ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂದುವರೆದ ವರುಣನ ಅಬ್ಬರ, ಹೆಬ್ಬಾಳೆ ಸೇತುವೆ 2ನೇ ಬಾರಿ ಮುಳುಗಡೆ
ಚಿಕ್ಕಮಗಳೂರು, ಆಗಸ್ಟ್ 5: ಜಿಲ್ಲೆಯಲ್ಲಿ ಮುಂಗಾರು ಮಳೆ ಮತ್ತೆ ಅಬ್ಬರಿಸುತ್ತಿದ್ದು, ಮಲೆನಾಡು ಭಾಗದಲ್ಲಿ ಹರಿಯುವ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಎಡಬಿಡದೇ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಸಿದ್ಧ ಹೆಬ್ಬಾಳೆ ಸೇತುವೆ ವರ್ಷದಲ್ಲಿ ಎರಡನೇ ಬಾರಿಗೆ ಮುಳುಗಡೆಯಾಗಿದೆ.
ಕಳೆದ ತಿಂಗಳ ಮೊದಲೆರಡು ವಾರ ಅಬ್ಬರಿಸಿದ್ದ ಮಳೆ ಸ್ವಲ್ಪಮಟ್ಟಿಗೆ ಬಿಡುವು ನೀಡಿತ್ತು. ಆದರೆ ಮತ್ತೆ ಕಳೆದ 2-3 ದಿನ ಗಳಿಂದ ಜಿಲ್ಲಾದ್ಯಂತ ಮತ್ತೆ ಅಬ್ಬರಿಸುತ್ತಿದ್ದು, ಶುಕ್ರವಾರವೂ ನಿರಂತರ ಮಳೆಯಾಗಿದೆ. ಕಡೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಗೆ ನಿಡುವಳ್ಳಿ ಗ್ರಾಮದ ಮನೆಗಳಿಗೆ ನೀರುನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಹಾನಿಯಾಗಿವೆ. ಭಾರಿ ಮಳೆಯಿಂದ ರಾತ್ರಿಯೆಲ್ಲ ಜನರು ಪರದಾಡಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಗ್ರಾಮದ ಮುಖ್ಯ ರಸ್ತೆಯನ್ನು ಬಗೆದು ನೀರು ಹೊರ ಹಾಕಿದ್ದಾರೆ.
ಮೂಡಿಗೆರೆ ತಾಲ್ಲೂಕು ಬಣಕಲ್ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದ್ದು, ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದೆ. ಗಾಯಾಳುಗಳ ಬಂದಿದ್ದ ಕಾರು ಕೇರಳ ಮೂಲದ್ದಾಗಿದೆ. ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.

ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಭದ್ರಾ ನದಿ ಹರಿವಿನಲ್ಲಿ ಹೆಚ್ಚಳವಾಗಿದ್ದು, ಹೆಬ್ಬಾಳೆ ಸೇತುವೆ ವರ್ಷದಲ್ಲಿ 2ನೇ ಬಾರಿಗೆ ಮುಳುಗಡೆಯಾಗಿದೆ. ಇದರಿಂದ ಹೊರನಾಡು-ಕಳಸ ನಡೆವೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಪರ್ಯಾಯವಾಗಿ ಹಳ್ಳುವಳ್ಳಿ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ.
ಕೃಷಿ ಚಟುವಟಿಕೆಗೆ ಕಂಟಕವಾದ ಮಳೆ
ಇನ್ನೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು ಹಳ್ಳಕೊಳ್ಳಗಳು ತುಂಬಿಕೊಂ ಡಿವೆ. ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆ ಭತ್ತದ ನಾಟಿ ಕಾರ್ಯಕ್ಕೆ ಅಡ್ಡಿಯಾಗಿದೆ. ಇನ್ನೂ ಅಡಿಕೆ, ಕಾಳುಮೆಣಸು ಮತ್ತು ಕಾಫಿಗೆ ಕೊಳೆರೋಗದ ಭೀತಿ ಎದುರಾಗಿದೆ.

ಎಲ್ಲಿಲ್ಲಿ ಮಳೆ
ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾ ಲ್ಲೂಕುಗಳಲ್ಲಿ ಮಳೆ ಜೋರಾಗಿದ್ದು, ಬಯಲು ಪ್ರದೇಶವಾದ ಚಿಕ್ಕಮಗಳೂರು ತಾಲೂಕಿನ ಕೆಲವು ಹೋಬಳಿ ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲೂಕುಗಳಲ್ಲಿ ಸಾಧರಣ ಮಳೆಯಾಗುತ್ತಿದೆ. ಕಳೆದ 3-4 ದಿನಗಳಿಂದ ಮಳೆಯಾಗುತ್ತಿದ್ದು, ಮುಂದಿನ 2-3 ದಿನಗಳಲ್ಲೂ ಮಳೆ ಮುಂದೂವರೆಯಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮುಂಜಾಗೃತ ಕ್ರಮವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದೆ.












Click it and Unblock the Notifications