ಅಗಲಿದ ವೇಗದ ಸರದಾರ 'ಗಗನ್', ಗ್ರಾಮಸ್ಥರಿಂದ ಕಣ್ಣೀರ ವಿದಾಯ
ಚಿಕ್ಕಮಗಳೂರು, ನವೆಂಬರ್ 26: ಕಾಫಿನಾಡಿನ ಮೂಕಪ್ರಾಣಿಯೊಂದು ಇದ್ದಾಗ ಒಂಟಿ ಸಲಗದಂತೆ ಬದುಕಿ ಸತ್ತಾಗ ಸಾವಿರಾರು ಜನರನ್ನು ಕಣ್ಣೀರಿಡುವಂತೆ ಮಾಡಿದೆ. ಪ್ರಾಣಿಗಳು ಸತ್ತಾಗ ಬೇಜಾರಾಗುತ್ತದೆ. ಆದರೆ ಸಾವಿರಾರು ಜನರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಈ ಪ್ರಾಣಿ ಜನರು ಪ್ರೀತಿ ಗಳಿಸಿತ್ತು.
ಈ ಎತ್ತಿನ ಹೆಸರು 'ಗಗನ್' ಎತ್ತಿನಗಾಡಿ ಸ್ಪರ್ಧೆಯ ಅಖಾಡದಲ್ಲಿ ಕೊರಳಿಗೆ ನೊಗ ಹಾಕಿಕೊಂಡು ನಿಂತತೆ ಸಿಂಹದಮರಿಯಂತೆ ಓಡುತ್ತಿತ್ತು. ಈಗ 'ಗಗನ್' ಸಾವನ್ನಪ್ಪಿದ್ದು, ಮನೆಯವರ ಜೊತೆ ಗ್ರಾಮಸ್ಥರು ಸಹ ಕಂಬನಿ ಮಿಡಿದಿದ್ದಾರೆ.

ಚಿಕ್ಕಮಗಳೂರು ನಗರದ ಕೆಂಪನಹಳ್ಳಿ ಬಡಾವಣೆ ಪುನೀತ್ ಗೌಡ ಎಂಬುವರು 'ಗಗನ್' ಮಾಲೀಕರು. ರಾಜ್ಯದಲ್ಲೇ ಎಲ್ಲೇ ಎತ್ತಿನಗಾಡಿ ಸ್ಪರ್ಧೆ ನಡೆದರೂ ಅಲ್ಲಿ 'ಗಗನ್' ಹಾಜರಿರುತ್ತಿತ್ತು. ಅಖಾಡದಲ್ಲಿ ಈತನ ವೇಗಕ್ಕೆ ಸರಿಸಾಟಿಯೇ ಇರಲಿಲ್ಲ. ಆದರೆ ಕಳೆದೊಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಎತ್ತು ಭಾನುವಾರ ಕೊನೆಯುಸಿರೆಳೆದಿದೆ.
ಕಣ್ಣೀರಿಟ್ಟ ಜನರು; ಕೆಂಪನಹಳ್ಳಿ ಬಡಾವಣೆ ಪುನೀತ್ ಗೌಡ ಎಂಬುವವರು 7 ಲಕ್ಷ ಕೊಟ್ಟು ಈ ಹಳ್ಳಿಕಾರ್ ತಳಿಯ ರಾಸುವನ್ನು ತಂದು ಸಾಕಿದ್ದರು. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆದರೂ ಸಹ ಅಲ್ಲಿ ಈ 'ಗಗನ್' ಹಾಜರು. 7 ಲಕ್ಷದ ಈ 'ಗಗನ್' 15 ಲಕ್ಷಕ್ಕೂ ಅಧಿಕ ಹಣವನ್ನು ಸ್ಪರ್ಧೆಯಲ್ಲಿ ಗೆದ್ದಿದೆ.
ಬರೀ ಹಣ ಮಾತ್ರವಲ್ಲ, ಒಂದು ಬೈಕ್ ಹಾಗೂ 50 ಗ್ರಾಂ ಚಿನ್ನವನ್ನೂ ಗೆದ್ದಿದೆ. ಇಂದು ಎತ್ತು ಸಾವನ್ನಪ್ಪಿದ್ದರಿಂದ ಊರಿನ ಜನ ಎತ್ತಿಗೆ ಊರಿನ ತುಂಬಾ ಮೆರವಣಿಗೆ ಮಾಡಿ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಕಳೆದೊಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎತ್ತು 'ಗಗನ್'ಗೆ ಮನೆಯವರು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಏನೂ ಆಗಿಲ್ಲ. ಚೆನ್ನಾಗಿದೆ. ಉಳಿಯುತ್ತದೆ ಎಂದು ಹೇಳಿದ್ದಾರೆ. ಆದರೆ, ಭಾನುವಾರ 'ಗಗನ್' ಸಾವನ್ನಪ್ಪಿದೆ.
ಅಖಾಡದಲ್ಲಿ ಚಿರತೆಯಂತೆ ಓಡುತ್ತಿದ್ದ 'ಗಗನ್' ನೂರಾರು ಬಹುಮಾನಗಳನ್ನು ಗೆದ್ದು ಇಡೀ ರಾಜ್ಯಕ್ಕೆ ಚಿರಪರಿಚಿತ. 'ಗಗನ್' ಸಾವನ್ನಪ್ಪಿದೆ ಎಂದು ತಿಳಿಯುತ್ತಿದ್ದಂತೆ ಅಖಾಡದಲ್ಲಿ ಇದರ ವೇಗಕ್ಕೆ ಮರುಳಾಗಿದ್ದ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ ಸೇರಿದಂತೆ ನಾನಾ ಜಿಲ್ಲೆಯ ನೂರಾರು ಜನ ಬಂದು ಇದರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು.
ಅಖಾಡದಲ್ಲಿ ಹುಲಿಯಂತಿದ್ದ ಈ 'ಗಗನ್' ಹೊರಗಡೆ ಮಗುವಿನಂತಿದ್ದ. ಯಾರಿಗೂ ಸಹ ತಿವಿದದ್ದು, ಭಯ ಬೀಳಿಸಿದ ಉದಾಹರಣೆಗಳೇ ಇಲ್ಲ. ಓಟದಲ್ಲಿ ಎಷ್ಟು ಫೇಮಸ್ ಆಗಿತ್ತೋ ತನ್ನ ಸೌಮ್ಯತೆಯಿಂದಲೂ ಜನರನ್ನು ಸೆಳೆದಿತ್ತು.
ದೂರದ ಸಂಬಂಧಿ ಸತ್ತರೆ ಜನರು ಈಗ ನೋಡಲು ಬರುವುದು ಕಷ್ಟ. ಆದರೆ 15-20 ವರ್ಷ ಬದುಕುವ, ಅಖಾಡದಲ್ಲಿ ನೋಡಿದ ಒಂದೆರಡು ದಿನದ ಪ್ರೀತಿಗೆ ಎತ್ತನ್ನು ನೋಡೋವುದಕ್ಕೆ ರಾಜ್ಯದ ನಾನಾ ಭಾಗಗಳಿಂದ ನೂರಾರು ಜನ ಬಂದಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ.












Click it and Unblock the Notifications