ಚಿಕ್ಕಮಗಳೂರು: ಮಳೆ ಅಬ್ಬರಕ್ಕೆ ಕೊಚ್ಚಿ ಹೋಯ್ತು ಕಾರು, ಸಾವು-ನೋವು- 2 ತಾಲೂಕಿಗೆ ರಜೆ
ಚಿಕ್ಕಮಗಳೂರು ಆಗಸ್ಟ್ 10: ಜಿಲ್ಲೆಯಲ್ಲಿ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ. ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದಾರೆ. ಮಳೆಯಿಂದ ಕೆಲವು ಕಡೆ ಸಾವುಗಳು ಸಂಭವಿಸಿವೆ.
ಮಲೆನಾಡು ಭಾಗದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಸೋಮವಾರ ರಾತ್ರಿಯಿಡಿ ಸುರಿದ ಮಳೆ ಮಂಗಳವಾರ ಬೆಳಗ್ಗೆ ಮಧ್ಯಾಹ್ನದ ವರೆಗೂ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿತ್ತು, ಮತ್ತೆ ಸಂಜೆ ವೇಳೆಗೆ ಬಿರುಸು ಪಡೆದುಕೊಂಡಿತ್ತು. ಭಾರಿ ಪ್ರಮಾಣದಲ್ಲಿ ಗಾಳಿ ಬೀಸುತ್ತಿದ್ದು, ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಸ್ಥಳೀಯರ ಒತ್ತಡಕ್ಕೆ ಮಣಿದು ಕ್ಷೇತ್ರ ಶಿಕ್ಷಣಾಧಿಕಾರಿ ಮೂಡಿಗೆರೆ ಮತ್ತು ಕಳಸ ತಾಲೂಕಿನಲ್ಲಿ ಒಂದರಿಂದ 10ನೇ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಬುಧವಾರ 1ರಿಂದ 10ನೇ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ. ಬುಧವಾರದ ಪರಿಸ್ಥಿತಿ ನೋಡಿಕೊಂಡು ಗುರುವಾರ ರಜೆ ನೀಡುವ ಬಗ್ಗೆ ತೆಗೆದುಕೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಕೆ.ತಲಗೂರು ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಇಬ್ಬರ ಸಾವನ್ನಪ್ಪಿದ್ದಾರೆ. ಮಲಗಿದ್ದ ವೇಳೆ ಮನೆ ಪಕ್ಕದಲ್ಲಿದ್ದ ಬೃಹತ್ ಮರ ಬಿದ್ದ ಪರಿಣಾಮ ಸರಿತಾ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಚಂದ್ರಮ್ಮ ಕೊನೆಯುಸಿರೆಳೆದಿದ್ದಾರೆ. ಸರಿತಾ-ಚಂದ್ರಮ್ಮ ಸಂಬಂಧಿಗಳಾಗಿದ್ದು, ಅಕ್ಕ-ಪಕ್ಕದ ಮನೆಯವರು ಎಂದು ತಿಳಿದುಬಂದಿದೆ. ಸರಿತಾರವರ ಇಬ್ಬರು ಮಕ್ಕಳು ಸುನೀಲ್, ದೀಕ್ಷಿತ್ ಕೂಡ ಮರ ಬಿದ್ದಾಗ ಮನೆಯಲ್ಲೇ ಇದ್ದರಾದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನೀರಲ್ಲಿ ಕೊಚ್ಚಿ ಹೋದ ಶ್ರಾವಣ ಹಬ್ಬಕ್ಕೆ ಬಂದಿದ್ದ ವ್ಯಕ್ತಿ
ಭಾರಿ ಪ್ರಮಾಣದಲ್ಲಿ ಮಳೆ ಮಲೆನಾಡು ಭಾಗದ ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇತ್ತೀಚೆಗೆ ಕಾಫಿತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿ ಮೇಲೆ ಮರಬಿದ್ದು ಮೃತಪಟ್ಟಿದ್ದಳು. ಶಾಲೆಯಿಂದ ಮನೆಗೆ ತೆರಳುತ್ತಿದ್ದ 1ನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ ಹಳ್ಳದಲ್ಲಿ ಕೊಚ್ಚಿಹೋಗಿದ್ದು ಇದುವರೆಗೂ ಪತ್ತೆಯಾಗಿಲ್ಲ. ಈ ಘಟನೆ ಮಾಸುವ ಮುನ್ನವೇ ಶ್ರಾವಣ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಕಾರು ಹಳ್ಳದಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ.
ನರಸಿಂಹರಾಜಪುರ ತಾಲ್ಲೂಕು ಅರಿಶಿನಗೆರೆಯ ಪ್ರಸನ್ನ ಎಂಬುವರು ಶ್ರಾವಣ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ದಾಟಿಸಲು ಮುಂದಾಗಿದ್ದು, ಈ ವೇಳೆ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಕಾರು ಕೊಚ್ಚಿಹೋಗಿದ್ದು, ಕಾರಿನಲ್ಲಿದ್ದ ಪ್ರಸನ್ನ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನರಸಿಂಹರಾಜಪುರ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನೀರಿನ ರಭಸಕ್ಕೆಕೊಚ್ಚಿ ಹೋಗುತ್ತಿದ್ದವರ ರಕ್ಷಣೆ
ಕಡೂರು ತಾಲ್ಲೂಕು ಸಖರಾಯಪಟ್ಟಣ ಪಿಳ್ಳೇನಹಳ್ಳಿ ಸಮೀಪದ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಮಸಣದಹಳ್ಳಿ ಬಳಿ ತುಂಬಿ ಹರಿಯುತ್ತಿದ್ದು ಹಳ್ಳ ದಾಟಿಸಲು ಹೋಗಿ ಪೇಚೆಗೆ ಸಿಲುಕಿಕೊಂಡಿದ್ದರು. ಕೇತುಮಾರನಹಳ್ಳಿ ಗಿರೀಶ್ ಎಂಬುವರಿಗೆ ಸೇರಿದ ಕಾರು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ಕಾರಿನ ಗಾಜುಗಳನ್ನು ಒಡೆದು ಹಗ್ಗಕಟ್ಟಿ ಜೆಸಿಬಿ ಮೂಲಕ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

ಗುಡ್ಡ ಕುಸಿತ, ಕಾಫಿ ತೋಟ ಸರ್ವನಾಶ
ಮಳೆ ಅಬ್ಬರಕ್ಕೆ ಕೊಪ್ಪ, ಶೃಂಗೇರಿ ರಾಜ್ಯ ಹೆದ್ದಾರಿ ಉಳುಮೆ ಬಳಿ ಬಿರುಕು ಕಾಣಿಸಿಕೊಂಡಿದ್ದು, ರಸ್ತೆ ಕುಸಿಯುವ ಭೀತಿ ಎದುರಾಗಿದ್ದು, ಪ್ರಯಾಣಿಕರ ಮುಂಜಾಗೃತ ಕ್ರಮವಾಗಿ ಬಿರುಕು ಬಿಟ್ಟ ರಸ್ತೆಗೆ ಕೆಂಪುಪಟ್ಟಿಯನ್ನು ಕಟ್ಟಿ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಚಿಕ್ಕಮಗಳೂರು ತಾಲ್ಲೂಕು ತಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ಅಣ್ಣಪ್ಪಶೆಟ್ಟಿ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿತೋಟ ಸಂಪೂರ್ಣ ನಾಶವಾಗಿದ್ದು, ತೋಟದಲ್ಲಿ ಹಳ್ಳಕೊಳ್ಳಗಳು ಸೃಷ್ಟಿಯಾಗಿವೆ. ಕಾಫಿತೋಟ ಮಣ್ಣು ಪಾಲಾಗಿದ್ದು ತೋಟದ ಮಾಲೀಕ ಕಂಗಲಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿ ಭೇಟಿ ನೀಡಿ ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

ಪ್ರವಾಹದ ಆತಂಕ
ಮಲೆನಾಡು ಭಾಗದಲ್ಲಿ ಹರಿಯುವ ನದಿಗಳು ತುಂಬಿ ಹರಿಯುತ್ತಿದ್ದು, ನದಿಪಾತ್ರದ ಜನರು ಜೀವಭಯದಲ್ಲಿ ಬದುಕುತ್ತಿದ್ದಾರೆ. ಮನೆಯೊಳಗೆ ಪ್ರವಾಹದ ನೀರು ಯಾವಾಗ ಬರುತ್ತದೋ ಎನ್ನುವ ಆತಂಕ ಅವರನ್ನು ಕಾಡುತ್ತಿದೆ. ಬಾಳೆಹೊನ್ನೂರು ಭದ್ರಾನದಿ ಸೇತುವೆ ಪಕ್ಕದಲ್ಲಿ 5ಕ್ಕೂ ಹೆಚ್ಚು ಕುಟುಂಬಗಳು ಆತಂಕದಲ್ಲಿ ದಿನದೂಡುತ್ತಿದ್ದಾರೆ. ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ. ನದಿಪಾತ್ರದ ಜಮೀನುಗಳಿಗೆ ನೀರುನುಗಿದ್ದು ಅಡಕೆ, ಕಾಫಿತೋಟಗಳು ಜಲಾವೃತಗೊಂಡಿವೆ. ಮಳೆ ಕಡಿಮೆಯಾಗುವಂತೆ ಜನರು ದೇವರ ಮೋರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅತಿವೃಷ್ಟಿ ನಿವಾರಣೆಗೆ ಮಳೆ ದೇವರೆಂದು ಖ್ಯಾತಿ ಪಡೆದಿರುವ ಋಷ್ಯಶೃಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಕಿಸಾನ್ ಸೆಲ್ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಅವರಿಗೆ ಪತ್ರ ಬರೆದಿದ್ದು ಅದರಂತೆ ಸಚಿನ್ ಮೀಗಾ ಅವರು ಅತಿವೃಷ್ಟಿ ಕಡಿಮೆಯಾಗುವಂತೆ ಋಷ್ಯಶೃಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದದ್ದಾರೆ.












Click it and Unblock the Notifications