ಈ ಒಗ್ಗಟ್ಟು ಎಷ್ಟು ದಿನ, ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ?: ಕಾಂಗ್ರೆಸ್ ಪ್ರಶ್ನಿಸಿದ ಸಿಟಿ ರವಿ
ಚಿಕ್ಕಮಗಳೂರು, ಆಗಸ್ಟ್ 3 : ರಾಜ್ಯದಲ್ಲಿ ಮಳೆಯಿಂದ 13ಜನ ಮೃತಪಟ್ಟಿದ್ದಾರೆ. ಈ ಹೊತ್ತಿನಲ್ಲಿ ಸಿದ್ಧರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಿದ್ದು ಎಷ್ಟು ಸರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸಂವೇದನಾ ಶೀಲತೆ ಕಳೆದುಕೊಂಡಿದೆ ಎಂದ ಅವರು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರು ಬಂದಿದ್ದಾರೆ. ರಾಜ್ಯದ ಜನ ಸಂಕಷ್ಟದಲ್ಲಿದ್ದಾಗ ಹಾಡಿ ಹೋಗಳೋದು ಮಾನವೀಯತೆ ಇರುವರಿಗೆ ಶೋಭೆ ತರುವುದಿಲ್ಲ ಎಂದರು.
ರಾಜಕೀಯಕ್ಕೆ 'ಸಿದ್ದರಾಮೋತ್ಸವ' ನೀಡಿದ ಮೂರು ಸಂದೇಶಗಳು!
ಬಿಜೆಪಿ ಸರಕಾರ ಮೂರು ವರ್ಷ ತುಂಬಿದ್ದಕ್ಕೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರವೀಣ್ ಹತ್ಯೆ ಹಿನ್ನಲೆಯಲ್ಲಿ ಎಲ್ಲರೂ ಒಮ್ಮತದ ನಿರ್ಧಾರ ಮಾಡಿ ಕಾರ್ಯಕ್ರಮ ರದ್ದು ಮಾಡಿದೆವು. ಆದರೆ ಅಂದು ನಮ್ಮನ್ನು ಪ್ರಶ್ನಿಸಿದ್ದರು, ಇಂದು ಸೂತಕದ ಮನೆಯಲ್ಲಿ ಸಂಭ್ರಮ ಎಂದು ಕೆಲವರಿಗಾದರೂ ಅನಿಸಬೇಕಿತ್ತು. ಆದರೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಶುಭ ಹಾರೈಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟು ಎಷ್ಟು ದಿನ ಇರುತ್ತದೆ ಎನ್ನುವುದು ಪ್ರಶ್ನಾರ್ಥಕವಾಗಿದೆ. ಇವತ್ತು ಕೈಹಿಡಿದು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇವರೇ ಪರಮೇಶ್ವರ್ ರನ್ನು ಸೋಲಿಸಿದರು. ರಾಮಮಂದಿರ ಕಟ್ಟುವಾಗ ಶಾಲೆಕಟ್ಟಿ ಎನ್ನುತ್ತಿದ್ದರು. ಆದರೆ ಗುಡ್ಡಕುಸಿದು, ಅತಿವೃಷ್ಟಿಯಿಂದ ಹತ್ತಾರು ಜನಪ್ರಾಣ ಕಳೆದುಕೊಂಡಿದ್ದಾರೆ. ನೂರು ಕೋಟಿ ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ. ಅದೇ ಹಣದಲ್ಲಿ ಜನರ ಬದುಕು ಕಟ್ಟಿಕೊಡಬಹುದಿತ್ತು. ಆ ಜನ ಸಾಯುವರೆಗೂ ಇವರನ್ನು ಪೂಜೆ ಮಾಡುತ್ತಿದ್ದರು. ಸಂವೇದನಾಶೀಲತೆ ಇಲ್ಲದ ಸ್ಥಿತಿಗೆ ಕಾಂಗ್ರೆಸ್ ಎಲ್ಲಾ ನಾಯಕರು ಬಂದಿರುವುದು ದುರಾದೃಷ್ಟಕರ. ವಿವೇಚನೆ ಇಲ್ಲದಿರುವುದು ಕಾಂಗ್ರೆಸ್ ಪಕ್ಷದ ಅವನತಿಗೆ ಸಾಕ್ಷಿಯಾಗಿದೆ ಎಂದರು.
ಬೊಮ್ಮಾಯಿ ರಾಜ್ಯಕ್ಕೆ ಮುಖ್ಯಮಂತ್ರಿನಾ, ಧರ್ಮಕ್ಕೋ: ಸಿದ್ದರಾಮಯ್ಯ ಪ್ರಶ್ನೆ
ರಾಜ್ಯದಲ್ಲಿ ಕೋಮುಗಲಭೆ ಹೆಚ್ಚಾದರೇ, ವೈಚಾರಿಕ ಕಾರಣಕ್ಕೆ ಹತ್ಯೆಯಾದರೇ ಅದರ ಹೊಣೆ ಸಿದ್ಧರಾಮಯ್ಯ ಹೊರಬೇಕು. ಪಿಎಫ್ಐ ಮತ್ತು ಎಸ್ಡಿಪಿಐ ಬಿಜೆಪಿ ಬೆಳೆಸಿದ್ದರೇ ಕಾಂಗ್ರೆಸ್ ಸರ್ಕಾರ. ಅವರ ಸರಕಾರದ ಅವಧಿಯಲ್ಲಿ 2,500 ಜನರ ಕೇಸ್ ವಾಪಸ್ ಪಡೆದುಕೊಂಡಿತು. ಪಿಎಫ್ಐಗೂ ನಿಮಗೂ ಇರುವ ಸಂಬಂಧ ಏನು ಎಂದು ಪ್ರಶ್ನಿಸಿದರು.
ಪಿಎಫ್ಐ ಪ್ರಕರಣ ಹಿಂಪಡೆಯಿರಿ ಎಂದು ನಾವು ಅರ್ಜಿ ಕೊಟ್ಟಿರಲಿಲ್ಲ, ಬಜರಂಗದಳ, ರೈತಸಂಘ, ಕನ್ನಡಪರ ಸಂಘಟನೆಗಳ ಮೇಲಿನ ಪ್ರಕರಣ ಹಿಂಪಡೆಯಬೇಕೆಂದು ಅರ್ಜಿ ಹಾಕಿದ್ದು, ಪಿಎಫ್ಐ ಕ್ರಿಮಿನಲ್ ಎಂದು ನಿಮ್ಮಗೆ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್, ಪಿಎಫ್ಐ, ಎಸ್ಡಿಪಿಐ ನೆಂಟಸ್ಥನ ಏನೆಂದು ಜಗತ್ತಿಗೆ ಗೊತ್ತಿದೆ. ಪಿಎಫ್ಐ ಟಾರ್ಗೆಟ್ ಬಜರಂಗದಳ, ಆರ್ಎಸ್ಎಸ್, ರಾಷ್ಟ್ರೀಯ ಸಂಘಟನೆಗಳು, ಕಾಂಗ್ರೆಸ್ ಪಿಎಫ್ಐ, ಎಸ್ಡಿಪಿಐ ಎಲ್ಲಾವು ಆರ್ಎಸ್ಎಸ್ ಟಾರ್ಗೆಟ್ ಮಾಡುತ್ತಿವೆ. ಇಬ್ಬರ ಉದ್ದೇಶವು ಒಂದೇ, ಹಾಗಾಗಿ ನೆಂಟಸ್ಥನ ಇದ್ದರೇ ನಿಮ್ಮಿಬ್ಬರಿಗೆ ಇರಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ಜಾಡಿಸಿದರು.