್ರಶೇಖರ್ ಸಾವಿನ ಪ್ರಕರಣದಲ್ಲೂ ಗುರೂಜಿ ಹೆಸರು
ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿಗೆ ವಿನಯ್ ಗುರೂಜಿ ಹೆಸರನ್ನು ಬಳಸಿ ಕಳಂಕ ತರಲಾಗುತ್ತಿದೆ. ಇದರಿಂದ ಭಕ್ತರಿಗೆ ನೋವಾಗಿದೆ, ಇಂತಹ ಸುಳ್ಳು ಆರೋಪ ಮಾಡಿ ಗುರೂಜಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಭಕ್ತರ ಆಗ್ರಹಿಸಿದ್ದರು.












Click it and Unblock the Notifications